ಹೊಸಕೋಟೆ: ಚಲಿಸುವ ಬಸ್ನಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ರವಿ, ಇದೀಗ ಯುವತಿಯನ್ನು ವಿವಾಹವಾಗುವ ಇಚ್ಛೆ ವ್ಯಕ್ತಪಡಿಸಿದ್ದಾನೆ ಎನ್ನಲಾಗಿದೆ.
ಹೊಸಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಎಂ.ಸತ್ಯವಾರ ಗ್ರಾಮದ
ಯುವತಿಯು ಆರೋಪಿ ಶಿವಮೊಗ್ಗ ಮೂಲದ ರವಿಯನ್ನು ಪ್ರೀತಿಸಲು ನಿರಾಕರಿಸಿದ್ದಳು ಎನ್ನಲಾಗಿದೆ. ಗುರುವಾರ ಕೆಲಸಕ್ಕೆಂದು ಎಂ.ಸತ್ಯವಾರದಿಂದ ಹೊಸಕೋಟೆಗೆ ಬರುತ್ತಿದ್ದ ಯುವತಿಯನ್ನು ಡ್ರಾಪ್ ಕೊಡುವ ನೆಪದಲ್ಲಿ ಮಿನಿ ಬಸ್ಗೆ ಹತ್ತಿಸಿಕೊಂಡಿದ್ದ ಆರೋಪಿ ರವಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಈ ಸಂಬಂಧ ರವಿಯನ್ನು ಪೊಲೀಸರು ಬಂಧಿಸಿದ್ದರು.
ಏತನ್ಮಧ್ಯೆ ಆರೋಪಿ ರವಿ ಯುವತಿಯನ್ನು ವಿವಾಹವಾಗುವ ಇಚ್ಛೆ ವ್ಯಕ್ತಪಡಿಸಿದ್ದು, ಶೀಘ್ರದಲ್ಲಿಯೇ ಎರಡು ಕುಟುಂಬಗಳ ನಡುವೆ ವಿವಾಹ ಮಾತುಕತೆ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ನಡುವೆ ಆರೋಪಿ ರವಿ ಹಾಗೂ ಆತನ ಸಹಚರನನ್ನು 2ನೇ ಎಸಿಎಂಎಂ ಕೋರ್ಟ್ ನ.20ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಕೃಷ್ಣಬೈರೇಗೌಡ, ಉಗ್ರಪ್ಪ ಸಾಂತ್ವನ: ಗುರುವಾರ ಅತ್ಯಾಚಾರಕ್ಕೊಳಗಾಗಿ
ಹೊಸಕೋಟೆಯ ಖಾಸಗಿ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಯನ್ನು ಕೃಷಿ ಸಚಿವ ಕೃಷ್ಣಭೈರೇಗೌಡ ಹಾಗೂ ರಾಜ್ಯ ಮಹಿಳಾ ಅತ್ಯಾಚಾರ ತಡೆ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಮತ್ತು ಸದಸ್ಯರು ಭೇಟಿ ಮಾಡಿ ಸಾಂತ್ವನ ಹೇಳಿದರು.
ಯುವತಿಗೆ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ, ಶಿಕ್ಷಣ ಮುಂದುವರಿಸಲು ಅಗತ್ಯ ನೆರವು, ಪುನರ್ವಸತಿ ಸೌಲಭ್ಯ, ಸ್ವಉದ್ಯೋಗ ಕೈಗೊಳ್ಳಲು ಉಚಿತ ಆರ್ಥಿಕ ಸಹಾಯ ನೀಡುವುದಾಗಿ ಭರವಸೆ ನೀಡಿದ ಸಚಿವ ಕೃಷ್ಣಬೈರೇಗೌಡ, ಸಂತ್ರಸ್ತ ಯುವತಿಗೆ 50 ಸಾವಿರ ರೂ. ಪರಿಹಾರ ನೀಡುವಂತೆ ಸಚಿವರು ಸೂಚಿಸಿದರು.
ಆದರೆ ಸಚಿವರ ಸಹಾಯವನ್ನು ಯುವತಿ ತಿರಸ್ಕರಿಸಿದಳು.
-ಉದಯವಾಣಿ