ಚಂಡೀಘಡ: 2007ರ ವಿಶ್ವಕಪ್ ಫೈನಲ್ ಪಂದ್ಯ ಬಹುಶಃ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಮರೆಯಲಾಗ ಕ್ಷಣ ಎಂದೇ ಹೇಳಬೇಕು. ಏಕೆಂದರೆ ಚೊಚ್ಚಲ ಟಿ20 ವಿಶ್ವಕಪ್ ಸರಣಿಯನ್ನು ಭಾರತ ಗೆದ್ದ ಅವಿಸ್ಮರಣೀಯ ಕ್ಷಣವದು.
ಆ ಪಂದ್ಯದಲ್ಲಿ ನಿಜಕ್ಕೂ ಹೀರೋ ಆಗಿ ಮಿಂಚಿದ್ದು ಮಾತ್ರ ಹರ್ಯಾಣದ ಕ್ರಿಕೆಟರ್ ಜೋಗಿಂದರ್ ಶರ್ಮಾ. ಅಂತಿಮ ಓವರ್ ನಲ್ಲಿ ಪಾಕಿಸ್ತಾನ ಗೆದ್ದೇ ಬಿಟ್ಟಿತು ಎನ್ನುವ ಸಮಯದಲ್ಲಿ ಪಾಕಿಸ್ತಾನ ಪ್ರಭಾವಿ ಬ್ಯಾಟ್ಸಮನ್ ಮಿಸ್ಬಾ ಉಲ್ ಹಕ್ ಅವರ ವಿಕೆಟ್ ಕಬಳಿಸುವ ಮೂಲಕ ಭಾರತಕ್ಕೆ ಐತಿಹಾಸಿಕ ವಿಶ್ವಕಪ್ ಗೆದ್ದು ಕೊಟ್ಟ ಕ್ರಿಕೆಟಿಗ ಇವರು. ಇತ್ತೀಚಿನ ದಿನಗಳಲ್ಲಿ ಜೋಗಿಂದರ್ ಶರ್ಮಾ ಕ್ರಿಕೆಟ್ ನಿಂದ ಮತ್ತು ಮಾಧ್ಯಮಗಳಿಂದ ದೂರವುಳಿದಿದ್ದರು. ಇಂತಹ ಪ್ರತಿಭಾನ್ವಿತ ಕ್ರಿಕೆಟಿಗ ಎಲ್ಲಿದ್ದಾನೆ.. ಏನು ಮಾಡುತ್ತಿದ್ದಾನೆ ಎಂದು ಕೆದಕಿದಾಗ ಆಶ್ಚರ್ಯಕರ ಮಾಹಿತಿಯೊಂದು ಬಹಿರಂಗವಾಗಿದೆ.
2007ರ ಟಿ20 ವಿಶ್ವಕಪ್ ಫೈನಲ್ ಪಂದ್ಯದ ಹೀರೋ ಜೋಗಿಂದರ್ ಶರ್ಮಾ ಇದೀಗ ಹರ್ಯಾಣದ ಟಾಪ್ ಕಾಪ್. ಅರ್ಥಾತ್ ಹರಿಯಾಣದಲ್ಲಿ ಜೋಗಿಂದರ್ ಶರ್ಮಾ ಪೊಲೀಸ್ ಉಪ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಈ ಫೋಟೊಗಳು ಹರಿದಾಡುತ್ತಿದ್ದು, ವೈರಲ್ ಆಗಿದೆ. ಕ್ರಿಕೆಟ್ ನಲ್ಲಿ ಕಂಡ ಜೋಗಿಂದರ್ ಶರ್ಮಾ ಇವರೇನಾ ಎನ್ನುವಷ್ಟರ ಮಟ್ಟಿಗೆ ಶರ್ಮಾ ಬದಲಾಗಿದ್ದಾರೆ.
2007ರ ವಿಶ್ವಕಪ್ ಬಳಿಕ ಜೋಗಿಂದರ್ ಶರ್ಮಾ ಅವರಿಗೆ ಹರ್ಯಾಣ ಸರ್ಕಾರದಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದ್ದು, ಹರ್ಯಾಣ ಸರ್ಕಾರ ಅವರಿಗೆ 21 ಲಕ್ಷ ಹಣ ನೀಡಿ ಗೌರವಿಸಿದೆ. ಅಲ್ಲದೆ 2007 ಅಕ್ಟೋಬರ್ ನಲ್ಲಿ ಹರ್ಯಾಣದ ಡಿಎಸ್ ಪಿಯಾಗಿ ಜೋಗಿಂದರ್ ಶರ್ಮಾ ಅವರನ್ನು ನೇಮಿಸಿ ಆದೇಶ ಹೊರಡಿಸಿದೆ.
ಒಟ್ಟಾರೆ ಕ್ರಿಕೆಟರ್ ಆಗಿ ಭಾರತಕ್ಕೆ ವಿಶ್ವಕಪ್ ತಂದು ಕೊಟ್ಟ ತಂಡದಲ್ಲಿ ಪ್ರಮುಖರಾಗಿದ್ದ ಜೋಗಿಂದರ್ ಶರ್ಮಾ ಇದೀಗ ಹರ್ಯಾಣದ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುವ ಮೂಲಕ ಎಲ್ಲರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಭಾರತ ಪರ 4 ಏಕದಿನ, 4 ಟಿ20 ಪಂದ್ಯ ಆಡಿರುವ ಅವರು, ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನೂ ಪ್ರತಿನಿಧಿಸಿದ್ದಾರೆ. 32 ವರ್ಷದ ಜೋಗಿಂದರ್ ಶರ್ಮ ಕಳೆದ ವರ್ಷ ದೇಶೀ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದರು.