ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮುಖ್ಯ ರಸ್ತೆಗಳಲ್ಲಿರುವ ಗುಂಡಿಗಳಿಂದಾಗಿ ವಾಹನ ಸವಾರರರು ಪರದಾಡುವುದು ಒಂದೆಡೆಯಾದರೆ ಇನ್ನೊಂದೆಡೆ ಟ್ರಾಫಿಕ್ ಪೊಲೀಸರ ಕಿರಿಕಿರಿ. ಆದರೆ ಈ ಪೊಲೀಸ್ ಮಾತ್ರ ಹಾಗಲ್ಲ , ಪ್ರಯಾಣಿಕರ ಸುಗಮ ಸಂಚಾರಕ್ಕೆ ಹಾದಿ ಮಾಡಿಕೊಟ್ಟು ಮಾದರಿಯಾಗಿದ್ದು, ಫೇಸ್ ಬುಕ್ ನಲ್ಲಿ ಇದೀಗ ಹೀರೋ ಆಗಿದ್ದಾರೆ.
ಹೌದು ನಾವು ಹೇಳ ಹೊರಟಿರುವುದು ವೈಟ್ ಫೀಲ್ಡ್ನ ಸಂಚಾರಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಸತ್ಯನಾರಾಯಣ್ ಅವರ ಬಗ್ಗೆ. ಇವರು ಮಾಡಿದ ಸಮಾಜಮುಖೀ ಕಾರ್ಯ ಇನ್ನೇನಲ್ಲ. ಯಾವುದೇ ಫಲಾಪೇಕ್ಷೆ ಇಲ್ಲದೆ ತಮ್ಮ ಠಾಣೆಯ ವ್ಯಾಪ್ತಿಯಲ್ಲಿ ಬರುವ ರಸ್ತೆಗಳಲ್ಲಿರುವ ಗುಂಡಿಗಳನ್ನು ಕಲ್ಲು, ಮಣ್ಣು ಹಾಕಿ ಮುಚ್ಚುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ಬೆಂಗಳೂರಿನ ವಾಹನ ಸವಾರರಿಂದ ಪ್ರಶಂಸೆ ಪಡೆದು ಎಲ್ಲಾ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ.
ನಿವೃತ್ತಿಯ ಅಂಚಿನಲ್ಲಿರುವ ಸತ್ಯನಾರಾಯಣ್ ಅವರು ಪ್ರಯಾಣಿಕರಿಗೆ ಹೆಚ್ಚು ಕಿರಿಕಿರಿ ನೀಡುವ ಸ್ಥಳಗಳಾದ ಟ್ರಾಫಿಕ್ ಸಿಗ್ನಲ್ಗಳಲ್ಲಿರುವ ಗುಂಡಿಗಳು ,ರಸ್ತೆಯ ಮದ್ಯದಲ್ಲಿರುವ ಗುಂಡಿಗಳನ್ನು ಒಬ್ಬರೆ ಮುಚ್ಚುವ ಮೂಲಕ ಹೀರೊ ಎನಿಸಿಕೊಂಡಿದ್ದಾರೆ.ಡಿವೈಡರ್ಗಳು ಒಡೆದು ಹೋಗಿದ್ದಲ್ಲಿ ಸರಿಪಡಿಸುವುದು ,ಅಗತ್ಯ ಬಿದ್ದಲ್ಲಿ ಸಿಮೆಂಟ್ ಹಾಕಿ ರಸ್ತೆ ಸರಿ ಇವರು ಮಾಡಿದ್ದಾರೆ.
ಸತ್ಯನಾರಾಯಣ್ ಅವರು ಗುಂಡಿ ಮುಚ್ಚುವ ಕಾರ್ಯದಲ್ಲಿ ನಿರತರಾಗಿದ್ದ ವೇಳೆ ಸಾಫ್ಟ್ವೇರ್ ಉದ್ಯೋಗಿಯೊಬ್ಬರು ಫೋಟೊ ತೆಗದು ಫೇಸ್ಬುಕ್ನಲ್ಲಿ ಪ್ರಕಟಿಸಿದ್ದರು. ಆ ಫೋಸ್ಟ್ಗೆ ಈಗಾಗಲೇ ನಾಲ್ಕು ಲಕ್ಷ ಲೈಕ್ಸ್ಗಳು ಹರಿದು ಬಂದಿದ್ದು, ಮಾದರಿ ಕಾರ್ಯವನ್ನು ಬೆಂಬಲಿಸಿ ನಾಲ್ಕು ಸಾವಿರಕ್ಕೂ ಹೆಚ್ಚು ಕಮೆಂಟ್ಗಳನ್ನು ಹಾಕಲಾಗಿದೆ.
ವಿಶೇಷವೆಂದರೆ ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ಅವರು ಸತ್ಯನಾರಾಯಣ್ ಅವರ ಕಾರ್ಯ ಮೆಚ್ಚಿ ಲೈಕ್ ನೀಡಿದ್ದು ಮಾತ್ರವಲ್ಲದೆ ಟ್ವೀಟರ್ನಲ್ಲೂ ಪ್ರಕಟಿಸಿಕೊಂಡಿದ್ದಾರೆ.
ವರ್ಗ ,ಅಧಿಕಾರ ಭೇದವಿಲ್ಲದೆ ಎಲ್ಲಾ ನಾಗರೀಕರು ನಮ್ಮದು ಎನ್ನುವ ಭಾವನೆಯಿಂದ ಇಂತಹ ಕಾರ್ಯಕ್ಕೆ ಮುಂದಾದಲ್ಲಿ ಎಲ್ಲಾ ರಸ್ತೆಗಳು ಗುಂಡಿ ಮುಕ್ತವಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ.
-ಉದಯವಾಣಿ