ಕೋಲ್ಕತ್ತಾ: ನವೆಂಬರ್ ೩೦ ರಂದು ಕೋಲ್ಕತ್ತಾದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಚುನಾವಣಾ ಪ್ರಚಾರ ಸಭೆ ನಡೆಸಲು ನಗರ ಸಭೆ ಅನುಮತಿ ನಿರಾಕರಿಸಿದೆ.
ಸಾಮಾನ್ಯವಾಗಿ ತೃಣಮೂಲ ಕಾಂಗ್ರೆಸ್ ಪಕ್ಷ ಜುಲೈ ೨೧ ರಂದು ಹುತಾತ್ಮರ ದಿನಾಚರಣೆ ನಡೆಸುವ ವಿಕ್ಟೊರಿಯಾ ಹೌಸ್ ನಲ್ಲೆ ಪ್ರಚಾರ ಸಭೆಗೆ ಬಿಜೆಪಿ ಅನುಮತಿ ಕೋರಿತ್ತು. ವಾಹನ ದಟ್ಟಣೆ ಮತ್ತು ಕಾನೂನು ಸುವ್ಯವಸ್ಥೆಯ ಕಾರಣ ಹೇಳಿ ಪೊಲೀಸರು ಅನುಮತಿ ನಿರಾಕರಿಸಿದ್ದರು.
ಜುಲೈ ನಲ್ಲೆ ಅನುಮತಿಗೆ ಕೋರಿದ್ದ ಬಿಜೆಪಿ, ನವೆಂಬರ್ ೩೦ ಭಾನುವಾರವಾಗಿದ್ದು ಪೊಲೀಸರು ನೀಡಿರುವ ಕಾರಣ ಸಮರ್ಪಕವಾಗಿಲ್ಲ ಎಂದು, ಕೋಲ್ಕತ್ತ ಉಚ್ಛ ನ್ಯಾಯಾಲಯದಲ್ಲಿ ಈ ನಿರ್ಧಾರವನ್ನು ಪ್ರಶ್ನಿಸಿತ್ತು. ಆದರೆ ನ್ಯಾಯಾಲಯ ನಗರ ಸಭೆ ಮತ್ತು ಪ್ರಾದೇಶಿಕ ಅಗ್ನಿ ಸುರಕ್ಷತಾ ಅಧಿಕಾರಿಗಳಿಂದ ಪರವಾನಗಿ ಪಡೆಯುವಂತೆ ಸೂಚಿಸಿತ್ತು.
ಈಗ ಇದೇ ಕಾರಣಗಳಿಗೆ ಕಲ್ಕತ್ತಾ ನಗರ ಸಭೆ ಅನುಮತಿ ನಿರಾಕರಿಸಿದ್ದು ಬಿಜೆಪಿ ಪಾಳಯದಲ್ಲಿ ಆಕ್ರೋಶ ಸೃಷ್ಟಿಸಿದೆ.