ನವದೆಹಲಿ: ಬಿಹಾರದಲ್ಲಿ ಹೀನಾಯ ಸೋಲನ್ನು ಕಂಡಿದ್ದಕ್ಕೆ ಪಕ್ಷದೊಳಗಿನಿಂದಲೇ ವಿರೋಧವನ್ನೆದುರಿಸುತ್ತಿರುವ ಬಿಜೆಪಿ ಪ್ರಧಾನಿ ಮೋದಿಯವರ ಸಮರ್ಥನೆಗೆ ನಿಂತಿದ್ದು, ಪಕ್ಷದ ಹಿರಿಯರು ಟೀಕೆಗಳು ಪ್ರಧಾನಿ ಮೋದಿಯವರನ್ನುದ್ದೇಶಿಸಿ ಅಲ್ಲ. ಬದಲಾಗಿ ಚುನಾವಣಾ ರಣನೀತಿಯ ವಿರುದ್ಧ ಎಂದಿದೆ.
“ಪಕ್ಷದ ಹಿರಿಯರು ಮೋದಿಯವರ ವಿರುದ್ಧ ಏನನ್ನೂ ಹೇಳಿಲ್ಲ. ಪಕ್ಷದ ರಣನೀತಿ ಸೋಲಿಗೆ ಕಾರಣ ಎಂಬುದು ಅವರ ಅಭಿಪ್ರಾಯ”, ಎಂದು ಕೇಂದ್ರ ಸಚಿವರಾದ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ನಿತೀಶ್ ಕುಮಾರ್ಗೆ ಮೂರನೆಯ ಗೆಲುವು ತಂದಿತ್ತಿರುವ ಬಿಹಾರ್ ವಿಧಾನಸಭೆಯಲ್ಲಿ ಅಪಮಾನಕರ ಸೋಲು ಕಂಡಿದ್ದಕ್ಕೆ ಬಿಜೆಪಿ ಹಿರಿಯ ನಾಯಕರು ಪಕ್ಷದ ನಾಯಕತ್ವದ ಮೇಲೆ ಬಹಿರಂಗ ವಾಗ್ದಾಳಿ ನಡೆಸುತ್ತಿದ್ದಾರೆ.
ಕಳೆದೊಂದು ವರ್ಷದಿಂದ ಪಕ್ಷದ ಪ್ರಭಾವ ಕಡಿಮೆಯಾಗುತ್ತಿದೆ ಎಂದು ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ, ಯಶವಂತ ಸಿನ್ಹಾ ಬಹಿರಂಗ ಹೇಳಿಕೆ ನೀಡಿದ್ದಾರೆ. ಇದರಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಷಾ ತೀವ್ರ ಇಕ್ಕಟ್ಟಿಗೆ ಸಿಕ್ಕಿದ್ದಾರೆ.
ಶತ್ರುಘ್ನ ಸಿನ್ಹಾ, ಭೋಲಾ ಸಿಂಗ್, ಆರ್.ಕೆ.ಸಿಂಗ್ ಸೇರಿದಂತೆ ಹಲವು ಸಂಸದರು ಹಿರಿಯ ನಾಯಕರ ಮಾತಿಗೆ ದನಿಗೂಡಿಸಿದ್ದಾರೆ.