ನವದೆಹಲಿ: ಸುಪ್ರೀಂ ಕೋರ್ಟ್ ವಕೀಲ ಹಾಗೂ ಮಾಜಿ ಎಎಪಿ ನಾಯಕ ಪ್ರಶಾಂತ್ ಭೂಷಣ್ ಅವರು ದೆಹಲಿ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರಿಗೆ ಶನಿವಾರ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ದೆಹಲಿ ಸರ್ಕಾರ ಹಿಂಬಾಗಿಲ ಮೂಲಕ ಗುತ್ತಿಗೆಯಾಧಾರಿತ ಶಿಕ್ಷಕರನ್ನು ಕಾಯಂಗೊಳಿಸುತ್ತಿದೆ ಎಂದು ಆರೋಪಿಸಿರುವ ಉಚ್ಛಾಟಿತ ಆಪ್ ನಾಯಕ ಪ್ರಶಾಂತ್ ಭೂಷಣ್, ಈ ಸಂಬಂಧ ದೆಹಲಿ ಸರ್ಕಾರಕ್ಕೆ ಲೀಗಲ್ ನೋಟಿಸ್ ನೀಡಿದ್ದಾರೆ.
ಅತಿಥಿ ಶಿಕ್ಷಕರನ್ನು ಕಾಯಂಗೊಳಿಸುವ ಸಂಬಂಧ ದೆಹಲಿ ಸರ್ಕಾರ ಜೂನ್ 10ರಂದು ಹೊರಡಿಸಿರುವ ಅಧಿಸೂಚೆನೆ ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದಿದ್ದಾರೆ.
‘ಶಿಕ್ಷಕರ ನೇಮಕಾತಿ ಸಂಬಂಧ ಅರ್ಹ ಎಲ್ಲಾ ಅಭ್ಯರ್ಥಿಗಳು ಡಿಎಸ್ಎಸ್ಬಿ ಪರೀಕ್ಷೆ ಬರೆಯಲು ಅವಕಾಶ ಸಿಗಬೇಕು’ ಎಂದು ಲೀಗಲ್ ನೋಟಿಸ್ ನೀಡಲಾಗಿದೆ ಎಂದಿದ್ದಾರೆ. ಅಲ್ಲದೆ ಬೇರೆಯವರಿಗೆ ಅವಕಾಶ ವಂಚಿಸಿ ಅತಿಥಿ ಅಥವಾ ಗುತ್ತಿಗೆಯಾಧಾರಿತ ಶಿಕ್ಷಕರನ್ನು ಕಾಯಂಗೊಳಿಸಿವುದು ಹಿಂಬಾಗಿಲ ಮೂಲಕ ಪ್ರವೇಶ ಮತ್ತು ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟ್ ಹೇಳಿರುವುದಾಗಿ ಭೂಷಣ್ ತಿಳಿಸಿದ್ದಾರೆ.