ರಾಷ್ಟ್ರೀಯ

ಹೈಕೋರ್ಟ್ ತೀರ್ಪಿನಿಂದ ಕುಲುಮೆಯಲ್ಲಿ ಕಾಯ್ದ ಬಳಿಕ ಹೊಳೆಯುವ ಚಿನ್ನದಂತಾಗಿದ್ದೇನೆ: ಜಯಾ

Pinterest LinkedIn Tumblr

jaya3

ಚೆನ್ನೈ: ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಆರೋಪ ಮುಕ್ತರಾಗಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರು, ಎರಡು ದಿನಗಳ ಕಾಲ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡದಂತೆ ಸಿಎಂ ಓ.ಪನ್ನೀರ್ ಸೆಲ್ವಂ ಅವರಿಗೆ ಸೋಮವಾರ ಸೂಚಿಸಿದ್ದಾರೆ.

ಕರ್ನಾಟಕ ಹೈಕೋರ್ಟ್ ಜಯಲಲಿತಾ ಅವರು ನಿರ್ದೋಷಿ ಎಂದು ತೀರ್ಪು ನೀಡುತ್ತಿದ್ದಂತೆ, ಪನ್ನೀರ್ ಸೆಲ್ವಂ ಅವರು ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸಕ್ಕೆ ಆಗಮಿಸಿದ್ದರು. ಈ ವೇಳೆ ಎಲ್ಲರಿಂದಲೂ ಅಭಿನಂದನೆ ಸ್ವೀಕರಿಸಿದ ಜಯಾ, ನಂತರ ಪನ್ನೀರ್ ಸೆಲ್ವಂ ಅವರೊಂದಿಗೆ ಚರ್ಚೆ ನಡೆಸಿದರು. ಚರ್ಚೆಯ ವೇಳೆ ಇನ್ನೂ ಎರಡು ದಿನ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡದಂತೆ ಪನ್ನೀರ್ ಸೆಲ್ವಂಗೆ ಜಯಲಲಿತಾ ಸೂಚಿಸಿದ್ದಾರೆ ಎನ್ನಲಾಗಿದೆ.

ಇನ್ನು ಕರ್ನಾಟಕ ಹೈಕೋರ್ಟ್ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿದ ತಮಿಳುನಾಡು ಮಾಜಿ ಸಿಎಂ, ರಾಜಕೀಯ ದುರುದ್ದೇಶದ ಸುಳಿಯಿಂದ ನನಗೆ ಮುಕ್ತಿ ಸಿಕ್ಕಿದೆ. ತೀರ್ಪಿನಿಂದ ನಾನು ತಪ್ಪು ಮಾಡಿಲ್ಲ ಎಂಬುದು ಸಾಬೀತಾಗಿದೆ ಮತ್ತು ಇದರಿಂದ ನನಗೆ ಮತ್ತಷ್ಟು ಮೆರಗು ಸಿಕ್ಕಂತಾಗಿದೆ. ಕುಲುಮೆಯಲ್ಲಿ ಕಾಯ್ದ ಬಳಿಕ ಹೊಳೆಯುವ ಚಿನ್ನದಂತಾಗಿದ್ದೇನೆ ಎಂದು ಹೇಳಿದ್ದಾರೆ.

ಇದೇ ವೇಳೆ ಎಐಎಡಿಎಂಕೆ ಕಾರ್ಯಕತರು ಯಾರೂ ತಮ್ಮ ನಿವಾಸದ ಬಳಿ ಬರಬಾರದು. ಎಲ್ಲರೂ ತಮ್ಮ ತಮ್ಮ ದೇವರಲ್ಲಿ ಪ್ರಾರ್ಥನೆ ಮಾಡಲಿ ಎಂದು ಜಯಲಲಿತಾ ಪಕ್ಷದ ಕಾರ್ಯರಿಗೆ ಕರೆ ನೀಡಿದ್ದಾರೆ.

Write A Comment