ಹೊಸದಿಲ್ಲಿ, ಸೆ.21: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನ ಹಾಗೂ ಚೀನಾಗಳೊಂದಿಗಿನ ಭಾರತದ ಗಡಿಯ ಮುಂಚೂಣಿ ಪ್ರದೇಶಗಳ ಮೂರು ದಿನಗಳ ಭೇಟಿಗಾಗಿ ಆಗಮಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಭಾರತದೊಂದಿಗಿನ ಸಂಬಂಧ ಸುಧಾರಣೆಗಾಗಿ ಚೀನಾವು ಗಡಿ ವಿವಾದವನ್ನು ಪರಿಹರಿಸಿಕೊಳ್ಳಬೇಕೆಂದು ಪುನರುಚ್ಚರಿಸಿದರು. ಉತ್ತಮ ಬಾಂಧವ್ಯಕ್ಕಾಗಿ ಕ್ರಮ ಕೈಗೊಳ್ಳುವಂತೆ ಅವರು ಪಾಕಿಸ್ತಾನವನ್ನು ಆಗ್ರಹಿಸಿದರು.
ಕೆಲವು ದಿನಗಳಿಂದ ಕದನ ವಿರಾಮ ಉಲ್ಲಂಘನೆ ಹೆಚ್ಚಾಗಿದೆ. ಇದರಿಂದಾಗಿ ಅಪಾರಸಂಖ್ಯೆಯ ನಾಗರಿಕರು ಸಾವಿಗೀಡಾಗಿದ್ದಾರೆ ಹಾಗೂ ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ. ಕದನ ವಿರಾಮ ಉಲ್ಲಂಘನೆಯ ಹಲವು ಪ್ರಕರಣಗಳು ನಡೆದಿರುವ ಪೂಂಚ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ಸೇನೆಗಳು ಧ್ವಜ ಸಭೆಯೊಂದನ್ನು ನಡೆಸುತ್ತಿರುವಾಗಲೇ ರಾಜನಾಥ್ರ ಗಡಿ ಭೇಟಿ ನಡೆಯುತ್ತಿದೆ. ನಿಯಂತ್ರಣ ರೇಖೆ ಹಾಗೂ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಉದ್ವಿಗ್ನತೆಯನ್ನು ಹೇಗೆ ಕಡಿಮೆಗೊಳಿಸಬಹುದೆಂಬುದನ್ನು ಚರ್ಚಿಸಲು ಈ ಧ್ವಜ ಸಭೆ ನಡೆಯುತ್ತಿದೆ.
ಉಭಯ ಕಡೆಗಳ ಫೀಲ್ಡ್ ಕಮಾಂಡರ್ಗಳು ಉದ್ವಿಗ್ನ ಪರಿಸ್ಥಿತಿಯ ಶಮನಕ್ಕೆ ದಾರಿಯ ಕುರಿತಾಗಿಯೂ ಚರ್ಚಿಸಲಿದ್ದಾರೆ.
ಪಾಕಿಸ್ತಾನಿ ಪಡೆಗಳು ಈ ವರ್ಷದ ಸೆಪ್ಟಂಬರ್ನಲ್ಲಿ 23 ಬಾರಿ ಕದನವಿರಾಮ ಉಲ್ಲಂಘನೆಯನ್ನು ನಡೆಸಿವೆ. ಅವು, 120 ಮಿ.ಮೀ. ಹಾಗೂ 80 ಮಿ.ಮೀ. ಮೋಟಾರ್ಗಳನ್ನು ಬಳಸಿ ಭಾರತದ ನಾಗರಿಕ ಹಾಗೂ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿವೆ. ಪಾಕಿಸ್ತಾನಿ ಪಡೆಗಳು ರಾಕೆಟ್ ಗ್ರೆನೇಡ್ ಹಾಗೂ ಸ್ವಯಂ ಚಾಲಿತ ಶಸ್ತ್ರಾಸ್ತ್ರಗಳನ್ನು ದಾಳಿಗಾಗಿ ಬಳಸಿವೆಯೆಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.