ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ದೋಷಮುಕ್ತನಾಗಿ ಹೊರ ಬಂದಿರುವ ಕ್ರಿಕೆಟಿಗ ಶ್ರೀಶಾಂತ್ ಮಗಳು ನನ್ನ ಪಾಲಿನ ದೇವತೆ ಎಂದು ಹೇಳಿದ್ದಾರೆ. ಪಟಿಯಾಲಾ ಹೌಸ್ ನ್ಯಾಯಾಲಯ 2013ರ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಶ್ರೀಶಾಂತ್ ಮತ್ತು ಇತರರಿಗೆ ಕ್ಲೀನ್ ಚಿಟ್ ನೀಡಿ ಶನಿವಾರ ತೀರ್ಪು ಪ್ರಕಟಿಸಿತ್ತು. ಇದಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಶಾಂತ್ ನನ್ನ ಹೆಂಡತಿ ಮತ್ತು ಮಗಳು ನನ್ನ ಜೀವನದಲ್ಲಿ ದೇವತೆಗಳಾಗಿ ಬಂದಿದ್ದಾರೆ.
ನಾನು ದೇವರಿಗೆ ಮೊದಲು ಧನ್ಯವಾದ ಹೇಳುತ್ತಿದ್ದೇನೆ. ನನ್ನ ಕುಟುಂಬ, ಸ್ನೇಹಿತರು ಹಾಗೂ ನನ್ನ ಊರಿನವವರೆಲ್ಲ ನನ್ನ ಜತೆಗಿದ್ದರು. ಅವರೆಲ್ಲರ ಪ್ರಾರ್ಥನೆಗೆ ಧನ್ಯವಾದಗಳು. ನನ್ನನ್ನು ಪರಿಹಾಸ್ಯ ಮಾಡಿದವರಿಗೆ ನ್ಯಾಯಾಲಯದ ಈ ತೀರ್ಪು ಉತ್ತರವಾಗಿದೆ.
ನಾನು ದೇಶದ ಪರವಾಗಿ ಆಡಲು ಅತೀವ ಆಸಕ್ತಿ ಹೊಂದಿದ್ದೇನೆ. ಮತ್ತೊಮ್ಮೆ ನಾನು ಭಾರತೀಯ ಕ್ರಿಕೆಟ್ ಟೀಂಗೆ ಮರಳಿಬರುತ್ತೇನೆ. ನನ್ನ ಪುನರಾಗಮನಕ್ಕಾಗಿ ಬಿಸಿಸಿಐ ಸೌಕರ್ಯಗಳನ್ನು ಮಾಡಿಕೊಡಬೇಕು ಎಂದು ಬಿನ್ನವಿಸಿಕೊಂಡಿದ್ದಾರೆ.