ನವದೆಹಲಿ: ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 100 ಕ್ಕೂ ಹೆಚ್ಚು ಮಂದಿಯ ಬಲಿ ತೆಗೆದುಕೊಂಡಿದ್ದ ಕಳ್ಳಬಟ್ಟಿ ದುರಂತ ಪ್ರಕರಣದ ಪ್ರಮುಖ ಆರೋಪಿಯನ್ನು ಮಂಗಳವಾರ ದೆಹಲಿಯಲ್ಲಿ ಬಂಧಿಸಲಾಗಿದೆ.
ಮುಂಬೈ ಕಳ್ಳ ಭಟ್ಟಿ ದುರಂತದ ಮುಖ್ಯ ಆರೋಪಿ ಅತಿಖ್ ಯಾನೆ ರಾಜು ಎಂಬಾತನನ್ನು ದೆಹಲಿ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿ ಅತಿಖ್ ಯಾನೆ ರಾಜು ವಿಷಪೂರಿತ ಕಳ್ಳಭಟ್ಟಿಯ ಮುಖ್ಯ ಸರಬರಾಜುದಾರ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ದುರಂತದಲ್ಲಿ ಸೋಮವಾರ ಮಧ್ಯಾಹ್ನದವರೆಗೆ ಮೃತರಾಗಿರುವವರ ಸಂಖ್ಯೆ 102ಕ್ಕೆ ಏರಿದ್ದು, ಮುಂಬೈಯ ವಿವಿಧ ಆಸ್ಪತ್ರೆಗಳಿಗೆ ಹೊಸದಾಗಿ 48 ಮಂದಿ ದಾಖಲಾಗಿದ್ದಾರೆ ಎಂದು ಅಪರಾಧ ಶಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈನ ಮಲ್ವಾನಿಯ ಲಕ್ಷ್ಮಿ ನಗರ ಪ್ರದೇಶದ ಸುಮರು 150 ನಿವಾಸಿಗಳು ವಿವಿಧ ಸಾರಾಯಿ ಅಂಗಡಿಗಳಲ್ಲಿ ಮಾರಲಾಗಿದ್ದ ಕಳ್ಳಭಟ್ಟಿಯನ್ನು ಸೇವಿಸಿದ್ದರು. ಬುಧವಾರ ಬೆಳಗ್ಗೆ ಅವರ ಆರೋಗ್ಯ ಹದಗೆಟ್ಟಿತ್ತು. ಗುರುವಾರದ ವೇಳೆಗೆ 13 ಮಂದಿ ಸಾವನ್ನಪಿದ್ದರು. ದಿನಕಳೆದಂತೆ ಸಾವಿನ ಸಂಖ್ಯೆ ಆ ಬಳಿಕ ಏರುತ್ತಾ ಹೋಗಿ ಸೋಮವಾರದ ವೇಳೆಗೆ 100ರ ಗಡಿ ದಾಟಿತ್ತು.
ತಪ್ಪಿತಸ್ಥರನ್ನು ಗಲ್ಲಿಗೆ ಹಾಕಬೇಕು: ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವಿಸ್
ಇದೇ ವೇಳೆ ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಕಳ್ಳಭಟ್ಟಿ ದುರಂತದಲ್ಲಿ ನೂರಾರು ಮಂದಿಯ ಪ್ರಾಣ ಬಲಿ ತೆಗೆದುಕೊಂಡವರಿಗೆ ಗರಿಷ್ಠ ಶಿಕ್ಷೆ ನೀಡಬೇಕು ಎಂದು ಅವರು ಹೇಳಿದ್ದಾರೆ.
ಘಟನೆ ಸಂಬಂಧ ಇಂದು ಮಹಾರಾಷ್ಟ್ರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಫಡ್ನವಿಸ್ ಅವರು, ಅಧಿಕಾರಿಗಳಿಂದ ಮಾಹಿತ ಪಡೆದರು. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಫಡ್ನವಿಸ್ ಅವರು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.