ಮಂಗಳೂರು: ಬಂಟ್ವಾಳದಲ್ಲಿ ಹರೀಶ್ ಪೂಜಾರಿ ಹತ್ಯೆಯ ಆರೋಪಿಗಳನ್ನು ಶೀಘ್ರವೇ ಬಂಧಿಸಿ ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಬಿ.ಸಿ.ರೋಡ್ ನಲ್ಲಿ ನಡೆದ ಹರೀಶ್ ಹತ್ಯೆ ಹಾಗೂ ಗಲಭೆಗೆ ಸಂಬಂಧಿಸಿದಂತೆ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಮಾಯಕ ಹರೀಶ್ ಮತೀಯ ವಾದಿಗಳ ದಾಳಿಗೆ ಬಲಿಯಾಗಿದ್ದಾನೆ. ಈತನ ಕೊಲೆಯನ್ನು ತೀವ್ರವಾಗಿ ಖಂಡಿಸಿರುವುದಾಗಿ ಹೇಳಿದ ಅವರು, ತಪ್ಪಿತಸ್ಥರನ್ನು ಶೀಘ್ರವೇ ಬಂಧಿಸಿ ಕಠಿಣ ಕಾನೂನು ಕ್ರಮಕ್ಕೊಳಪಡಿಸಲಾಗುವುದು ಎಂದು ಅವರು ಹೇಳಿದರು.
ಹರೀಶ್ ತಂದೆ ಕ್ಯಾನ್ಸರ್ ಪೀಡಿತರು :
ಹರೀಶ್ ಮನೆಗೆ ತಾನಿಂದು ಬೆಳಗ್ಗೆ ಭೇಟಿ ನೀಡಿದ್ದೇನೆ. ಮೃತ ಹರೀಶ್ ನ ತಂದೆ ಕ್ಯಾನ್ಸರ್ ಪೀಡಿತರಾಗಿದ್ದಾರೆ. ಹರೀಶ್ ತನ್ನ ಕುಟುಂಬಕ್ಕೆ ಆಧಾರವಾಗಿದ್ದ ಈತನ ಕೊಲೆ ನಡೆಸಿರುವುದು ಸಾಮರಸ್ಯ ಬಯಸುವವರಿಗೆ ಮನ ನೋಯಿಸುವ ಘಟನೆಯಾಗಿದೆ ಎಂದು ಸಚಿವ ರಮಾನಾಥ ರೈ ತಿಳಿಸಿದ್ದಾರೆ.
ಹರೀಶ್ ಕುಟುಂಬಕ್ಕೆ ಸರಕಾರದ ವತಿಯಿಂದ 5 ಲಕ್ಷ ರೂ. ಪರಿಹಾರ ನೀಡುತ್ತೇವೆ ಎಂದು ಘೋಷಿಸಿದ ಅವರು, ಪಕ್ಷದ ವತಿಯಿಂದಲೂ ಹರೀಶ್ ಕುಟುಂಬಕ್ಕೆ ನೆರವಾಗುವ ಕುರಿತು ಚರ್ಚಿಸಲಾಗುತ್ತಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಜಿಲ್ಲಾ ಕಾಂಗ್ರೆಸ್ ನ ಉಸ್ತುವಾರಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಯೂತ್ ಕಾಂಗ್ರೆಸ್ನ ಜಿಲ್ಲಾಧ್ಯಕ್ಷ ಮಿಥುನ್ ರೈ, ಮಾಜಿಮೇಯರ್ಗಳಾದ ಮಹಾಬಲ ಮಾರ್ಲ, ಶಶಿಧರ್ ಹೆಗ್ಡೆ, ಮನಪಾ ಸದಸ್ಯರಾದ ಎ.ಸಿ. ವಿನಯ್ ರಾಜ್, ಪ್ರವೀಣ್ ಚಂದ್ರ, ನವೀನ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.