ನವದೆಹಲಿ: ರಾಜಕೀಯ ದ್ವೇಷದಿಂದ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿರುವುದರ ಹಿಂದೆ ಇದೆ ಎಂದು ಕಾಂಗ್ರೆಸ್ ವಕ್ತಾರ ಗುಲಾಂ ನಬಿ ಆಜಾದ್ ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ವಿರುದ್ಧದ ದ್ವೇಷ ನೆತ್ತಿಗೇರಿದೆ, ಮೋದಿ ಅವರ ರಾಜಕೀಯ ದ್ವೇಷವನ್ನು ಕಾಂಗ್ರೆಸ್ ಖಂಡಿಸುತ್ತದೆ. ರಾಜಕೀಯ ದ್ವೇಷಕ್ಕೆ ಬಿಜೆಪಿ ಸಿಬಿಐ ನ್ನು ಬಿಜೆಪಿಯ ತನಿಖಾ ಸಂಸ್ಥೆಯನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಆಜಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫ್ಯಾಸಿಸ್ಟ್ ಮನಸ್ಥಿತಿ ಪ್ರಜಾಪ್ರಭುತ್ವಕ್ಕೆ ಮಾರಕ, ನರೇಂದ್ರ ಮೋದಿ ದಾಳಿ ಮಾಡಿದಷ್ಟು ಕಾಂಗ್ರೆಸ್ ಬಲಿಷ್ಠಗೊಳ್ಳುತ್ತದೆ. ಬಿಜೆಪಿಯ ವೈಫಲ್ಯಗಳನ್ನು ಮುಚ್ಚಿಡಲು ಕಾಂಗ್ರೆಸ್ ನಾಯಕರ ವಿರುದ್ಧ ದಾಳಿ ನಡೆಸಲಾಗುತ್ತಿದೆ ಎಂದು ಗುಲಾಂ ನಬಿ ಆಜಾದ್ ಆರೋಪಿಸಿದ್ದಾರೆ.
ಅಕ್ರಮ ಆಸ್ತಿ ಗಳಿಕ ಪ್ರಕರಣ ಸಂಬಂಧ ದೆಹಲಿ ಸೇರಿದಂತೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ನಿವಾಸ ಸೇರಿದಂತೆ 11 ಸ್ಥಳಗಳ ಮೇಲೆ ಸಿಬಿಐ ಶನಿವಾರ ದಾಳಿ ನಡೆಸಿತ್ತು.