ನವದೆಹಲಿ,ಮೇ 13- ಕೇಂದ್ರ ಸರ್ಕಾರದ ಜಾಹಿರಾತು ನೀತಿ ಕುರಿತಂತೆ ಮಹತ್ವದ ತೀರ್ಪು ನೀಡಿರುವ ಸರ್ವೋಚ್ಚ ನ್ಯಾಯಾಲಯ, ಸಾರ್ವಜನಿಕ ಜಾಹಿರಾತುಗಳಲ್ಲಿ ರಾಷ್ಟ್ರಪತಿ, ಪ್ರಧಾನಿ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಹೊರತಾಗಿ ಯಾವುದೇ ಮುಖ್ಯಮಂತ್ರಿ ಅಥವಾ ಸಚಿವರ ಭಾವಚಿತ್ರಗಳನ್ನು ಪ್ರಕಟಿಸದಂತೆ ಮಾರ್ಗದರ್ಶಿ ಸೂತ್ರವೊಂದನ್ನು ಪ್ರಕಟಿಸಿದೆ. ಕೇಂದ್ರ ಸರ್ಕಾರ ನೀಡುವ ಸಾರ್ವಜನಿಕ ಜಾಹಿರಾತುಗಳಲ್ಲಿ ರಾಷ್ಟ್ರಪತಿ, ಪ್ರಧಾನಿ ಹಾಗೂ ಮುಖ್ಯ ನ್ಯಾಯಮೂರ್ತಿಗಳಂತಹ ಕೆಲ ನಿರ್ದಿಷ್ಟ ಗಣ್ಯರ ಭಾವಚಿತ್ರಗಳನ್ನು ಮಾತ್ರ ಪ್ರಕಟಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಸರ್ಕಾರದ ನೀತಿ, ನಿರ್ಧಾರಗಳಲ್ಲಿ ನ್ಯಾಯಾಂಗ ಹಸ್ತಾಕ್ಷೇಪ ಮಾಡದಂತೆ ಆದೇಶಿಸಬೇಕು ಎಂದು ಕೇಂದ್ರ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸಾರಾ ಸಗಟಾಗಿ ತಳ್ಳಿ ಹಾಕಿದ ನ್ಯಾಯಾಧೀಶ ರಂಜನ್ ಗೋಗೋಮ್ ಅವರ ನೇತೃತ್ವದ ಪೀಠ, ಎಲ್ಲಿ ಯಾವುದೇ ನೀತಿಯಾಗಲಿ, ಕಾಯ್ದೆಯಾಗಲಿ ಇರುವುದಿಲ್ಲವೋ ಅಲ್ಲೆಲ್ಲ ನ್ಯಾಯಾಲಯಗಳು ಧಾರಾಳವಾಗಿ ಕ್ರಮ ಕೈಗೊಳ್ಳಬಹುದು ಎಂದು ಹೇಳಿದೆ.
ಜಾಹಿರಾತು ನೀತಿ ನಿಯಂತ್ರಣಕ್ಕೆ ಮೂವರು ಸದಸ್ಯರನ್ನೊಳಗೊಂಡ ಸಮಿತಿಯೊಂದನ್ನು ರಚಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಮೊದಲು ಕೇಂದ್ರ ಸರ್ಕಾರದ ಜಾಹಿರಾತು ಮಾರ್ಗಸೂಚಿ ತಯಾರಿಸಲು ಸರ್ವೋಚ್ಛ ನ್ಯಾಯಲಯ ನೇಮಿಸಿದ್ದ ಪೆÇ್ರ.ಎನ್.ಆರ್.ಮಾಧವ ಮೆನನ್ ನೇತೃತ್ವದ ಸಮಿತಿ ನೀಡಿರುವ ಅನೇಕ ಶಿಫಾರಸುಗಳನ್ನು ನ್ಯಾಯಾಲಯ ಸ್ವೀಕರಿಸಿದೆ. ಆದರೆ, ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಯಾವುದೇ ಗಣ್ಯರ ಭಾವಚಿತ್ರಗಳನ್ನು ಜಾಹಿರಾತಿನಲ್ಲಿ ಪ್ರಕಟಿಸಬಾರದು ಎಂಬ ಮೆನನ್ ಸಮಿತಿ ಶಿಫಾರಸನ್ನು ನ್ಯಾಯಾಲಯ ಒಪ್ಪಿಕೊಂಡಿಲ್ಲ. ಹಾಗಾಗಿ ರಾಷ್ಟ್ರಪತಿ, ಪ್ರಧಾನಿ, ಮುಖ್ಯ ನ್ಯಾಯಾಧೀಶರ ಫೆÇೀಟೊ ಪ್ರಕಟಿಸಲು ಸಮ್ಮತಿಸಿದೆ. ಸರ್ಕಾರದ ಎಲ್ಲಾ ವಿಷಯಗಳಿಗೂ ನ್ಯಾಯಾಂಗ ಮೂಗು ತೂರಿಸಬಾರದು. ಸರ್ಕಾರಕ್ಕೆ ತನ್ನದೇ ಆದ ಕಾರ್ಯಕ್ರಮಗಳಿವೆ. ನ್ಯಾಯಾಂಗದ ಮಿತಿ ಹೊರತಾಗಿಯೂ ಸರ್ಕಾರಕ್ಕೆ ವಿಶೇಷ ಜವಾಬ್ದಾರಿಗಳಿರುತ್ತವೆ ಎಂದು ಸರ್ಕಾರದ ಅಡ್ವೋಕೇಟ್ ಜನರಲ್(ಎಜಿ) ನ್ಯಾಯಾಲಯದ ಎದುರು ವಾದ ಮಂಡಿಸಿದ್ದರು. ಆದರೆ ಎಜಿ ಅವರ ವಾದವನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ.