ಪಾಟ್ನಾ, ನ.8-ಅತ್ಯಂತ ಕ್ಲಿಷ್ಟಕರವಾಗಿದ್ದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮಹಾಮೈತ್ರಿಕೂಟವನ್ನು ಅಧಿಕಾರಕ್ಕೆ ತರುವ ಮೂಲಕ ನಿತೀಶ್ಕುಮಾರ್ ಮೂರನೆ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಬಿಹಾರದ ಅತ್ಯಂತ ಹಿಂದುಳಿದ ಕುರ್ಮಿ ಜನಾಂಗಕ್ಕೆ ಸೇರಿದ ನಿತೀಶ್ಕುಮಾರ್ ಓದಿದ್ದು ಎಂಜಿನಿಯರಿಂಗ್. ಕುಗ್ರಾಮದಿಂದ ಬಂದು ಜಯಪ್ರಕಾಶ್ ನಾರಾಯಣ್ ಅವರ ತತ್ವ-ಆದರ್ಶಗಳಿಗೆ ಮೊರೆ ಹೋಗಿ ರಾಜಕಾರಣಕ್ಕೆ ಬಂದಿದ್ದೇ ಆಕಸ್ಮಿಕ.
ಪ್ರಾರಂಭದಲ್ಲಿ ಎರಡು ಚುನಾವಣೆ ಸೋತಾಗ ನನಗೆ ರಾಜಕೀಯ ಸಹವಾಸವೇ ಬೇಡ ಎಂದು ದೂರ ಸರಿದಿದ್ದರು. ಅಂದು ಬಿಹಾರದಲ್ಲಿ ಕಾಂಗ್ರೆಸ್ ಪಾರುಪತ್ಯ ಇದ್ದ ವೇಳೆ ಹಣ-ಹೆಂಡ, ಜಾತಿ-ಧರ್ಮವೇ ಗೆಲುವಿಗೆ ಮಾನದಂಡವಾಗಿತ್ತು. ಇಂತಹ ಸಂದರ್ಭದಲ್ಲಿ ನಮ್ಮಂತಹವರಿಗೆ ರಾಜಕೀಯ ಕ್ಷೇತ್ರ ಸಲ್ಲದು ಎಂದಿದ್ದ ನಿತೀಶ್ಕುಮಾರ್, ಎರಡು ಚುನಾವಣೆ ಸೋತಿದ್ದರಿಂದ ಎಂಜಿನಿಯರಿಂಗ್ ವೃತ್ತಿಯನ್ನೇ ಮುಂದುವರೆಸಬೇಕೆಂಬ ಆಲೋಚನೆ ಹೊಂದಿದ್ದರು. ಆದರೆ, ದೇಶದಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿ ಜಯಪ್ರಕಾಶ್ ನಾರಾಯಣ್ ಆಂದೋಲನ ರೂಪಿಸಿದಾಗ ಇದೇ ನಿತೀಶ್ಕುಮಾರ್ ರಾಜಕಾರಣಕ್ಕೆ ಧುಮುಕಿದರು.