ದಾದ್ರಿ(ಉತ್ತರಪ್ರದೇಶ),ನ.9-ಇಡೀ ದೇಶದ ಕುತೂಹಲ ಕೆರಳಿಸಿದ್ದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಅನುಭವಿಸಲು ಪಾಟ್ನಾದಿಂದ ನೂರಾರು ಕಿ.ಮೀ ದೂರದಲ್ಲಿರುವ ಉತ್ತರ ಪ್ರದೇಶದ ಒಂದು ಕುಗ್ರಾಮ ಪ್ರಮುಖ ಕಾರಣವಾಯಿತೇ..? ಹೌದು. ಸ್ವತಃ ಆ ಕುಗ್ರಾಮದ ಜನರೇ ಈ ಬಗ್ಗೆ ಮಾತನಾಡಿದ್ದಾರೆ. ಉತ್ತರ ಪ್ರದೇಶದ ದಾದ್ರಿ ಜಿಲ್ಲೆಯ ಬಿಸದ ಎಂಬ ಪುಟ್ಟಹಳ್ಳಿಯಲ್ಲಿ ಕೆಲವು ದಿನಗಳ ಹಿಂದೆ ನಡೆದ ಒಂದು ಘಟನೆ ಇಡೀ ದೇಶದ ಭವಿಷ್ಯವನ್ನು ಬದಲಾಯಿಸಿತು. ನಿನ್ನೆಯ ಬಿಹಾರದ ಚುನಾವಣಾ ಫಲಿತಾಂಶವನ್ನು ಟಿವಿಗಳಲ್ಲಿ ಕೇವಲ ಆ ರಾಜ್ಯದಲ್ಲಷ್ಟೇ ಅಲ್ಲದೆ ಇಡೀ ದೇಶ ಕುತೂಹಲದಿಂದ ವೀಕ್ಷಿಸುತಿತ್ತು.
ಮುಖ್ಯಮಂತ್ರಿ ನಿತೀಶ್ ಕುಮಾರ್, ಲಾಲುಪ್ರಸಾದ್ ಯಾದವ್ ಹಾಗೂ ಕಾಂಗ್ರೆಸ್ ಮಹಾಮೈತ್ರಿಕೂಟದ ಪರವಾಗಿ ಫಲಿತಾಂಶ ಬರುತ್ತಿದ್ದಂತೆಯೇ ಬಿಸದ ಗ್ರಾಮದಲ್ಲಿ ಟಿವಿ ವೀಕ್ಷಿಸುತ್ತಿದ್ದ ಜನ ಉದ್ಘರಿಸಿದ್ದು ಹೀಗೆ… ಇದು ಅಸಹಿಷ್ಣುತೆ ಮತ್ತು ಮತೀಯ ದ್ವೇಷದ ಫಲಿತಾಂಶ ಎಂದು ಅಲ್ಲಿದ್ದವರೆಲ್ಲ ಒಕ್ಕೊರಲಲ್ಲಿ ಉದ್ಘರಿಸಿದರು. ಮತೀಯವಾದಿಗಳ ಅಸಹನೆಯ ಒಂದು ಕೃತ್ಯ ಇಷ್ಟು ದೂರದಲ್ಲಿರುವ ನಮ್ಮ ಪುಟ್ಟ ಹಳ್ಳಿಯ ಘಟನೆ ಬಿಹಾರಕ್ಕೆ ಒಂದು ಮಹತ್ವದ ಸಂದೇಶವನ್ನು ರವಾನಿಸಿತು. ಈ ಜಾತ್ಯತೀತ ಶಕ್ತಿಗಳ ಜಯ ನನ್ನ ತಂದೆಗೆ ಅರ್ಪಿತವಾಗಲಿ ಎಂದು ಗೋಮಾಂಸ ವಿವಾದಕ್ಕೆ ಸಂಬಂಧಿಸಿದಂತೆ ಹಲ್ಲೆಯಿಂದ ಮೃತಪಟ್ಟ 55 ವರ್ಷದ ಅಖ್ಲಾಕ್ ಪುತ್ರ ಹೇಳಿದ್ದಾನೆ.
ದಾದ್ರಿಯ ಬಿಸದ ಗ್ರಾಮದಲ್ಲಿ ವಿದ್ಯುತ್ ಪೂರೈಕೆ ಇರುವುದು ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಮತ್ತು ರಾತ್ರಿ 11ರಿಂದ ಬೆಳಗ್ಗೆ 5 ಗಂಟೆವರೆಗೆ. ನಿನ್ನೆ ಟಿವಿ ಹೊಂದಿರುವ ಮನೆಗಳಲ್ಲಿ ಬಿಹಾರ ಚುನಾವಣೆ ಫಲಿತಾಂಶ ವೀಕ್ಷಣೆಗಾಗಿ ನೂರಾರು ಜನ ಕಿಕ್ಕಿರಿದು ತುಂಬಿದ್ದರು. ಹೇಗಾದರೂ ಮಾಡಿ ಓಟ್ ಬ್ಯಾಂಕ್ ಸೃಷ್ಟಿಸಲು ರಾಜಕಾರಣಿಗಳು ಇಲ್ಲದ ಕುತಂತ್ರಗಳನ್ನು ನಡೆಸುತ್ತಾರೆ. ಆದರೆ ಬಿಹಾರದ ಈ ಫಲಿತಾಂಶ ಅಂಥವರ ಮುಖಕ್ಕೆ ಮಂಗಳಾರತಿ ಮಾಡಿದಂತಾಗಿದೆ ಎಂದು ಅಕ್ಲಾಕ್ ಮಗ ಹೇಳಿದ್ದಾನೆ.