ರಾಷ್ಟ್ರೀಯ

ಕೋಲ್ಕತಾ ಫ್ಲೈ ಓವರ್ ದುರಂತ: ಐವಿಆರ್ ಸಿಎಲ್ ಅಧಿಕಾರಿಗಳ ವಿಚಾರಣೆ

Pinterest LinkedIn Tumblr

21

ಹೈದರಾಬಾದ್: ಉತ್ತರ ಕೋಲ್ಕತಾದಲ್ಲಿ ಗುರುವಾರ ಸಂಭವಿಸಿದ ಫ್ಲೈ ಓವರ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಸದಸ್ಯರ ನೇತೃತ್ವದ ಪೊಲೀಸರ ತಂಡ ತನಿಖೆ ನಡೆಸುವ ಸಲುವಾಗಿ ಹೈದರಾಬಾದ್ ಗೆ ಶುಕ್ರವಾರ ಭೇಟಿ ನೀಡಿರುವುದಾಗಿ ತಿಳಿದುಬಂದಿದೆ.

ಈಗಾಗಲೇ ಹೈದರಾಬಾದ್ ಗೆ ಭೇಟಿ ನೀಡಿರುವ ಪಶ್ಚಿಮ ಬಂಗಾಳ ಪೊಲೀಸರ ತಂಡ ಇದೀಗ ಫ್ಲೈ ಓವರ್ ನಿರ್ಮಾಣ ಕಾರ್ಯದಲ್ಲಿ ಒಪ್ಪಂದ ಮಾಡಿಕೊಂಡಿದ್ದ ಹೈದರಾಬಾದ್ ಮೂಲದ ಐವಿಆರ್ ಸಿಎಲ್ ಕಂಪನಿಯ ಅಧಿಕಾರಿಗಳನ್ನು ತನಿಖೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

ಫ್ಲೈ ಓವರ್ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸರು ಹೈದರಾಬಾದ್ ಗೆ ಬಂದಿದ್ದು, ತನಿಖೆ ನಡೆಸುತ್ತಿದ್ದಾರೆಂದು ಹೈದರಾಬಾದ್ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಉತ್ತರ ಕೊಲ್ಕತ್ತಾದ ಬಾಬಾ ಬಜಾರ್‌ನಲ್ಲಿರುವ ಹಳೆಯ ಗಣೇಶ್ ಟಾಕೀಸ್ (ಗಿರೀಶ್ ಪಾರ್ಕ್) ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ವಿವೇಕಾನಂದ ಫ್ಲೈಓವರ್ ಕುಸಿದು ಬಿದ್ದಿತ್ತು. ಫ್ಲೈ ಓವರ್ ಕುಸಿದ ಪರಿಣಾಮ ಸೇತುವೆ ಕೆಳಗಿದ್ದ ಹಲವು ಸುಮಾರು 24 ಮಂದಿ ಸಾವನ್ನಪ್ಪಿ, ಹಲವರು ಅವಶೇಷಗಳಿಡಿ ಸಿಲುಕಿಕೊಂಡಿದ್ದರು. ರಕ್ಷಣಾ ಕಾರ್ಯಾಚರಣೆ ನಡೆಸಿದ್ದ ಅಧಿಕಾರಿಗಳು 90ಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಿದ್ದರು. ಇದೀಕ ರಕ್ಷಣಾ ಕಾರ್ಯಾಚರಣೆ ಸಂಪೂರ್ಣಗೊಂಡಿದೆ ಎಂದು ಹೇಳಿರುವ ಅಧಿಕಾರಿಗಳು ಅವಶೇಷಗಳಿಡಿ ಯಾರೂ ಇಲ್ಲ ಎಂದು ಹೇಳಿದ್ದಾರೆ.

ಇನ್ನು ಘಟನೆ ಕುರಿತಂತೆ ನಿನ್ನೆ ಹೇಳಿಕೆ ನೀಡಿದ್ದ ಫ್ಲೈ ಓವರ್ ನಿರ್ಮಾಣ ಕಾರ್ಯದಲ್ಲಿ ಒಪ್ಪಂದ ಮಾಡಿಕೊಂಡಿದ್ದ ಮೂಲಭೂತ ವ್ಯವಸ್ಥಾ ಐವಿಆರ್ ಸಿಎಲ್ ಕಂಪನಿ, ಪಶ್ಚಿಮ ಬಂಗಾಳ ಸರ್ಕಾರ ನಮಗೆ ಈ ಕೆಲಸವನ್ನು ವಹಿಸಿತ್ತು. ನಾವು ಈ ಕೆಲಸವನ್ನು ಮಾಡುತ್ತಿದ್ದೇವೆ. ಈಗಾಗಲೇ ಇದರ ನಿರ್ಮಾಣ ಕಾರ್ಯವನ್ನು ಶೇ.60-75 ರಷ್ಟು ಮುಕ್ತಾಯಗೊಳಿಸಲಾಗಿದೆ. ಉಳಿದ ಕಾರ್ಯವನ್ನು ಮಾಡಲಾಗುತ್ತಿತ್ತು. ಆದರೆ, ಇಷ್ಟರ ಮಧ್ಯದಲ್ಲೇ ಘಟನೆ ನಡೆದಿರುವುದು ದುರ್ದೈವ.

27 ವರ್ಷಗಳಿಂದ ನಾವು ಸಾಕಷ್ಟು ಸೇತುವೆಗಳನ್ನು ನಿರ್ಮಾಣ ಮಾಡಿದ್ದೇವೆ. ಆದರೆ, ಈ ರೀತಿಯಾಗಿ ಎಂದೂ ಆಗಿಲ್ಲ. ಘಟನೆಯಿಂದ ಸಂಸ್ಥೆಕೂಡ ಆಘಾತ ವ್ಯಕ್ತಪಡಿಸಿದೆ. ಫ್ಲೈ ಓವರ್ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕಂಪನಿಯ ಇಬ್ಬರು ಇಂಜಿನಿಯರ್ ಗಳು ಕೂಡ ಕಾಣೆಯಾಗಿದ್ದಾರೆ, ಸೇತುವೆ ಕಾರ್ಯವು ನಿರ್ಮಾಣ ಹಂತದಲ್ಲಿತ್ತು. ನಮಗೆ ತಿಳಿದುಬಂದಿರುವ ಪ್ರಕಾರ. ಸೇತುವೆ ನಿರ್ಮಾಣದ ವೇಳೆ ಕಬ್ಬಿಣದ ತೊಲೆಯೊಂದನ್ನು ಹಾಕಲಾಗಿತ್ತು. ಇದು ಕಾಣೆಯಾಗಿತ್ತು. ಸೇತುವೆ ಕುಸಿತಕ್ಕೆ ಇದೇ ಕಾರಣವಾಗಿರಬಹುದು ಎಂದು ಹೇಳಿತ್ತು.

ಪ್ರಕರಣ ಸಂಬಂಧ ಕೋಲ್ಕತಾ ಪೊಲೀಸರು ಒಪ್ಪಂದ ಮಾಡಿಕೊಂಡಿದ್ದ ಐವಿಆರ್ ಸಿಎಲ್ ಕಂಪನಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಸೆಕ್ಷನ್ 304 (ಕೊಲೆ ಪ್ರಮಾಣವಲ್ಲದ ಖಂಡನೀಯ ನರಹತ್ಯೆ), 308 (ಖಂಡನೀಯ ನರಹತ್ಯೆ ಯತ್ನ) ಮತ್ತು 407ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿತ್ತು. ಇದೀಗ ತನಿಖೆ ನಡೆಸಲು ಹೈದರಾಬಾದ್ ಗೆ ಭೇಟಿ ನೀಡಿದ್ದು, ಐವಿಆರ್ ಸಿಎಲ್ ಕಂಪನಿಯ ಅಧಿಕಾರಿಗಳನ್ನು ತನಿಖೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

Write A Comment