ನವದೆಹಲಿ: 2014 ರ ಲೋಕಸಭೆ ಚುನಾವಣೆ ವೇಳೆ ಕೇಂದ್ರ ಚುನಾವಣಾ ಆಯೋಗಕ್ಕೆ ತಮ್ಮ ಶೈಕ್ಷಣಿಕ ವಿದ್ಯಾರ್ಹತೆ ಬಗ್ಗೆ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ತಪ್ಪು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಯ ತೀರ್ಪು ಬುಧವಾರ ಹೊರಬೀಳಲಿದೆ.
ಅರ್ಜಿ ವಿಚಾರಣೆ ನಡೆಸಿದ ದೆಹಲಿ ಮೆಟ್ರೋ ಪಾಲಿಟನ್ ಕೋರ್ಟ್ ನ ನ್ಯಾಯಮೂರ್ತಿ ಆಕಾಶ್ ಜೈನ್ ನಾಳೆ ತೀರ್ಪು ಪ್ರಕಟಿಸಲಿದ್ದಾರೆ.
ಲೇಖಕ ಅಹ್ಮಿರ್ ಖಾನ್ ಎಂಬುವರು ಸಚಿವೆ ಸ್ಮೃತಿ ಇರಾನಿ ವಿರುದ್ಧ ದೂರು ದಾಖಲಿಸಿದ್ದರು. ಅದರಲ್ಲಿ ಸಮೃತಿ ತಮ್ಮ ವಿದ್ಯಾಭ್ಯಾಸದ ಬಗ್ಗೆ ಚುನಾವಣಾ ಆಯೋಗಕ್ಕೆ ನೀಡಿರುವ ಪ್ರಮಾಣ ಪತ್ರದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ. ಎಂದು ದೂರಿದ್ದರು.
2004 ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಾಗ ಸ್ಮೃತಿ ಇರಾನಿ ತಾವು 1996 ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದಿಂದ ಬಿಎ ಪದವಿ ಪಡೆದಿದ್ದಾಗಿ ಪ್ರಮಾಣ ಪತ್ರ ನೀಡಿದ್ದರು. ಆದರೆ 2011 ರಲ್ಲಿ ರಾಜ್ಯಸಭೆಗೆ ಸ್ಪರ್ಧಿಸುವಾಗ ನೀಡಿದ್ದ ಪ್ರಮಾಣ ಪತ್ರದಲ್ಲಿ ತಾವು ಬಿಕಾಂ ವಿದ್ಯಾಭ್ಯಾಸ ಮಾಡಿದ್ದಾಗಿ ತಿಳಿಸಿದ್ದಾರೆ. ಇನ್ನು 2014 ಏಪ್ರಿಲ್ 16 ರಂದು ಲೋಕಸಭೆ ಚುನಾವಣೆಗೆ ಅಮೇಥಿಯಿಂದ ಸ್ಪರ್ಧಿಸುವಾಗ ತಾವು ಬಿ ಕಾಂ ಪದವಿ ಪಡೆದಿರುವುದಾಗಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು. ಹೀಗಾಗಿ ಅವರ ವಿದ್ಯಾಭ್ಯಾಸದ ಬಗ್ಗೆ ಸರಿಯಾದ ಮಾಹಿತಿ ನೀಡಬೇಕೆಂದು ಕೋರಿ ದೂರು ದಾಖಲಿಸಿದ್ದರು.