ಮುಂಬೈ: ಶಾಲೆಗೆ ಗೈರು ಹಾಜರಾಗಿದ್ದರೆಂಬ ಕ್ಷುಲ್ಲಕ ಕಾರಣಕ್ಕಾಗಿ ರಂಜಾನ್ ಉಪವಾಸ ಮಾಡುತ್ತಿದ್ದ 40 ಮಂದಿ ವಿದ್ಯಾರ್ಥಿಗಳನ್ನು 7 ಗಂಟೆಗಳ ಕಾಲ ಉರಿ ಬಿಸಿಲಿನಲ್ಲಿ ನಿಲ್ಲಿಸುವ ಮೂಲಕ ಶಿಕ್ಷಕಿಯೊಬ್ಬರು ಅಮಾನವೀಯವಾಗಿ ವರ್ತಿಸಿದ್ದಾರೆ.
ಮುಂಬೈನ ಬೈಕುಲ್ಲಾದಲ್ಲಿರುವ ಸೇಂಟ್ ಆಗ್ನೆಸ್ ಹೈಸ್ಕೂಲ್ ನ ಪ್ರಾಂಶುಪಾಲೆಯೂ ಆಗಿರುವ ಶಿಕ್ಷಕಿ ಲೀಸಾ ಡಿಮೆಲ್ಲೋ ಎಂಬವರೇ ಈ ಶಿಕ್ಷೆ ನೀಡುವ ಮೂಲಕ ವಿದ್ಯಾರ್ಥಿಗಳ ಪೋಷಕರಿಂದ ಪ್ರತಿಭಟನೆ ಎದುರಿಸಿದ್ದಾರಲ್ಲದೇ ಅವರ ವಿರುದ್ದ ಈಗ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಲಾಗಿದೆ.
ಜುಲೈ 8 ರ ರಾತ್ರಿ ಧಾರ್ಮಿಕ ಕಾರ್ಯಕ್ರಮವಿದ್ದ ಕಾರಣ ರಾತ್ರಿಯೆಲ್ಲಾ ನಿದ್ರೆಗೆಟ್ಟಿದ್ದ ಈ ವಿದ್ಯಾರ್ಥಿಗಳು ಜುಲೈ 9 ರಂದು ಶಾಲೆಗೆ ಗೈರು ಹಾಜರಾಗಿದ್ದರು ಎನ್ನಲಾಗಿದೆ. ಹೀಗಾಗಿ ಶಿಕ್ಷಕಿ ಲೀಸಾ ಡಿಮೆಲ್ಲೋ ವಿದ್ಯಾರ್ಥಿಗಳು ರಂಜಾನ್ ಉಪವಾಸ ಮಾಡುತ್ತಿದ್ದಾರೆಂಬುದನ್ನೂ ಪರಿಗಣಿಸದೆ ಉರಿ ಬಿಸಿಲಿನಲ್ಲಿ ಏಳು ಗಂಟೆಗಳ ಕಾಲ ನಿಲ್ಲಿಸಿದ್ದಾರೆ. ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ ಪೋಷಕರು, ನಾಗಪಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.