ಆಗ್ರಾ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪ್ರಮುಖವಾಗಿ ಮುಸ್ಲಿಮರಿಗೆ ಅಭದ್ರತೆ ಕಾಡುತ್ತಿದೆ ಎಂದು ಖ್ಯಾತ ಗಾಯಕ ಮೊಹಮ್ಮದ್ ರಫಿ ಪುತ್ರ ಶಾಹಿದ್ ರಫಿ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ತಮ್ಮ ತಂದೆಗೆ ಭಾರತ ರತ್ನ ನೀಡಬೇಕೆಂಬ ಒತ್ತಾಯವನ್ನು ಶಾಹಿದ್ ರಫಿ ಪುನರುಚ್ಚರಿಸಿದ್ದಾರೆ. ತಾಜ್ ಸಾಹಿತ್ಯ ಹಬ್ಬದಲ್ಲಿ ಭಾಗವಹಿಸಿ ಮಾತನಾಡಿದ ಶಾಹಿದ್ ರಫಿ, ಪ್ರಸ್ತುತ ದೇಶದಲ್ಲಿ ಗೊಂದಲದ ಸನ್ನಿವೇಶ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.
ಜೆಎನ್ ಯು ವಿವಾದವಾಗಿರಬಹುದು ಅಥವಾ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳಾಗಿರಬಹುದು ಮೋದಿ ನೇತೃತ್ವದ ಆಡಳಿತದಲ್ಲಿ ಮುಸ್ಲಿಮರು ಅಭದ್ರತೆಯ ವಾತಾವರಣ ಎದುರಿಸುತ್ತಿದ್ದಾರೆ, ಕಾಂಗ್ರೆಸ್ ಪಕ್ಷ ನಿಜವಾದ ಪ್ರಜಾಪ್ರಭುತ್ವ, ಜಾತ್ಯಾತೀತತೆ ಇರುವ ಪಕ್ಷವಾಗಿದೆ ಎಂದು ರಫಿ ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಅಸಾವುದ್ದೀನ್ ಓವೈಸಿಯ ಎಂಐಎಂ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಶಾಹಿದ್ ರಫಿ ಕಳೆದ ತಿಂಗಳು ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದರು.