ನವದೆಹಲಿ, ಸೆ.19-ದಿವಂಗತ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಬಗ್ಗೆ ಹಗುರವಾಗಿ ಮಾತನಾಡಿ ವಿವಾದ ತಲೆ ಮೇಲೆ ಎಳೆದುಕೊಂಡು ಪಕ್ಷದ ಹಿರಿಯರ ಕೆಂಗಣ್ಣಿಗೆ ಗುರಿಯಾಗಿದ್ದ ಕೇಂದ್ರ ಸಚಿವ ಮಹೇಶ್ ಶರ್ಮಾ, ಇದೀಗ ಮಹಿಳೆಯರ ಬಗ್ಗೆ ಅಧಿಕ ಪ್ರಸಂಗ ಮಾಡಿ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಸಚಿವರು ಹೇಳಿದ್ದು: ಜಗತ್ತಿನ ಇತರೆ ಕಡೆಗಳಲ್ಲೆಲ್ಲ ಒಂದು ವೇಳೆ ಮಹಿಳೆಯರು ರಾತ್ರಿ ಸಮಯದಲ್ಲಿ ಹೊರಗಡೆ ತಿರುಗಾಡಬಹುದೇನೋ…? ಆದರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ರಾತ್ರಿ ವೇಳೆ ಹೊರಗಡೆ ಓಡಾಡುವುದು ನಿಷಿದ್ಧವೇ ಆಗಿದೆ. ಕತ್ತಲಲ್ಲಿ ಹೆಣ್ಣಿನ ಸಂಚಾರ ಭಾರತೀಯ ಸಂಸ್ಕೃತಿಯಲ್ಲಿ ಸ್ವೀಕಾರಾರ್ಹವಲ್ಲ. ಹೆಣ್ಣಿಗೆ ಅದು ಸಲ್ಲದು. ರಾತ್ರಿಯಲ್ಲಿ ಹೆಣ್ಣು ಮನೆಯಲ್ಲೇ ಇರಬೇಕು… ಖಾಸಗಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಸಚಿವರು ಈ ರೀತಿ ಅಪ್ಪಣೆ ಕೊಡಿಸಿದ್ದಾರೆ.
ತಮ್ಮ ಬಾಲ್ಯದಿಂದಲೂ ಕಟ್ಟಾ ಆರ್ಎಸ್ಎಸ್ ಆಗಿರುವ ಮಹೇಶ್ ಶರ್ಮಾ. ಅದೇಕೆ ಆರ್ಎಸ್ಎಸ್ ವಿರುದ್ಧ ಜನ ಮಾತನಾಡುತ್ತಾರೆ, ಈ ಸಂಘಟನೆ ಎಂದಾದರೂ ದೇಶ ವಿರೋಧಿ, ಸಂಸ್ಕೃತಿ ವಿರೋಧಿ ಕೆಲಸ ಮಾಡಿದ್ದೆಯೇ ಎಂದು ಪ್ರಶ್ನಿಸಿದ್ದಾರೆ. ಕೆಲ ರಾಜ್ಯಗಳಲ್ಲಿ ಜೈನರ ಉತ್ಸವದ ವೇಳೆ ಮಾಂಸ ಮಾರಾಟ ನಿಷೇಧಿಸಿರುವುದನ್ನು ಸಮರ್ಥಿಸಿಕೊಳ್ಳುವ ಶರ್ಮಾ, ನಾವೇನು ಇಫ್ತಾರ್ ಸಂದರ್ಭ ಈ ರೀತಿ ನಿಷೇಧ ಮಾಡುತ್ತೇವೆಯೇ? ಅದನ್ನೇಕೆ ವಿರೋಧಿಸಬೇಕು ಎಂದಿದ್ದಾರೆ.
ಭಾರತೀಯ ಸಂಸ್ಕೃತಿ-ಪರಂಪರೆಗಳನ್ನು ವಿಶ್ವದ ಎದುರು ಸಮರ್ಥವಾಗಿ ಬಿಂಬಿಸುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಇನ್ನು ಮುಂದಾದರೂ ಅದನ್ನು ಸರಿಪಡಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.