ನವದೆಹಲಿ: ಪವಿತ್ರ ನದಿ ಗಂಗೆ ಶುದ್ಧೀಕರಣ ಯೋಜನೆ ಬಹಳ ನಿಧಾನವಾಗಿ ಸಾಗುತ್ತಿದೆ ಎಂಬ ಆರೋಪವನ್ನು ತಳ್ಳಿ ಹಾಕಿರುವ ಕೇಂದ್ರ ಜಲ ಸಂಪನ್ಮೂಲ ಖಾತೆ ಸಚಿವೆ ಉಮಾ ಭಾರತಿ, 2018 ರೊಳಗೆ ಗಂಗೆಯನ್ನು ಅತೀ ಸ್ವಚ್ಛ ನದಿಗಳಲ್ಲಿ ಒಂದು ಎನ್ನಿಸಿಕೊಳ್ಳುವಂತೆ ಮಾಡಲು ಎನ್ಡಿಎ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
“ಗಂಗೆಯನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ನಾವು ನಿಲ್ಲಿಸಿದ್ದೇವೆ ಎಂದು ನೀವೆಣಿಸಿದರೆ ಅದು ತಪ್ಪು. ಯಾವುದೇ ದೊಡ್ಡ ಓಟವನ್ನು ಪ್ರಾರಂಭಿಸುವ ಮೊದಲು , ಓಟಗಾರ ಸ್ವಲ್ಪ ನಿಲ್ಲುತ್ತಾನೆ, ತನ್ನ ಗಮ್ಯಸ್ಥಾನದ ಮೌಲ್ಯಮಾಪನ ಮಾಡುತ್ತಾನೆ ಮತ್ತು ಆ ಕಡೆ ಓಟವನ್ನು ಪ್ರಾರಂಭಿಸುತ್ತಾನೆ. ನಮ್ಮ ಗುರಿ ಅಕ್ಟೋಬರ್ 2018, ಅಂದು ನಾವು ಗಂಗಾ ಜಗತ್ತಿನ ಅತಿ ಸ್ವಚ್ಛ ನದಿಗಳಲ್ಲೊಂದು ಎಂಬುದನ್ನು ವಿಶ್ವಕ್ಕೆ ತೋರಿಸುತ್ತೇವೆ”, ಎಂದು ಸಚಿವೆ ಭರವಸೆ ತೋರಿಸಿದ್ದಾರೆ.
‘ಈ ಯೋಜನೆಯಲ್ಲಿ ಕಾರ್ಯ ನಿರ್ವಹಿಸಬೇಕಾದರೆ ಸರ್ಕಾರ ಎರಡು ಸವಾಲುಗಳನ್ನು ಎದುರಿಸಬೇಕಾಯಿತು. ಮೊದಲನೆಯದಾಗಿ ನದಿಯನ್ನು ಸ್ವಚ್ಛಗೊಳಿಸಲು ತಂತ್ರಜ್ಞಾನದ ಬಳಕೆ, ಇನ್ನೊಂದು ಸಾರ್ವಜನಿಕ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವುದು’, ಎಂದು ಅವರು ಹೇಳಿದ್ದಾರೆ.