ಗಲ್ಫ್

ಜಮ್ಮು-ಕಾಶ್ಮೀರದಲ್ಲಿ ಅರಬ್‌ ಸಂಯುಕ್ತ ರಾಷ್ಟ್ರದ ಉದ್ಯಮಿಗಳು ಹೂಡಿಕೆಗೆ ಪ್ರಧಾನಿ ಮೋದಿ ಕರೆ

Pinterest LinkedIn Tumblr

ಅಬುಧಾಬಿ: ಜಮ್ಮು-ಕಾಶ್ಮೀರದಲ್ಲಿ ಅರಬ್‌ ಸಂಯುಕ್ತ ರಾಷ್ಟ್ರದ ಉದ್ಯಮಿಗಳು ಹೂಡಿಕೆ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ.

ಯುಎಇ ಪ್ರವಾಸದ ಭಾಗವಾಗಿ ಇಲ್ಲಿನ ಅನಿವಾಸಿ ಭಾರತೀಯ ಉದ್ಯಮಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ”ದೇಶದಲ್ಲಿ ಪ್ರಸ್ತುತ ರಾಜಕೀಯ ಸ್ಥಿರತೆ ನೆಲೆಸಿದೆ. ಸರಕಾರದ ನೀತಿಗಳ ವಿಚಾರದಲ್ಲೂ ನಿರೀಕ್ಷಿಯ ಚೌಕಟ್ಟಿದೆ. ಹೀಗಾಗಿ ಭಾರತ ಹೂಡಿಕೆಗೆ ಆಕರ್ಷಕ ತಾಣವಾಗಿ ಮಾರ್ಪಟ್ಟಿದೆ. ಜಮ್ಮು-ಕಾಶ್ಮೀರ ಭಾರತದ ಪ್ರಗತಿಯ ಎಂಜಿನ್‌ ಆಗಲಿದ್ದು, ವಿಶೇಷವಾಗಿ ಅಲ್ಲಿ ಉದ್ಯಮಿಗಳು ಹೆಚ್ಚೆಚ್ಚು ಹೂಡಿಕೆ ಮಾಡಬೇಕು,” ಎಂದು ಮನವಿ ಮಾಡಿದರು.

”ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ ನಲ್ಲಿ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ದೀರ್ಘಕಾಲದ ತನಕ ಈ ಪ್ರದೇಶಗಳು ಯಾವುದೇ ಅಭಿವೃದ್ಧಿ ಕಂಡಿರಲಿಲ್ಲ. 370ನೇ ವಿಧಿಯ ರದ್ದು ಹಾಗೂ ರಾಜ್ಯ ಪುನರ್‌ ವಿಂಗಡಣೆಯೊಂದಿಗೆ ಅಲ್ಲಿನ ವಾತಾವರಣ ಬದಲಾಗಿದೆ. ಅಲ್ಲಿ ಉದ್ಯಮ, ಉದ್ಯೋಗಾವಕಾಶ ಮತ್ತು ಆದಾಯ ಹೆಚ್ಚಿಸಲು ಸರಕಾರ ಪಣ ತೊಟ್ಟಿದೆ. ಇದಕ್ಕಾಗಿ ಸಾಕಷ್ಟು ಯೋಜನೆಗಳನ್ನು ಸರಕಾರ ಕೈಗೊಳ್ಳುತ್ತಿದೆ” ಎಂದು ಹೇಳಿದರು.

ಹಾದಿ ತಪ್ಪಿದ್ದ ಯುವಕರು: ”ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿಯಿಂದಾಗಿ ಆ ರಾಜ್ಯವು ಭಾರತದ ಇತರೆ ರಾಜ್ಯಗಳಿಗಿಂತ ಭಿನ್ನವಾಗಿತ್ತು. ಅಲ್ಲಿನ ಯುವಕರನ್ನು ಅಕ್ಷರಶಃ ‘ಏಕಾಂಗಿ’ಗಳನ್ನಾಗಿಸಲಾಗಿತ್ತು. ಯುವ ಜನತೆಯನ್ನು ತಪ್ಪು ಹಾದಿಗೆ ಹೊರಳಿಸಿ, ಅವರನ್ನು ಹಿಂಸಾಚಾರ ಮತ್ತು ಭಯೋತ್ಪಾದನೆಗೆ ಪ್ರಚೋದಿಸಲಾಗುತ್ತಿತ್ತು. ಆದರೆ, 370ನೇ ವಿಧಿ ರದ್ದು ಮಾಡಿದ ಬಳಿಕ ಈಗ ಅಲ್ಲಿ ಸಂಪೂರ್ಣ ಪ್ರಜಾಪ್ರಭುತ್ವ ನೆಲೆಸಿದೆ. ಮುಕ್ತ, ಪಾರದರ್ಶಕ ವಾತಾವರಣ ನೆಲೆಸಿದೆ. ಸಾಂವಿಧಾನಿಕವಾಗಿಯೂ ಈಗ ಅದು ಭಾರತದೊಂದಿಗೆ ಸಮಾನತೆ ಕಂಡಿದೆ,” ಎಂದರು.

Comments are closed.