ನವದೆಹಲಿ: ಕಂಠ ಪೂರ್ತಿ ಮದ್ಯಪಾನ ಮಾಡಿದ್ದ ಪೇದೆಗಳಿಬ್ಬರು ಹಾರಿಸಿದ ಗುಂಡಿಗೆ ಅಮಾಯಕನೊಬ್ಬ ತನ್ನ ಕೈ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
ಗೃಹ ಇಲಾಖೆಯಲ್ಲಿ ಕೆಲಸ ಮಾಡುವ ಜಯಪ್ರಕಾಶ್ ಪಾಂಡೆ ಎಂಬವರು ಹುಟ್ಟು ಹಬ್ಬದ ಪಾರ್ಟಿಯೊಂದನ್ನು ಮಗಿಸಿಕೊಂಡು ತಮ್ಮ ಚಾಲಕನೊಂದಿಗೆ ಕಾರಿನಲ್ಲಿ ಬರುವ ವೇಳೆ ಕಂಠ ಪೂರ್ತಿ ಕುಡಿದಿದ್ದ ರಾಜಕುಮಾರ್ ರಾಠಿ ಹಾಗೂ ಜಸ್ಪಾಲ್ ಸಿಂಗ್ ಎಂಬ ಪೇದೆಗಳು ಕಾರನ್ನು ತಡೆದು ನಿಲ್ಲಿಸಿದ್ದಾರೆ. ಕಾರಿನ ದಾಖಲೆ ಪತ್ರಗಳನ್ನು ತೋರಿಸುವಂತೆ ಚಾಲಕನಿಗೆ ಸೂಚಿಸಿದ್ದಾರೆ.
ದಾಖಲೆಗಳನ್ನು ತೋರಿಸಿದರೂ ಅದನ್ನೊಪ್ಪಲು ತಯಾರಿರದ ಪೇದೆಗಳು ದಂಡ ಪಾವತಿಸುವಂತೆ ತಿಳಿಸಿದ್ದಾರೆ. ಈ ವೇಳೆ ಸಣ್ಣ ಗಲಾಟೆಯೂ ನಡೆದಿದ್ದು, ಪೇದೆಗಳು ತಮ್ಮ ಬಳಿ ಇದ್ದ ಗನ್ ನಿಂದ ಗುಂಡು ಹಾರಿಸಿದ ಪರಿಣಾಮ ಜಯಪ್ರಕಾಶ್ ಪಾಂಡೆಯವರ ಬಲಗೈಗೆ ಗುಂಡು ತಗುಲಿದೆ. ಅವರ ಕಾರು ಚಾಲಕನಿಗೂ ಇದರಿಂದ ಗಾಯಗಳಾಗಿದೆ. ಜಯಪ್ರಕಾಶ್ ಪಾಂಡೆ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಸೋಂಕು ಹರಡಬಾರದೆಂಬ ಕಾರಣಕ್ಕೆ ಈಗ ಅವರ ಬಲಗೈಯನ್ನೇ ವೈದ್ಯರು ಕತ್ತರಿಸಿ ತೆಗೆದಿದ್ದಾರೆ. ಗುಂಡು ಹಾರಿಸಿದ ಪೇದೆಗಳನ್ನು ಬಂಧಿಸಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.