ನವದೆಹಲಿ: ಸುರಿಯುವ ಮಳೆಯನ್ನು ಲೆಕ್ಕಿಸದೆ 66ನೇ ಗಣರಾಜ್ಯೋತ್ಸವದಲ್ಲಿ ಭಾರತದ ರಕ್ಷಣಾ ಸಾಮರ್ಥ್ಯ ಹಾಗೂ ಸಾಂಸ್ಕೃತಿಕ ವೈಭವ ನವದೆಹಲಿಯಲ್ಲಿ ಅನಾವರಣಗೊಂಡಿತ್ತು. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರ ಗಣ್ಯ ಹಾಜರಿಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ನರೇಂದ್ರ ಮೋದಿ, ಸೇನಾ ಮುಖ್ಯಸ್ಥರು ಸಮ್ಮುಖದಲ್ಲಿ ಬೆಳಗ್ಗೆಯಿಂದಲೂ ಭಾರತೀಯ ಸೇನೆ ಹಾಗೂ ವಿವಿಧ ರಕ್ಷಣಾ ಪಡೆಗಳ ಕವಾಯತು ಪ್ರದರ್ಶನ ಆರಂಭವಾಯಿತು. ಅತ್ಯಂತ ಅಚ್ಚುಕಟ್ಟಾಗಿ ಶಿಸ್ತುಬದ್ಧ ಕವಾಯತು ನೋಡುಗರ ಕಣ್ಮನ ಸೆಳೆಯಿತು.
ಇದೇ ಪ್ರಥಮ ಬಾರಿಗೆ ವಾಯುಪಡೆ, ನೌಕಾಪಡೆ ಹಾಗೂ ಭೂಸೇನೆಯಲ್ಲಿರುವ ಮಹಿಳಾ ಕಮ್ಯಾಂಡರ್ಗಳ ಕವಾಯತು ಎಲ್ಲರ ಗಮನಸೆಳೆಯಿತು. ಸಿಆರ್ಪಿಎಫ್, ಭಾರತೀಯ ಕೈಗಾರಿಕಾ ಭದ್ರತಾ ಪಡೆ, ಐಟಿಬಿಪಿ, ಎನ್ಸಿಸಿ, ದೆಹಲಿ ಪೊಲೀಸರು ಕವಾಯತು ಪ್ರದರ್ಶನದಲ್ಲಿ ಭಾಗವಹಿಸಿದ್ದರು.
ಮಾಜಿ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಮಳೆಯಿಂದ ರಕ್ಷಣೆ ಪಡೆಯಲು ರೈನ್ಕೋಟ್ ಧರಿಸಿ ಗಣ್ಯರ ಸಾಲಿನಲ್ಲಿ ಆಸೀನರಾಗಿದ್ದರು. ಕರ್ನಾಟಕ ಸರ್ಕಾರದಿಂದ ರಚಿಸಲಾಗಿದ್ದ ಸ್ತಬ್ಧ ಚಿತ್ರ ಮೊದಲ ಸಾಲಿನಲ್ಲಿ ಆಗಮಿಸಿತು. ಕರ್ನಾಟಕ ಕರಕುಶಲತೆಯನ್ನು ಮೇಳೈಸಿದ್ದ ಈ ಸ್ತಬ್ದ ಚಿತ್ರ ಹೆಚ್ಚು ಆಕರ್ಷಣೀಯವಾಗಿತ್ತು. ಆಂಧ್ರಪ್ರದೇಶದಿಂದ ಮಹಿಳೆಯ ನೃತ್ಯ ಹಾಗೂ ಮಕ್ಕಳು ಗಾಳಿಪಟ ಹಾರಿಸುವ ಸ್ತಬ್ಧ ಚಿತ್ರವು ಹೆಚ್ಚು ಗಮನಸೆಳೆಯಿತು. ಮಹಾರಾಷ್ಟ್ರದಿಂದ ಪಂಡಪುರ ಭಕ್ತರನ್ನು ಬಿಂಬಿಸುವ ಸ್ತಬ್ಧ ಚಿತ್ರ, ಅರುಣಾಚಲ ಪ್ರದೇಶದಿಂದ ಇಗ್ಯೂ ಡ್ಯಾಮ್ಸ್, ಛತ್ತೀಸ್ಘಡ, ಹರಿಯಾಣ, ಜಮ್ಮುಕಾಶ್ಮೀರ, ಉತ್ತರ ಪ್ರದೇಶದ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
ಇದೇ ಮೊದಲ ಬಾರಿಗೆ ನೂತನ ರಾಜ್ಯ ತೆಲಂಗಾಣ ಬಾನುಲು ಹಬ್ಬ ಆಚರಣೆಯ ಸ್ತಬ್ಧ ಚಿತ್ರವನ್ನು ಮೆರವಣಿಗೆಯಲ್ಲಿ ಭಾಗವಹಿಸಿತ್ತು. ಮೆಕ್ ಇನ್ ಇಂಡಿಯಾ ಸಂದೇಶ ಸಾರುವ ಯಂತ್ರೋಪಕರಣಗಳ ಚಿತ್ರ, ಆಯುರ್ವೇದ, ಯೋಗ, ಸಿದ್ಧ , ಯುನಾನಿ ಚಿಕಿತ್ಸಾ ಪದ್ಧತಿಯನ್ನು ಪ್ರಚಾರ ಮಾಡುವ ಆಯುಷ್ ಇಲಾಖೆ ಸ್ತಬ್ಧಚಿತ್ರಗಳು ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದವು. ಭಾರತದ ಕಲೆ, ಸಾಂಸ್ಕೃತಿಕ ಲೋಕವೇ ಗಣರಾಜ್ಯೋತ್ಸವದಂದು ಅನಾವರಗೊಂಡಿತ್ತು.
ಈ ಅಭೂತಪೂರ್ವ ಕ್ಷಣಗಳನ್ನು ಕಣ್ತುಂಬಿಕೊಂಡ ಒಬಾಮ
ನವದೆಹಲಿ, ಜ.26-ಹಿಂದೆಂದೂ ಕಂಡು ಕೇಳರಿಯದ ಭಾರಿ ಬಿಗಿ ಭದ್ರತೆಯಲ್ಲಿ ರಾಜಧಾನಿ ದೆಹಲಿಯಲ್ಲಿ ಸಂಭ್ರಮ, ಸಡಗರ ಮತ್ತು ಭಾರತದ ಅಪಾರ ಶಕ್ತಿ ಸಾಮರ್ಥ್ಯಗಳನ್ನು ವಿಶ್ವದೆದುರು ಪ್ರದರ್ಶಿಸುವ 66ನೇ ಗಣರಾಜ್ಯೋತ್ಸವಕ್ಕೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಪತ್ನಿ ಮಿಶೆಲ್ ಸಾಕ್ಷಿಯಾದರು. ಮಳೆ-ಚಳಿಯ ನಡುವೆಯೇ ದೇಶಭಕ್ತಿಯ ಕಿಚ್ಚನ್ನು ಬಡಿದೆಬ್ಬಿಸುವ ಈ ಅಭೂತಪೂರ್ವ ಕ್ಷಣಗಳನ್ನು ಒಬಾಮ ಹಾಗೂ ಸಾವಿರಾರು ಗಣ್ಯರು ಕಣ್ತುಂಬಿಕೊಂಡರು.
ಮಾವೊಉಗ್ರರ ಭೀತಿ:
ಯಾವುದೇ ಸಂದರ್ಭ ಮಾವೊವಾದಿ ಉಗ್ರರು ರಾಜ್ಪಥ್ನ ಪರೇಡ್ನಲ್ಲಿ ವಿದ್ವಂಸಕ ಕೃತ್ಯಗಳನ್ನು ನಡೆಸಬಹುದು ಎಂಬ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ಸಾವಿರಾರು ಭದ್ರತಾ ಸಿಬ್ಬಂದಿ, ನಾಗರಿಕ ಉಡುಪಿನಲ್ಲಿ ಮಂಕಿಕ್ಯಾಪ್, ಮಫ್ಲರ್ಗಳನ್ನು ಧರಿಸಿ ಪ್ರತಿ ವ್ಯಕ್ತಿಯ ಪ್ರತಿ ಚಲನವಲನಗಳನ್ನೂ ಪರಿಶೀಲಿಸುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು. ಭಾರತಕ್ಕೆ ಅಮೆರಿಕ ಅಧ್ಯಕ್ಷರ ಭೇಟಿ ಹಾಗೂ ಗಣರಾಜ್ಯೋತ್ಸವದಲ್ಲಿ ಅವರು ಪಾಲ್ಗೊಳ್ಳುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಮಾವೊ ಉಗ್ರರು ನಿನ್ನೆ ಛತ್ತೀಸ್ಗಢದಲ್ಲಿ ಕರಪತ್ರಗಳನ್ನು ಹಂಚಿಹೋಗಿದ್ದರು. ರಾಜ್ಪಥ್ನಲ್ಲಿ ನಡೆಯುವ ಗಣರಾಜ್ಯೋತ್ಸವದ ವೈಭವದ ಮೆರವಣಿಗೆಗೆ ಅಡ್ಡಿ ಪಡಿಸುವುದಾಗಿಯೂ ಕೆಂಪು ಉಗ್ರರು ಘೋಷಿಸಿದ್ದರು.