ಮಧುಬನಿ: ಇತ್ತೀಚಿಗಷ್ಟೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಹತ್ಯೆ ಮಾಡುವುದಾಗಿ ಮೊಬೈಲ್ ಮೂಲಕ ಕಾಲ್ ಮಾಡಿ ಬೆದರಿಕೆ ಒಡ್ಡಿದ್ದ ವ್ಯಕ್ತಿಯೋರ್ವನನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಮಧುಬನಿ ಜಿಲ್ಲೆಯ ಪಂಡೌಲ್ನಲ್ಲಿ ಬಂಧಿಸಲಾಗಿದ್ದು ಆತನನ್ನು ಅಜಯ್ ಕುಮಾರ್ ಚೌಧರಿ ಎಂದು ಗುರುತಿಸಲಾಗಿದೆ.
ನವೆಂಬರ್ 27ರ ಮಧ್ಯರಾತ್ರಿ 12 ಗಂಟೆಗೆ ಆತ್ಮಾಹುತಿ ದಾಳಿ ಮಾಡಿ ನಿತೀಶ್ ಕುಮಾರ್ ಅವರನ್ನು ಹತ್ಯೆಗೈಯ್ಯುವುದಾಗಿ ಕೆಲ ಪತ್ರಿಕೆ, ಟಿವಿ ನ್ಯೂಸ್ ಚಾನಲ್ಗಳಿಗೆ ಮೊಬೈಲ್ ಕರೆ ಮಾಡಿ ಆತ ಬೆದರಿಕೆ ಒಡ್ಡಿದ್ದ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟ್ನಾದ ಶ್ರೀಕೃಷ್ಣಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.