ನವದೆಹಲಿ: ಪಾಕಿಸ್ತಾನ ಭಯೋತ್ಪಾದನೆಯ ವಿರುದ್ಧ ಹೋರಾಟದಲ್ಲಿ ಗಂಭೀರವಾಗಿದ್ದಲ್ಲಿ, ಮುಂಬೈ ಭಯೋತ್ಪಾದನಾ ದಾಳಿಯ ಪ್ರಮುಖ ಆರೋಪಿ ಹಫೀಜ್ ಸಯ್ಯದ್ ಮತ್ತು ದಾವುದ್ ಇಬ್ರಾಹಿಮ್ ಅವರನ್ನು ಭಾರತಕ್ಕೆ ಒಪ್ಪಿಸಬೇಕೆಂದು ಭಾರತ ಪಾಕಿಸ್ತಾನಕ್ಕೆ ಗುರುವಾರ ಆಗ್ರಹಿಸಿದೆ.
ಪೇಶಾವರ್ ನಲ್ಲಿ ನಡೆದ ಉಗ್ರಗಾಮಿಗಳ ದಾಳಿಯ ಹಿನ್ನಲೆಯಲ್ಲಿ ಪಾಕಿಸ್ತಾನದ ಪ್ರಧಾನಮಂತ್ರಿ ನವಾಜ್ ಶರೀಫ್ ಎಚ್ಚೆತ್ತು, ಭಯೋತ್ಪಾದನೆಯನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕೇಂದ್ರ ಲೋಕಸಭಾ ವ್ಯವಹಾರಗಳ ಸಚಿವ ವೆಂಕಯ್ಯ ಸಾಯ್ಡು ಹೇಳಿದ್ದಾರೆ.
“ಪಾಕಿಸ್ತಾನ ಭಯೋತ್ಪಾದನೆಯ ವಿರುದ್ಧ ಹೋರಾಟದಲ್ಲಿ ಗಂಭೀರವಾಗಿದ್ದಲ್ಲಿ, ಹಫೀಜ್ ಸಯ್ಯದ್ ಮತ್ತು ದಾವುದ್ ಇಬ್ರಾಹಿಮ್ ಇವರನ್ನು ಬಂಧಿಸಿ ಕೂಡಲೆ ಭಾರತಕ್ಕೆ ಒಪ್ಪಿಸಬೇಕು.. ನವಾಜ್ ಶರೀಫ್ ಈ ಅವಕಾಶವನ್ನು ಬಳಸಿಕೊಂಡು ಭಯೋತ್ಪಾದನೆ ನಿಗ್ರಹಿಸಲು ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದು ನಂಬಿದ್ದೇನೆ” ಎಂದು ಲೋಕಸಭೆಯ ಹೊರಾಂಗಣದಲ್ಲಿ ಹೇಳಿದ್ದಾರೆ.
ಸಯ್ಯದ್ ಭಯೋತ್ಪಾದನೆಯ ಪ್ರಮುಖ ಪ್ರಚಾರಕ ಎಂದಿರುವ ನಾಯ್ಡು, ಮನುಷ್ಯತ್ವದ ದ್ವೇಷಿ ಅವನು ಎಂದು ಕರೆದಿದ್ದಾರೆ. ನೆನ್ನೆ ಪಾಕಿಸ್ತಾನದ ಖಾಸಗಿ ವಾಹಿಸಿಯೊಂದರಲ್ಲಿ ಮಾತನಾಡಿದ ಹಫೀಜ್ ಸಯ್ಯದ್, ಪೇಶಾವರದಲ್ಲಿ ನಡೆದ ದಾಳಿಗೆ ಭಾರತವನ್ನು ದೂಷಿಸಿದ್ದರು. ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಸಯ್ಯದ್ ವಿಶ್ವದಲ್ಲಿ ‘ಮೋಸ್ಟ್ ವಾಂಟೆಡ್ ಮ್ಯಾನ್’ ಪಟ್ಟಿಯಲ್ಲಿದ್ದಾನೆ. ಈತನ ಹೇಳಿಕೆಯನ್ನು ಪಾಕಿಸ್ತಾನದ ಯಾವುದೇ ರಾಜಕಾರಿಣಿ ಖಂಡಿಸಿಲ್ಲ.