ನವದೆಹಲಿ: ಬಿಜೆಪಿ ನಾಯಕರಿಂದ ಏರ್ ಇಂಡಿಯಾ ವಿಮಾನ ಪ್ರಯಾಣ ವಿಳಂಬ ಹಾಗೂ ಸಚಿವ ಕಿರಣ್ ರಿಜಿಜುಗಾಗಿ ಪ್ರಯಾಣಿಕರನ್ನು ಹೊರಹಾಕಿದ ಪ್ರಕರಣ ಸಂಬಂಧ ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಅಶೋಕ್ ಗಜಪತಿ ರಾಜು ಪ್ರಯಾಣಿಕರಲ್ಲಿ ಕ್ಷಮೆ ಯಾಚಿಸಿದ್ದಾರೆ.
ಬಿಜೆಪಿ ನಾಯಕರಿಂದ ವಿಮಾನ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆ ಬಗ್ಗೆ ವಿಷಾಧ ವ್ಯಕ್ತ ಪಡಿಸಿದ ಅವರು, ಭವಿಷ್ಯದಲ್ಲಿ ಈ ರೀತಿಯ ಪ್ರಮಾದವಾಗಲು ಅವಕಾಶ ನೀಡುವುದಿಲ್ಲ ಎಂಬ ಭರವಸೆ ನೀಡಿದ್ದಾರೆ. ಕಿರಣ್ ರಿಜಿಜು ಪ್ರಕರಣ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅಮೆರಿಕಾ ಪ್ರವಾಸದ ವೇಳೆ ಸೂಕ್ತ ವೀಸಾ ನೀಡದ್ದರಿಂದ ಅಮೆರಿಕಾ ವಿಮಾನ ಪ್ರಯಾಣ ವಿಳಂಬ ಸಂಬಂಧ ವರದಿ ನೀಡುವಂತೆ ಪ್ರದಾನಿ ಕಾರ್ಯಾಲಯ ವಿಮಾನ ಯಾನ ಸಚಿವಾಲಯಕ್ಕೆ ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಸಚಿವ ಅಶೋಕ್ ಗಜಪತಿ ರಾಜು ಪ್ರಧಾನಿ ಕಾರ್ಯಾಲಯಕ್ಕೆ ವರದಿ ನೀಡುವುದು ನಮ್ಮ ಕರ್ತವ್ಯ. ಹೀಗಾಗಿ ನಡೆದ ಎಲ್ಲಾ ಘಟನೆಗಳ ನೈಜ ವರದಿಯನ್ನು ಪ್ರಧಾನಿ ಕಾರ್ಯಾಲಯಕ್ಕೆ ನೀಡುವುದಾಗಿ ತಿಳಿಸಿದರು.