ಶ್ರೀನಗರ : ಮೂವರು ಶಸ್ತ್ರಸಜ್ಜಿತ ಉಗ್ರರು ತಂಗಧಾರ್ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ ಘಟನೆ ಬುಧವಾರ ಮುಂಜಾನೆ ನಡೆದಿದೆ.
ಏಳು ಗಂಟೆಗಳ ಕಾಲ ನಡೆದ ತೀವ್ರತರ ಗುಂಡಿನ ಕಾಳಗದಲ್ಲಿ ಭದ್ರತಾ ಪಡೆಗಳು, ಮೂವರೂ ಉಗ್ರರನ್ನು ಕೊಂದಿವೆ. ಘಟನೆಯಲ್ಲಿ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ.
ಕುಪ್ವಾರ್ ಜಿಲ್ಲೆಯ ಸಮೀಪದ ಗಡಿ ನಿಯಂತ್ರಣದ ಬಳಿಯ ತಂಗಧಾರ್ ಸೇನಾ ಶಿಬಿರದ ಮೇಲೆ ಬುಧವಾರ ಮುಂಜಾನೆ 6.15ಕ್ಕೆ ಉಗ್ರರು ದಾಳಿ ನಡೆಸಿದ್ದರು. ‘ಕಲ್ಸುರಿ ಪರ್ವತದ ಕಡೆಯಿಂದ ಶಿಬಿರದ ಮೇಲೆ ದಾಳಿ ನಡೆದಿದೆ’ ಎಂದು ಸೇನಾ ಮೂಲಗಳು ಹೇಳಿವೆ.
7 ಗಂಟೆ ಕಾಳಗ: ಅಲ್ಲದೇ, ಸುಮಾರು ಏಳು ಘಂಟೆಗಳ ಕಾಲ ನಡೆದ ತೀವ್ರತರ ಗುಂಡಿನ ಕಾಳಗದಲ್ಲಿ ಮೂವರು ಉಗ್ರರು ಹಾಗೂ ಒಬ್ಬರು ನಾಗರಿಕರು ಮೃತರಾಗಿದ್ದಾರೆ ಎಂದೂ ಸೇನೆ ಹೇಳಿದೆ.
ದಾಳಿಯಲ್ಲಿ ಚಿಕ್ಕ ಸ್ಫೋಟಕ ಹಾಗೂ ಯುಬಿಜಿಎಲ್ಗಳನ್ನು (ಅಂಡರ್ ಬ್ಯಾರೆಲ್ ಗ್ರೇನೆಡ್ ಲಾಂಚರ್) ಬಳಸಲಾಗಿದೆ ಎಂದೂ ಸೇನಾ ಮೂಲಗಳು ಹೇಳಿವೆ.
ಮೂವರು ಉಗ್ರರು ಸೇನಾ ಶಿಬಿರಕ್ಕೆ ನುಗ್ಗಿದ್ದರು ಎಂದು ಕುಪ್ವಾರ್ ಜಿಲ್ಲಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಇಜಾಜ್ ಅಹ್ಮದ್ ತಿಳಿಸಿದ್ದಾರೆ.
ತಂಗಧಾರ್ ವಲಯವು ಕುಪ್ವಾರ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಸಮೀಪದಲ್ಲಿದ್ದು, ಅಕ್ರಮವಾಗಿ ನುಸುಳಲು ಈ ಮಾರ್ಗ ಬಳಕೆಯಾಗುತ್ತ ಬಂದಿದೆ.