ನವದೆಹಲಿ: ಸೋಮವಾರದಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಇತ್ತೀಚಿನ ದೆಹಲಿ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿರುವ ಕೇಂದ್ರ ಸರ್ಕಾರವು ಮಧ್ಯಮ ವರ್ಗದ ವಿಶ್ವಾಸವನ್ನು ಮರಳಿ ಗಳಿಸುವ ಉದ್ದೇಶದಿಂದ ಫೆ.28ರಂದು ‘ಜನಸಾಮಾನ್ಯ ಸ್ನೇಹಿ’ ಬಜೆಟ್ ಮಂಡಿಸುವ ನಿರೀಕ್ಷೆ ಇದೆ.
ಹಣಕಾಸು ಸಚಿವ ಜೇಟ್ಲಿ ಅವರು 2014ರಲ್ಲಿ ಮೊದಲ ಬಜೆಟ್ ಮಂಡಿಸುವ ಸಂದರ್ಭದಲ್ಲೇ ವೈಯಕ್ತಿಕ ತೆರಿಗೆದಾರರ ಹೊರೆ ಇಳಿಸಲು ಬಯಸುವುದಾಗಿ ಹೇಳಿದ್ದರು. ಇದನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲವು ಕ್ರಮಗಳನ್ನೂ ಪ್ರಕಟಿಸಿದ್ದರು. ಈ ವರ್ಷ ಕೂಡ ಅವರು ಇದನ್ನು ಮುಂದುವರಿಸುವ ನಿರೀಕ್ಷೆ ಇದೆ. ಇದಕ್ಕಾಗಿ ತೆರಿಗೆ ಶ್ರೇಣಿಗಳ ಮಿತಿ ಹೆಚ್ಚಿಸುವ ಅಥವಾ ಉಳಿತಾಯದ ಗರಿಷ್ಠ ಮಿತಿ ಹೆಚ್ಚಿಸುವ ತಂತ್ರಕ್ಕೆ ಅವರು ಮೊರೆಹೋಗಬಹುದು.
ಈ ನಡುವೆ, ಬಜೆಟ್ ಅಧಿವೇಶನವು ಎನ್ಡಿಎ ಸರ್ಕಾರದ ಪಾಲಿಗೆ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ. ಭೂಸ್ವಾಧೀನ ಸುಗ್ರೀವಾಜ್ಞೆ ವಿಚಾರದಲ್ಲಿ ವಿರೋಧ ಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಲಕ್ಷಣಗಳಿವೆ.
ಸಂಸತ್ತಿನಲ್ಲಿ ಸುಗಮ ಕಲಾಪದ ವಾತಾವರಣ ನಿರ್ಮಿಸಿಕೊಳ್ಳುವ ಯತ್ನವಾಗಿ ಮೋದಿ ಅವರು ಭಾನುವಾರ ಸರ್ವ ಪಕ್ಷಗಳ ಸಭೆ ನಡೆಸಿದರು. ‘ಬಜೆಟ್ ಅಧಿವೇಶನವು ಅತ್ಯಂತ ಮಹತ್ವದ್ದಾಗಿದ್ದು, ಸಾಮಾನ್ಯ ಜನರು ಇದರೆಡೆಗೆ ಅಪಾರ ಆಶಾಭಾವ ಮತ್ತು ನಿರೀಕ್ಷೆಗಳನ್ನು ಹೊಂದಿದ್ದಾರೆ. ಹೀಗಾಗಿ ಎಲ್ಲ ಪಕ್ಷಗಳು ಸುಗಮ ಕಲಾಪಕ್ಕೆ ಸಹಕರಿಸಬೇಕು’ ಎಂದು ಮನವಿ ಮಾಡಿದರು. ‘ನೀವು ಎತ್ತಿರುವ ಎಲ್ಲ ವಿಷಯಗಳ ಬಗ್ಗೆ ಅವುಗಳ ಆದ್ಯತೆ, ಪ್ರಾಮುಖ್ಯಕ್ಕೆ ತಕ್ಕಂತೆ ಚರ್ಚಿಸಲು ಅವಕಾಶ ಕಲ್ಪಿಸಲಾಗುವುದು’ ಎಂದರು.
ಸೋನಿಯಾ ಮನೆಗೆ ನಾಯ್ಡು: ಈ ಸಭೆಗೆ ಮುನ್ನವೇ ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮನೆಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದರು. ಅಧಿವೇಶನದ ವೇಳೆ ಪಕ್ಷದ ಸಹಕಾರದ ಕುರಿತು ಅವರು ಚರ್ಚಿಸಿದರು. ಇದು ಬಿಜೆಪಿ ಅಧಿವೇಶನದ ವೇಳೆ ಪ್ರತಿಪಕ್ಷಗಳೊಂದಿಗೆ ಹೊಂದಾಣಿಕೆಗೆ ಅಪೇಕ್ಷಿಸುತ್ತಿರುವುದರ ದ್ಯೋತಕ ಎನ್ನಲಾಗಿದೆ.
ಪ್ರತಿಪಕ್ಷಗಳ ಪಟ್ಟು: ಆದರೆ, ಪ್ರತಿಪಕ್ಷಗಳು ಸಂಸತ್ತಿನಲ್ಲಿ ಹಾಕಲು ಉದ್ದೇಶಿಸಿರುವ ಪಟ್ಟುಗಳನ್ನು ಸಡಿಲಿ-ಸುವ ಸಾಧ್ಯತೆ ಕಾಣುತ್ತಿಲ್ಲ. ಮುಖ್ಯವಾಗಿ ಭೂಸ್ವಾಧೀನ ಕಾಯ್ದೆ ಸುಗ್ರೀವಾಜ್ಞೆಯ ವಿಷಯದಲ್ಲಿ ಸರ್ಕಾರವನ್ನು ಹಣಿಯಲು ಅವು ಕಾಯುತ್ತಿವೆ. ‘ಈಗ ಸರ್ಕಾರವು ಒಟ್ಟು ಆರು ಸುಗ್ರೀವಾಜ್ಞೆಗಳಿಗೆ ಸಂಸತ್ತಿನ ಅನುಮೋದನೆ ಪಡೆಯಬೇಕಿದೆ. ಈ ಪೈಕಿ ಐದು ಸುಗ್ರೀವಾಜ್ಞೆಗಳ ಬಗ್ಗೆ ಪ್ರತಿಪಕ್ಷಗಳಲ್ಲಿ ಒಮ್ಮತವಿದೆ. ಆದರೆ ಭೂಸ್ವಾಧೀನ ಸುಗ್ರೀವಾಜ್ಞೆಯನ್ನು ಕೆಲವು ಪ್ರತಿಪಕ್ಷಗಳು ವಿರೋಧಿಸುತ್ತಿವೆ’ ಎಂದು ವೆಂಕಯ್ಯನಾಯ್ಡು ಒಪ್ಪಿಕೊಂಡಿದ್ದಾರೆ.
‘ಸೋನಿಯಾ ಜತೆಗಿನ ಮಾತುಕತೆ ಸೌಹಾರ್ದತೆಯಿಂದ ಕೂಡಿತ್ತು. ಅವರು ಕೂಡ ಭೂಸ್ವಾಧೀನ ಸುಗ್ರೀವಾಜ್ಞೆಯ ಬಗ್ಗೆ ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ. ‘ಜನರಿಗೆ ಅನುಕೂಲ ಕಲ್ಪಿಸದ ಸುಗ್ರೀವಾಜ್ಞೆ ಮತ್ತು ಮಸೂದೆಗಳನ್ನು ಕಾಂಗ್ರೆಸ್ ಬೆಂಬಲಿಸುವುದಿಲ್ಲ’ ಎಂದು ರಾಜ್ಯಸಭೆಯಲ್ಲಿನ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಸ್ಪಷ್ಟಪಡಿಸಿದ್ದಾರೆ.
‘ಈಗಿನ ಭೂಸ್ವಾಧೀನ ಸುಗ್ರೀವಾಜ್ಞೆಯು ಬ್ರಿಟಿಷ್ ಆಳ್ವಿಕೆ ಅವಧಿಯಲ್ಲಿದ್ದ ಭೂಕಾನೂನಿಗಿಂತ ಕಠೋರವಾಗಿದೆ’ ಎಂದು ಜೆಡಿಯು ಅಧ್ಯಕ್ಷ ಶರದ್ ಯಾದವ್ ಹೇಳಿದ್ದಾರೆ. ಭೂ ಕಾನೂನಿನಲ್ಲಿ ಏನೇನು ಬದಲಾವಣೆ ಮಾಡಲಾಗಿದೆ ಎಂಬುದನ್ನು ಪರಾಮರ್ಶಿಸುವ ಸಲುವಾಗಿ ಮಸೂದೆ ಕರಡನ್ನು ಸಂಸತ್ತಿನ ಸ್ಥಾಯಿಸಮಿತಿಗೆ ಸಲ್ಲಿಸಬೇಕು ಎಂದು ಐಎನ್ಎಲ್ಡಿ ನಾಯಕ ದುಷ್ಯಂತ್ ಚೌತಾಲಾ ಹೇಳಿದ್ದಾರೆ.
***
ಮೊದಲ ಹಂತದಲ್ಲಿ ಅಧಿವೇಶನವು ಮಾರ್ಚ್ 20ರವರೆಗೆ ನಡೆಯಲಿದೆ. ನಂತರ, ಒಂದು ತಿಂಗಳ ಬಿಡುವಿನ ನಂತರ ಏಪ್ರಿಲ್ 20ರಿಂದ ಎರಡನೇ ಹಂತದ ಅಧಿವೇಶನ ಆರಂಭವಾಗಿ ಮೇ 8ರವರೆಗೆ ನಡೆಯಲಿದೆ. ಸರ್ಕಾರವು ಆರು ಸುಗ್ರೀವಾಜ್ಞೆಗಳಿಗೆ ಮೊದಲ ಹಂತದಲ್ಲೇ ಸಂಸತ್ತಿನ ಅನುಮೋದನೆ ಪಡೆಯಬೇಕಿದೆ.
ಬಜೆಟ್ನಲ್ಲಿ ಏನಿರಬಹುದು?
*ವೈಯಕ್ತಿಕ ಆದಾಯ ತೆರಿಗೆ ಮಿತಿ ಹೆಚ್ಚಿಸಬಹುದು ಅಥವಾ ಗರಿಷ್ಠ ಉಳಿತಾಯದ ಮಿತಿ ಹೆಚ್ಚಿಸಬಹುದು
*ಆರೋಗ್ಯ ವಿಮೆ ಗರಿಷ್ಠ ಮೊತ್ತವನ್ನು ಹೆಚ್ಚಿಸಿ ಇನ್ನಷ್ಟು ತೆರಿಗೆ ವಿನಾಯಿತಿಗೆ ಅವಕಾಶ ಮಾಡಿಕೊಡಬಹುದು
*ಪಿಂಚಣಿ ನಿಧಿಗಳಲ್ಲಿ ಹೂಡಿಕೆಗೆ ಉತ್ತೇಜನ
*ಎಲ್ಟಿಎ (ಪ್ರವಾಸ ಭತ್ಯೆ) ಮೂಲಕ ಹೆಚ್ಚಿನ ತೆರಿಗೆ ವಿನಾಯಿತಿಗೆ ಅವಕಾಶ ಕಲ್ಪಿಸಬಹುದು
*ಕಾರ್ಪೊರೇಟ್ ಕಂಪೆನಿಗಳಿಂದ ಬಂಡವಾಳ ಸೆಳೆಯಲು ಕ್ರಮ
*‘ಭಾರತದಲ್ಲೇ ತಯಾರಿಸಿ’ ಕರೆಯ ಭಾಗವಾಗಿ ಉತ್ಪಾದನಾ ವಲಯ ಉತ್ತೇಜಿಸಲು ಕ್ರಮ