ನವದೆಹಲಿ: ಬ್ಯಾಂಕ್ಗಳಿಗೆ ಸಾಲ ಮೊತ್ತ ಮರುಪಾವತಿಗೆ ಡೀಲ್ ಕುದುರಿಸುವ ಕಸರತ್ತನ್ನು ಉದ್ಯಮಿ ವಿಜಯ್ ಮಲ್ಯ ವಿದೇಶದಿಂದಲೇ ಆರಂಭಿಸಿದ್ದು, 4 ಸಾವಿರ ಕೋಟಿ ರೂ. ಮರುಪಾವತಿ ಮಾಡಿ ಪ್ರಕರಣ ಮುಕ್ತಾಯಗೊಳಿಸುವ ಆಫರ್ ನೀಡಿದ್ದಾರೆ. ಬುಧವಾರ ಈ ಸಂಬಂಧ ಸುಪ್ರೀಂಕೋರ್ಟ್ನಲ್ಲಿ ಮಲ್ಯ ಪರ ವಕೀಲರು ಸೀಲ್ ಮಾಡಿದ ಕವರ್ನಲ್ಲಿ ಪ್ರಸ್ತಾವನೆ ಸಲ್ಲಿಸಿದರು. 2000 ಕೋಟಿ ರೂ. ತಕ್ಷಣ ಪಾವತಿ ಮಾಡಿ ನಂತರ ಸೆಪ್ಟೆಂಬರ್ ಒಳಗೆ ಮತ್ತೆ 2000 ಕೋಟಿ ರೂ. ಪಾವತಿ ಮಾಡುತ್ತೇನೆ ಎಂದು ಮಲ್ಯ ಹೇಳಿದ್ದಾರೆ. ಈ ಪ್ರಸ್ತಾವನೆಗೆ ಪ್ರತಿಕ್ರಿಯಿಸಲು ಬ್ಯಾಂಕ್ಗಳ ಒಕ್ಕೂಟಕ್ಕೆ ಸುಪ್ರೀಂಕೋರ್ಟ್ ಒಂದು ವಾರದ ಕಾಲಾವಕಾಶ ನೀಡಿದೆ. ಅಲ್ಲದೆ ಮುಂದಿನ ವಿಚಾರಣೆಯನ್ನು ಏಪ್ರಿಲ್ 7ಕ್ಕೆ ಮುಂದೂಡಿದೆ.
ಈ ಪ್ರಸ್ತಾವನೆಯನ್ನು ಬ್ಯಾಂಕ್ಗಳು ಒಪ್ಪಿಕೊಳ್ಳುತ್ತವೆಯೇ ಎಂಬುದು ಸದ್ಯದ ಪ್ರಶ್ನೆಯಾಗಿದೆ. ಕಿಂಗ್ಫಿಷರ್ ಏರ್ಲೈನ್ಸ್ ಮತ್ತು ಇತರ ಕಂಪನಿಗಳಿಗೆ ನೀಡಿದ ಸಾಲದ ಅಸಲು ಮತ್ತು ಬಡ್ಡಿ ಸೇರಿ 9 ಸಾವಿರ ಕೋಟಿ ರೂ.ಯನ್ನು ಮಲ್ಯ ಮರು ಪಾವತಿ ಮಾಡಬೇಕಿದೆ. ಆದರೆ ಕೇವಲ 6900 ಕೋಟಿ ರೂ. ಮರುಪಾವತಿ ಬಾಕಿ ಇದೆ ಎಂದು ಮಲ್ಯ ಹಿಂದಿನಿಂದಲೂ ವಾದಿಸುತ್ತಿದ್ದಾರೆ. ಈಗಾಗಲೇ ಬ್ಯಾಂಕ್ಗಳು ಸ್ವತ್ತುಗಳು ಹಾಗೂ ಇತರ ಮೂಲಗಳಿಂದ 1244 ಕೋಟಿ ರೂ. ವಸೂಲು ಮಾಡಿವೆ. ಅಲ್ಲದೆ ಜುಲೈ 2013ರಲ್ಲಿ 600 ಕೋಟಿ ರೂ.ಯನ್ನು ಕರ್ನಾಟಕ ಹೈಕೋರ್ಟ್ಗೆ ಠೇವಣಿ ಇಡಲಾಗಿದೆ. 2014ರಲ್ಲಿ ಯುನೈಟೆಡ್ ಬ್ರೂವರೀಸ್ನ 650 ಕೋಟಿ ರೂ. ಮೌಲ್ಯದ ಷೇರುಗಳನ್ನೂ ಕರ್ನಾಟಕ ಹೈಕೋರ್ಟ್ ವಶಪಡಿಸಿಕೊಂಡಿದೆ. ಇವೆಲ್ಲದರಿಂದ ಈಗಾಗಲೇ ಸುಮಾರು 2500 ಕೋಟಿ ರೂ.ಪಾವತಿ ಮಾಡಲಾಗಿದೆ. ಹೀಗಾಗಿ ಇನ್ನು 400 ಕೋಟಿ ರೂ.ಯನ್ನು ಬ್ಯಾಂಕ್ಗಳು ಮನ್ನಾ ಮಾಡಿ ದಂತಾಗಲಿದೆ ಎಂಬುದು ಮಲ್ಯ ವಾದ. ಅಲ್ಲದೆ ಕೋರ್ಟ್ಗೆ ಪಾವತಿಸಿರುವ ಮೊತ್ತ ಬ್ಯಾಂಕ್ಗಳ ಸಾಲ ಖಾತೆಗೆ ಜಮೆ ಆಗಿಲ್ಲ. ಆ ಮೊತ್ತವನ್ನು ಪರಿಗಣಿಸಿದರೂ 2500 ಕೋಟಿ ರೂ. ಸಾಲವನ್ನು ಬ್ಯಾಂಕ್ಗಳು ಮನ್ನಾ ಮಾಡಬೇಕಾಗುತ್ತದೆ.
2000 ಕೋಟಿ ರೂ ಕೊಡುತ್ತೇನೆ ಎಂದಿದ್ದ ಮಲ್ಯ!: ಪ್ರಕರಣ ತೀವ್ರಗೊಳ್ಳುತ್ತಿದ್ದಂತೆಯೇ ಕೆಲವು ದಿನಗಳ ಹಿಂದೆ ಬ್ಯಾಂಕ್ಗಳ ಒಕ್ಕೂಟದ ಪ್ರತಿನಿಧಿಗಳನ್ನು ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಸಂರ್ಪಸಿದ್ದ ಮಲ್ಯ, 2000 ಕೋಟಿ ರೂ. ಡೀಲ್ಗೆ ಪ್ರಸ್ತಾವನೆ ಇಟ್ಟಿದ್ದರು ಎನ್ನಲಾಗಿದೆ.
ಮಾಧ್ಯಮಗಳ ವಿರುದ್ಧ ಕಿಡಿ
ಪ್ರಸ್ತಾವನೆಯನ್ನು ಗೌಪ್ಯವಾಗಿಡಬೇಕು ಎಂದು ಮಲ್ಯ ವಕೀಲ ಸಿ.ಎಸ್.ವೈದ್ಯನಾಥನ್ ಕೇಳಿಕೊಂಡಿದ್ದರು. ಅಲ್ಲದೆ ಮಾಧ್ಯಮಗಳು ಮಲ್ಯ ಹೆಸರಿಗೆ ಮಸಿ ಬಳಿಯಲು ಯತ್ನಿಸುತ್ತಿವೆ ಎಂದೂ ಅವರು ಆರೋಪಿಸಿದರು. ಆದರೆ ಮಾಧ್ಯಮಗಳು ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ಕೆಲಸ ಮಾಡುತ್ತಿವೆ. ಮಲ್ಯ ಮರುಪಾವತಿ ಮಾಡಬೇಕೆನ್ನುವುದೇ ಮಾಧ್ಯಮಗಳ ಹಿತಾಸಕ್ತಿಯಾಗಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.