ನವದೆಹಲಿ: ‘ರಾಮಚರಿತಮಾನಸ’ ಮಹಾಕಾವ್ಯವಾಗಿದ್ದು, ಅದು ಭಾರತದ ಅಗತ್ಯವನ್ನು ಒಳಗೊಂಡಿದೆ ಎಂದು ವ್ಯಾಖ್ಯಾನಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಆಕಾಶವಾಣಿ ಸಂಗ್ರಹಿಸಿರುವ ರಾಮಚರಿತಮಾನಸದ ಧ್ವನಿ ಮುದ್ರಣದ ಡಿಜಿಟಲ್ ಆವೃತ್ತಿಯನ್ನು ಬಿಡುಗಡೆ ಮಾಡಿದರು.
ನಂತರ ಅವರು ಮಾತನಾಡಿ, ಕಲಾವಿದರು ಕೇವಲ ಸಂಗೀತವನ್ನು ಮಾತ್ರ ಹೇಳಲಿಲ್ಲ. ಅವರ ಸಂಸ್ಕೃತಿ ಮತ್ತು ಸಂಸ್ಕಾರ ಎದ್ದು ಕಾಣುತ್ತದೆ ಎಂದು ಹೇಳಿದರು. ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿರುವ ಭಾರತೀಯರು ಭಾರತದೊಂದಿಗೆ ಹಲವು ವರ್ಷಗಳು ಕಳೆದ ನಂತರವೂ ಸಂಪರ್ಕ ಇಟ್ಟುಕೊಂಡಿದ್ದಾರೆ. ಅದಕ್ಕೆ ರಾಮಚರಿತಮಾನಸದಂತಹ ಮಹಾಗ್ರಂಥಗಳು ಕಾರಣವಾಗುತ್ತವೆ ಎಂದರು.
ರಾಮಚರಿತಮಾನಸದ ಸಿಡಿಯನ್ನು 20-22 ವರ್ಷಗಳ ಅವಧಿಯಲ್ಲಿ ತಯಾರಿಸಲಾಗಿದೆ. ಇದೊಂದು ಅದ್ವಿತೀಯ ಸಾಧನೆ ಎಂದರು. ಆಕಾಶವಾಣಿಯಲ್ಲಿ ದೇಶಾದ್ಯಂತ ಅನೇಕ ಕಲಾವಿದರು ಹಾಡಿದ್ದಾರೆ. 9 ಲಕ್ಷ ಗಂಟೆಗಳ ಧ್ವನಿ ಮುದ್ರಣವಿದೆ. ಈ ಸಿಡಿಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದೊಂದು ಅಮೂಲ್ಯ ಸಂಗ್ರಹವಾಗಲಿದೆ ಎಂದು ಪ್ರಧಾನಮಂತ್ರಿ ಹೇಳಿದರು.