ರಾಯ್ಪುರ, ಜೂ.8: ಬಿಜೆಪಿ ಸಂಸದರೊಬ್ಬರು ಭದ್ರತಾ ಸಿಬ್ಬಂದಿ (ಮಹಿಳೆ) ವಿರುದ್ಧ ಕದನಕ್ಕಿಳಿದಿದ್ದ ಪ್ರಕರಣ ನಡೆದ ಬೆನ್ನಲ್ಲೆ ಈಗ ಮತ್ತೊಬ್ಬ ಬಿಜೆಪಿ ನಾಯಕ ಕೇಂದ್ರೀಯ ಕೈಗಾರಿಕಾ ಭದ್ರತಾ ಸಿಬ್ಬಂದಿಯನ್ನು ಹಿಗ್ಗಾಮುಗ್ಗ ನಿಂದಿಸಿದ ಘಟನೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ನಡೆದಿದ್ದು,ಈ ನಾಯಕ ಎಲ್ಲ ರಗಳೆ ಕ್ಯಾಮೆರಾದಲ್ಲಿ ದಾಖಲಾಗಿದೆ.
ರಾಯ್ಪುರ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದ್ದ ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರನ್ನು ಸ್ವಾಗತಿಸಲು ಬಿಜೆಪಿ ನಾಯಕ ಛಗನ್ ಮುಂಡ್ರಾ ತನ್ನ ಬೆಂಬಲಿಗರೊಂದಿಗೆ ಬಂದಿದ್ದರು. ವಿಮಾನ ನಿಲ್ದಾಣದಲ್ಲಿ ಭಾರೀ ಭದ್ರತೆ ಏರ್ಪಡಿಸಲಾಗಿತ್ತು. ಭದ್ರತಾ ಪಡೆಯವರು ಇವರನ್ನು ಒಳಕ್ಕೆ ಪ್ರವೇಶಿಸಲು ಬಿಡಲಿಲ್ಲ. ಆಗ ಸಿಬ್ಬಂದಿ ಜತೆ ಸಂಘರ್ಷಕ್ಕಿಳಿದ ನಾಯಕ ಅವರನ್ನು ಹಿಗ್ಗಾಮುಗ್ಗ ನಿಂದಿಸಿದ್ದಲ್ಲದೆ, ಸಿಬ್ಬಂದಿಗೆ ಬೆದರಿಕೆಯನ್ನೂ ಹಾಕಿದ.
ನಾನು ಬಿಜೆಪಿ ಲೀಡರ್ ಗೊತ್ತೆ. ನಿಮ್ಮನ್ನು ವಿಚಾರಿಸಿಕೊಳ್ಳುತ್ತೇನೆ. ನನಗೆ ಪ್ರವೇಶ ನಿರಾಕರಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಅಬ್ಬರಿಸಿದ ನಾಯಕ ಮತ್ತು ಸಿಬ್ಬಂದಿ ನಡುವಣ ಈ ವಾಗ್ವಾದ, ಬೆದರಿಕೆ ಎಲ್ಲವೂ ಕ್ಯಾಮೆರಾದಲ್ಲಿ ದಾಖಲಾಗಿದೆ. ಕೆಲವು ದಿನಗಳ ಹಿಂದಷ್ಟೇ ಕೇಂದ್ರ ಸಚಿವ ಮತ್ತು ಬಿಜೆಪಿ ಸಂಸದ ರಾಮ್ಕೃಪಾಳ್ ಅವರು ಪಾಟ್ನಾದ ಲೋಕನಾಯಕ ಜಯಪ್ರಕಾಶ್ ವಿಮಾನ ನಿಲ್ದಾಣದಲ್ಲಿ ಎಗ್ಸಿಟ್ (ನಿರ್ಗಮನ) ದ್ವಾರದಿಂದ ಒಳಪ್ರವೇಶಿಸುತ್ತಿದ್ದರು. ಆಗ ಸಿಬ್ಬಂದಿ ಅವರನ್ನು ತಡೆದು, ಇನ್ನೊಂದು (ಆಗಮನ) ಗೇಟ್ನಿಂದ ಬರುವಂತೆ ಸೂಚಿಸಿದ್ದರು. ಇದರಿಂದ ಕೆಂಡಾಮಂಡಲರಾಗಿದ್ದ ಯಾದವ್ ಸಿಬ್ಬಂದಿ ಮೇಲೆ ಏರಿ ಹೋಗಿ ಬಾಯ್ಗೆ ಬಂದಂತೆ ಬೈದಿದ್ದರು. ಅದು ಕೂಡ ಕ್ಯಾಮೆರಾ ಕಣ್ಣಿಗೆ ಬಿದ್ದಿತ್ತು.