ಮೀರ್ಪುರ್: “ಕ್ರಿಕೆಟ್ ಸೇರಿದಂತೆ ಪ್ರತಿಯೊಂದು ವಿಷಯದ ಬಗ್ಗೆ ಅಭಿಪ್ರಾಯ ಹೇಳಲು ಭಾರತದಲ್ಲಿ ಸ್ವಾತಂತ್ರ್ಯವಿದೆ. ಇಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಇದ್ದೇ ಇದೆ. ಹಾಗೆ ಆಡಬೇಕು, ಹೀಗೆ ಆಡಬೇಕು, ಹಾಗೆ ಮಾಡಬೇಕಿತ್ತು, ಹೀಗೆ ಮಾಡಬೇಕಿತ್ತು ಎಂದು ಎಲ್ಲರು ಹೇಳುತ್ತಾರೆ. ಆದರೆ, ಟಿವಿಯಲ್ಲಿ ಕ್ರಿಕೆಟ್ ನೋಡುವುದು ತುಂಬಾ ಸುಲಭವಾಗಿದ್ದರೂ, ಕ್ರಿಕೆಟ್ ಗ್ರೌಂಡ್ ನಲ್ಲಿ ಕ್ರಿಕೆಟ್ ಆಡುವುದು ಇಷ್ಟು ಸುಲಭವಲ್ಲ “-ಹೀಗಂತ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.
ಭಾನುವಾರ ನಡೆದ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 8 ವಿಕೆಟ್ಗಳ ಗೆಲವು ಸಾಧಿಸಿ 6 ನೇ ಬಾರಿ ಏಷ್ಯಾ ಕಪ್ ತನ್ನದಾಗಿಸಿಕೊಂಡ ನಂತರ ಮಾಧ್ಯಮಗಳನ್ನುದ್ದೇಶಿಸಿ ಧೋನಿ ಮಾತನಾಡಿದ್ದಾರೆ.
ವಿಮರ್ಶೆಗಳು ಸಾಕಷ್ಟು ಕೇಳಿ ಬರಲಿವೆ. ಯಾರಾದರೂ ನನ್ನಲ್ಲಿ ನೀನೇನು ಮಾಡಬೇಕೆಂದ್ದಿದ್ದೀಯಾ? ಎಂದು ಕೇಳಿದರೆ, ಭಾರತಕ್ಕಾಗಿ ಆಡುವುದು ನನ್ನ ಮೊದಲ ಆಯ್ಕೆ. ಇನ್ನೊಂದು ದೇಶಕ್ಕಾಗಿ ನಾನೆಂದೂ ಆಡಲಾರೆ ಎಂದು ಉತ್ತರಿಸುತ್ತೇನೆ.
ಯಾವತ್ತೂ ಸಂಯಮವನ್ನು ಪಾಲಿಸಬೇಕು. ಟೀಕೆಗೊಳಗಾದ ಅದರ ಬಗ್ಗೆಯೇ ತಲೆಕೆಡಿಸಿಕೊಳ್ಳುವುದಾಗಲೀ, ಹೊಗಳಿದಾಗ ತುಂಬಾನೇ ಎತ್ತರಕ್ಕೇರುವುದಾಗಲೀ ಆಗಬಾರದು. ಮಾಧ್ಯಮಗಳೂ ಅದನ್ನೇ ಮಾಡಬೇಕು. ಅವುಗಳು ನಿಮ್ಮನ್ನು ಮೇಲಕ್ಕಿತ್ತಿದ್ದರೂ, ನಂತರ ನಿಮ್ಮನ್ನು ಕೆಳಗೆ ಇಳಿಸಿ ಬಿಡುತ್ತಾರೆ. ನೀವು ಪ್ಯಾರಚೂಟ್ನಲ್ಲಿ ಮೇಲಿದ್ದರೆ, ನೀವು ಕೆಳಗೆ ಇಳಿಯುವುದನ್ನು ನಿಧಾನಿಸಬಹುದು. ಆದರೆ ನೀವು ಕೆಳಗೆ ಬರಲೇ ಬೇಕು, ಮತ್ತೆ ಮೇಲಕ್ಕೇರಬೇಕು.
ವಿಶ್ವಕಪ್ ಕ್ವಾರ್ಟರ್ ಫೈನಲ್ ನಲ್ಲಿ ಭಾರತ ಸೋತ ನಂತರ ಬಾಂಗ್ಲಾ ವಿರುದ್ಧ ಪಂದ್ಯಗಳ ಬಗ್ಗೆ ಉಭಯ ರಾಷ್ಟ್ರದ ಜನರು ಭಾರೀ ನಿರೀಕ್ಷೆಗಳನ್ನಿಟ್ಟುಕೊಂಡಿದ್ದರು. ಈ ಬಗ್ಗೆ ಮಾತನಾಡಿದ ಧೋನಿ, ತಪ್ಪಾದ ಗ್ರಹಿಕೆಯಿಂದ ಯಾವುದನ್ನೂ ನೋಡಬಾರದು. ಬಾಂಗ್ಲಾದೇಶದೊಂದಿಗೆ ಸೋತರೆ, ನೀವು ಬಾಂಗ್ಲಾದೇಶದೊಂದಿಗೆ ಸೋತಿದ್ದೀರಿ ಎಂದು ಜನರಾಡಿಕೊಳ್ಳುತ್ತಾರೆ. ಗೆದ್ದರೆ, ಓಹ್, ಪರ್ವಾಗಿಲ್ಲ, ನೀವು ಗೆದ್ದಿದ್ದೀರಿ ಅಷ್ಟೇ ಅಂತಾರೆ. ಯಾವುದೇ ಆಗಿರಲಿ, ಗೆದ್ದ ನಂತರ ನಾವು ಮತ್ತೇನನ್ನೂ ಮನೆಗೆ ತೆಗೆದುಕೊಂಡು ಹೋಗುವುದಿಲ್ಲ.
ಏತನ್ಮಧ್ಯೆ, ಬಾಂಗ್ಲಾದೇಶ ತಂಡದ ಬಗ್ಗೆ ಮಾತನಾಡಿದ ಧೋನಿ, ಆ ತಂಡದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. 2004ರಲ್ಲಿ ಇದ್ದಂತೆ ಇಲ್ಲ ಅವರು. ಅವರಲ್ಲಿ ಒಳ್ಳೆಯ ಆಟಗಾರರಿದ್ದಾರೆ. ಅವರ ಪ್ರದರ್ಶನದಲ್ಲಿ ಅದು ವ್ಯಕ್ತವಾಗಿದೆ ಎಂದಿದ್ದಾರೆ.