ದಿಂಡಿಗಲ್ (ತಮಿಳುನಾಡು), ಸೆ.14: ಚಾಲಕನ ನಿಯಂತ್ರಣ ಕಳೆದುಕೊಂಡು ಟಯರ್ ಸ್ಫೋಟಿಸಿ ಎದುರಿನಿಂದ ಬರುತ್ತಿದ್ದ ಲಾರಿಗೆ ಗುದ್ದಿದ ಪರಿಣಾಮ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ ದಿಂಡಿಗಲ್ ಬಳಿ ಮುಂಜಾನೆ ಸಂಭವಿಸಿದೆ.
ದಿಂಡಿಗಲ್ ಸಮೀಪದ ತಮರೈಪಡಿ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ವೆಂಕಟಾಚಲಂ (37), ಪತ್ನಿ ಗೀತಾ (35), ಸಹೋದರಿ ಭಾನು (42), ವೆಂಕಟಾಚಲಂ ಪುತ್ರ ಬಾಲಾಜಿ (11), ವಾಹನ ಚಾಲಕ ಮೋಹನ್ ಹಾಗೂ ಸಂಬಂಧಿ ಶಾಂತಿ (41) ಎಂಬುವರು ಮೃತಪಟ್ಟಿದ್ದಾರೆ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವೆಂಕಟಾಚಲಂ ಅವರು ತಮ್ಮ ಪುತ್ರನನ್ನು ಬಿಟ್ಟು ಬರಲು ಕುಟುಂಬ ಸಮೇತ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಡೈಕೆನಾಲ್ ಸಮೀಪದ ತಂಡಿಗುಡಿ ಎಂಬಲ್ಲಿಗೆ ತೆರಳುತ್ತಿದ್ದ ವೇಳೆ ಕಾರಿನ ಚಕ್ರ ಇದ್ದಕ್ಕಿದ್ದಂತೆ ಸ್ಫೋಟಗೊಂಡಿತು. ಇದರ ಪರಿಣಾಮ ಎದುರಿನಿಂದ ಬರುತ್ತಿದ್ದ ಲಾರಿಗೆ ಗುದ್ದಿದ್ದರಿಂದ ಆರು ಜನರು ಸಾವನ್ನಪ್ಪಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಅಪಘಾತ ಎಷ್ಟು ಭೀಕರವಾಗಿತ್ತೆಂದರೆ, ಮೃತ ದೇಹಗಳು ಗುರುತು ಸಿಗಲಾರದಷ್ಟು ವಿಕಾರವಾಗಿವೆ. ಅಲ್ಲದೆ, ಕಾರು ಕೂಡ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿದವರನ್ನು ದಿಂಡಿಲ್ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಶವಗಳನ್ನು ಹಸ್ತಾಂತರ ಮಾಡಲಾಗಿದೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.