ಮುಂಬೈ: ಟಿ 20 ವಿಶ್ವಕಪ್ ಸೆಮಿಫೈನಲ್ನಲ್ಲಿ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಸೋತಿದ್ದೆ ತಡ ತಂಡದ ನಾಯಕ ಎಂಎಸ್ ಧೋನಿ ನಿವೃತ್ತಿ ವಿಚಾರ ಈಗ ಚರ್ಚೆಯಾಗುತ್ತಿದೆ. ಆದರೆ ಧೋನಿ ಮಾತ್ರ ನಿವೃತ್ತಿ ಬಗ್ಗೆ ಪ್ರಶ್ನಿಸಿದ ಪತ್ರಕರ್ತರೊಬ್ಬರಿಗೆ ಜಾಣತನದ ಉತ್ತರ ನೀಡಿದ್ದಾರೆ.
ಪಂದ್ಯದ ಬಳಿಕ ಸುದ್ದಿಗೋಷ್ಠಿ ನಡೆಸುತ್ತಿದ್ದ ಧೋನಿಗೆ ಪತ್ರಕರ್ತರೊಬ್ಬರು ಈ ಸೋಲಿನ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೇಳುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನು ಲಘುವಾಗಿ ಪರಿಗಣಿಸಿದ ಧೋನಿ, ಪತ್ರಕರ್ತರನ್ನು ಕರೆದು ತಮ್ಮ ಬಳಿ ಕೂರಿಸಿಕೊಂಡು, ನಾನು ನಿವೃತ್ತಿ ಹೇಳಬೇಕೆ? ನಾನು ಫಿಟ್ ಆಗಿದ್ದೇನೆ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪತ್ರಕರ್ತರು ನೀವು ನಿವೃತ್ತಿ ಹೇಳುವುದು ಬೇಡ(ನೋ) ಎಂದಿದ್ದಾರೆ. ಈ ಉತ್ತರಕ್ಕೆ ಧೋನಿ ನೀವು ನನಗೆ ಕೇಳಿದ ಪ್ರಶ್ನೆಗೆ ನೀವೇ ಉತ್ತರ ನೀಡಿದ್ದೀರಿ ಎಂದು ಹೇಳಿ ಅವರನ್ನು ಕಳುಹಿಸಿಕೊಟ್ಟಿದ್ದಾರೆ.
ಈ ಜಾಣತನದ ಉತ್ತರ ಮೂಲಕ ಧೋನಿ ತಾವು ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೇಳುವುದಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ. ಇದಲ್ಲದೇ ಕೆಲವು ದಿನಗಳ ಹಿಂದೆ ಭಾರತ ತಂಡದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಸೇರಿದಂತೆ ಧೋನಿ 2019ರ ವರೆಗೂ ತಂಡದ ನಾಯಕರಾಗಿರಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.