ರಾಷ್ಟ್ರೀಯ

ಮಗನ ಕೊಲೆಗೆ ಸುಪಾರಿ ಕೊಟ್ಟ ತಾಯಿ

Pinterest LinkedIn Tumblr

crimeನಾಗ್ಪುರ್: ಕೆಟ್ಟ ಮಗ ಇರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಗಾದೆ ಮಾತನ್ನು ಸುಳ್ಳಾಗಿಸುವಂತಹ ಪ್ರಕರಣಗಳು ವರದಿಯಾಗುತ್ತಿವೆ. ನೆರೆಯ ಮಹಾರಾಷ್ಟ್ರದ ನಾಗಪುರದಲ್ಲಿ ಕೂಡ ಇಂತಹದೇ ಘಟನೆಯೊಂದು ವರದಿಯಾಗಿದೆ. ಅದೇನೆಂದು ತಿಳಿಯಲು ಮುಂದೆ ಓದಿ.

ವ್ಯಕ್ತಿಯೊಬ್ಬನನ್ನು ಕೊಲೆಗೈದ ಆರೋಪದ ಮೇಲೆ ನಾಗಪುರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು. ಅವರನ್ನು ವಿಚಾರಣೆಗೊಳಪಡಿಸಲಾಗಿ ಬಯಲಾದ ಸತ್ಯವೇನೆಂದರೆ ಈ ಕೊಲೆಯ ಹಿಂದೆ ಇರುವುದು ಮೃತನ ತಾಯಿ. ಸುಫಾರಿ ನೀಡಿ ಮಗನನ್ನು ಕೊಂದು ಹಾಕಿ ಎಂದಿದ್ದಳಂತೆ ಆಕೆ. ಕಾರಣ ಆತನ ಮದ್ಯವ್ಯಸನ.

ಪ್ರತಿನಿತ್ಯ ಕುಡಿದು ಮನೆಗೆ ಬರುತ್ತಿದ್ದ ಮಗ ತಾಯಿಗೆ ಹೊಡೆದು ಬಡಿದು ಹಿಂಸಿಸುತ್ತಿದ್ದ. ಹಣಕ್ಕಾಗಿ ಕೂಡ ಪೀಡಿಸುತ್ತಿದ್ದ. ಆತನಿಂದ ಹಲ್ಲೆಗೊಳಲಾಗಿ ಆಕೆ ಈ ಹಿಂದೆ ಆಸ್ಪತ್ರೆಯಲ್ಲಿ ಕೂಡ ದಾಖಲಾಗಿದ್ದಳು. ಆತನ ವಿಪರೀತ ಕಾಟದಿಂದ ರೋಸಿ ಹೋಗಿದ್ದ ತಾಯಿ ಸುಪಾರಿ ಹಂತಕರಿಗೆ ದುಡ್ಡು ಕೊಟ್ಟು ಸ್ವಂತ ಮಗನನ್ನೇ ಕೊಲೆ ಮಾಡಿಸಿದ್ದಾಳೆ. ಅಕ್ಟೋಬರ್ 31 ರಂದು ಈ ಕೊಲೆ ನಡೆದಿತ್ತು. ಪೋನ್ ಕಾಲ್ ದಾಖಲೆಗಳ ಸಹಾಯದ ಮೇಲೆ ಪೊಲೀಸರು ಈ ಪ್ರಕರಣವನ್ನು ಬಗೆಹರಿಸಿದ್ದಾರೆ.

ಆರೋಪಿ ತಾಯಿಯನ್ನು ಪ್ರತಾಪ್‌‌ ನಗರದ ಲತಾ ವಾಸ್ನಿಕ್ ಎಂದು ಗುರುತಿಸಲಾಗಿದ್ದು ಮೃತನನ್ನು ಆಕೆಯ ಪುತ್ರ ಮಹೇಶ್‌‌‌ ಎಂದು ಗುರುತಿಸಲಾಗಿದೆ.

ಮಹೇಶ್ ಕೊಲೆ ಆರೋಪದ ಮೇಲೆ ಬಂಧಿತರಾದ ರಾಹುಲ್, ಅಂಕೇಶ್ ಹಾಗೂ ರವಿ ಎಂಬ ಮೂವರು ಸುಪಾರಿ ಹಂತಕರು ವಿಚಾರಣೆ ವೇಳೆ ಈ ಘೋರ ಸತ್ಯವನ್ನು ಬಾಯ್ಬಿಟ್ಟಿದ್ದಾರೆ. ಕೊಲೆಗಾರ್ತಿ ತಾಯಿ ಈಗ ಪೊಲೀಸರ ವಶದಲ್ಲಿದ್ದಾಳೆ.

Write A Comment