ಮುಂಬೈ: ಅಶ್ವಿನ್ ಮತ್ತು ಪಾಂಡ್ಯ ಎಸೆದ ನೋಬಾಲ್ ಮತ್ತು ಕೆಲ ಕಾರಣಗಳಿಂದ ನಾವು ಸೆಮಿಫೈನಲ್ನಲ್ಲಿ ವಿಂಡೀಸ್ ವಿರುದ್ಧ ಸೋತಿದ್ದೇವೆ ಎಂದು ಟೀಂ ಇಂಡಿಯಾದ ನಾಯಕ ಧೋನಿ ಹೇಳಿದ್ದಾರೆ.
ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಧೋನಿ, ಆ ಎರಡು ನೋಬಾಲ್ಗಳಿಂದ ನನಗೆ ನಿರಾಸೆ ಆಗಿದೆ. ಪಂದ್ಯ ಗೆಲ್ಲಲು ನಾವು ಬಹಳ ಪ್ರಯತ್ನ ಪಟ್ಟಿದ್ದೇವು. ಅಷ್ಟೇ ಅಲ್ಲದೇ ಆ ಪಿಚ್ ಸ್ಪಿನ್ನರ್ಗಳಿಗೆ ಸಹ ಸಹಕಾರಿಯಾಗಿರಲಿಲ್ಲ. ಆದರೂ ತಂಡ ಸಂಪನ್ಮೂಲ ಬಳಸಿ ಜಯಗಳಿಸಲು ಪ್ರಯತ್ನಿಸಿದೇವು ಎಂದು ಹೇಳಿದರು.
ನೋಬಾಲ್ ಎಸೆಯುವುದನ್ನು ಕಡಿಮೆ ಮಾಡಬೇಕು. ವಿಶೇಷವಾಗಿ ಗೆರೆ ದಾಟಿ ಎಸೆಯುವ ನೋಬಾಲ್ ಕಡಿಮೆ ಮಾಡಲೇಬೇಕು. ಹೆಚ್ಚು ಅಭ್ಯಾಸ ಮಾಡಿದರೆ ಇದನ್ನು ನಿಯಂತ್ರಿಸಬಹುದು. ನೋಬಾಲ್ ಎಸೆಯಲು ಇಷ್ಟವಿಲ್ಲದಿದ್ದರೆ, ಯಾವುದೇ ಕಾರಣಕ್ಕೂ ಯಾರು ನೋಬಾಲ್ ಎಸೆಯುವುದಿಲ್ಲ ಎಂದು ಅವರು ತಿಳಿಸಿದರು.
ಒಂದು ವೇಳೆ ನೋಬಾಲ್ ಎಸೆದ ಬಾಲ್ಗೆ ವಿಕೆಟ್ ಸಿಕ್ಕದೇ ಇದ್ದರೆ ಯಾರು ಅದನ್ನು ದೂಷಣೆ ಮಾಡುವುದಿಲ್ಲ. ಆದರೆ ನೋಬಾಲ್ ಎಸೆತಕ್ಕೆ ಅದ್ಭುತವಾಗಿ ಆಗಿ ಕ್ಯಾಚ್ ಹಿಡಿದರೆ ಮಾತ್ರ ದೂಷಣೆ ಮಾಡುತ್ತೇವೆ ಎಂದರು.
ತೇವ ಪಿಚ್ ಸ್ಪಿನ್ನರ್ಗಳಿಗೆ ಸಹಕಾರಿಯಾಗದ ಕಾರಣ ವೇಗದ ಬೌಲರ್ಗಳನ್ನು ಬಳಸಿ ಜಯ ಗಳಿಸಲು ಮುಂದಾಗಿದ್ದವು. ಈ ಪಂದ್ಯದಲ್ಲಿ ಅಶ್ವಿನ್ 2 ಓವರ್ ಎಸೆದರೆ, ಜಡೇಜಾ ಕೊನೆಯಲ್ಲಿ ಒತ್ತಾಯಪೂರ್ವಕವಾಗಿ ಕೊನೆಯ ಕೋಟಾವನ್ನು ಎಸೆದಿದ್ದಾರೆ. ಇಲ್ಲದಿದ್ದರೆ ಜಡೇಜಾ ಮೂರೇ ಓವರ್ ಎಸೆಯಬೇಕಿತ್ತು ಎಂದು ವಿವರಿಸಿದರು.