ಗಲ್ಫ್

ಕನ್ನಡದ ಡಿಂಡಿಮ ಬಾರಿಸಿದ ಕನ್ನಡ ಸಂಘ ಅಲ್ ಐನ್; 15ನೇ ವಾರ್ಷಿಕೋತ್ಸವ ಸಮಾರಂಭ

Pinterest LinkedIn Tumblr

ಅರಬ್ ಸಂಯುಕ್ತ ಸಂಸ್ಥಾನದ ಉಧ್ಯಾನವನ ನಗರಿ ಎಂದೇ ಪ್ರಸಿದ್ದಿ ಪಡೆದಿರುವ ಅಲ್ ಐನ್ ವಿಭಾಗದಲ್ಲಿ ಹದಿನೈದು ವರ್ಷಗಳ ಹಿಂದೆ ಅಭಿಮಾನಿ ಕನ್ನಡಿಗರು ಸ್ಥಾಪಿಸಿ ಯಶಸ್ವಿ ಹೆಜ್ಜೆಯೊಂದಿಗೆ ಮುನ್ನಡೆದು ಇದೀಗ ತನ್ನ 15ನೇ ವಾರ್ಷಿಕೋತ್ಸವ, ಮುಖ್ಯ ಸಂಘಟಕರಾದ ಶ್ರೀ ಕೆ. ಬಿ. ರಮೇಶ ಮತ್ತು ಕಾರ್ಯಕಾರಿ ಸಮಿತಿಯ ಆಶ್ರಯದಲ್ಲಿ ಅತ್ಯಂತ ವಿಜೃಂಬಣೆಯಿಂದ ಆಚರಿಸಲಾಯಿತು.

2018ನೇ ಏಪ್ರಿಲ್ 20ನೇ ತಾರೀಕಿನಂದು ಅಲ್ ಐನ್ ಹಿಲ್ಟನ್ ಹೋಟೆಲ್ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ ದಿನಪೂರ್ತಿ ನಡೆಯಿತು. ಮುಖ್ಯ ಅತಿಥಿಯಾಗಿ ಜೆ.ಎಸ್.ಎಸ್. ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಶ್ರೀ ಅಶೋಕ್ ಪಾಲ್ಯ ಹಾಗೂ ಅತಿಥಿಗಳಾಗಿ ಶ್ರೀ ಮೋಹಿತ್ ಚತ್ರುವೇದಿ, ಶಾರ್ಜಾ ಕರ್ನಾಟಕ ಸಂಘ ಪೂರ್ವ ಅಧ್ಯಕ್ಷರಾದ ಶ್ರೀ ಬಿ. ಕೆ. ಗಣೇಶ್ ರೈ ಮತ್ತು ಹಿರಿಯ ಬೆಂಬಲಿಗರು ಅರ್ಶದ್ ಶರೀಫ್ ಭಾಗವಹಿಸಿದ್ದರು.

ಶ್ರೀ ಫಾರೂಕ್‍ರವರ ಕುರಾನ್ ಪಠಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ ಶ್ರೀಮತಿ ಕಾಮಿನಿ ಸರ್ವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಮುಖ್ಯ ಅತಿಥಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸಮ್ಮುಖದಲ್ಲಿ ಜ್ಯೋತಿಬೆಳಗಿಸಿ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು.

ಶ್ರೀಮತಿ ಕಾಮಿನಿ ತಂಡದವರ ಸಮೂಹ ಗೀತೆ, ಮಕ್ಕಳ ನೃತ್ಯ ಮೂರು ತಂಡದವರ ನೃತ್ಯ, ಶ್ರೀ ಲೋಬೊ ತಂಡದವರಿಂದ ಕೊಂಕಣಿ ಬೈಲಾ ಗೀತೆ ಮತ್ತು ತಂಡದವರ ಕೋಂಕಣಿ ನೃತ್ಯ, ಪುಟಾಣಿ ಮಕ್ಕಳಿಂದ ಫ್ಯಾಶನ್ ಶೋ ಹಾಗೂ ಎಲ್ಲಾ ಪ್ರದರ್ಶಗಳು ಸರ್ವರ ಮನ ಸೆಳೆಯಿತು.
ಮುಖ್ಯ ಅತಿಥಿ ಶ್ರೀ ಅಶೋಕ್ ಪಾಲ್ಯ, ಶ್ರೀ ಮೋಹಿತ್ ಚತ್ರುವೇದಿ, ಶ್ರೀ ಅರ್ಶದ್ ಶರೀಫ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶ್ರೀ ಬಿ. ಕೆ. ಗಣೇಶ್ ರೈಯವರಿಗೆ “ವಿಶ್ವ ಮಾನ್ಯ ಕನ್ನಡ ರತ್ನ” ಪ್ರಶಸ್ತಿ ಪ್ರಧಾನ
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಳೆದ ಎರಡು ದಶಕ ಗಳಿಂದ ಕನ್ನಡ ಭಾಷೆ ಕಲೆ ಸಂಸ್ಕೃತಿ, ಸಾಹಿತ್ಯ ಮತ್ತು ಸಮಾಜ ಸೇವೆ, ರಕ್ತದಾನ ಅಭಿಯಾನದ ಮೂಲಕ ಅಪಾರ ಸೇವೆ ಸಲ್ಲಿಸಿರುವ ಮೂಲತ ಕೊಡಗು ಜಿಲ್ಲೆಯವರಾದ ಕ್ರಿಯಾತ್ಮಕ ಕಲಾ ನಿರ್ದೇಶಕ ಶ್ರೀ ಬಿ. ಕೆ. ಗಣೆಶ್ ರೈಯವರಿಗೆ ಕನ್ನಡ ಸಂಘ ಅಲ್ ಐನ್ ಮುಖ್ಯ ಸಂಘಟಕರಾದ ಶ್ರೀ ಕೆ. ಬಿ.ರಮೇಶ್ ರವರು “ವಿಶ್ವ ಮಾನ್ಯ ಕನ್ನಡ ರತ್ನ” ಪ್ರಶಸ್ತಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರ ಸಮ್ಮುಖದಲ್ಲಿ ಪ್ರಧಾನಿಸಿ ಸನ್ಮಾನಿಸಿ ಗೌರವಿಸಲಾಯಿತು. ಶ್ರೀ ಯು. ಪಿ. ಹರೀಶ್ ಸನ್ಮಾನ ಪತ್ರ ವಾಚಿಸಿದರು.

ಕನ್ನಡ ಸಂಘ ಅಲ್ ಐನ್ ಸ್ಥಾಪನೆಯಾದ ವರ್ಷದಿಂದ ನಿರಂತರವಾಗಿ ಸೇವೆ ಸಲ್ಲಿಸಿದ ಶ್ರೀ ನಿತ್ಯಾನಂದ ಶೆಟ್ಟಿ ಹಾಗೂ ಡಾ ಬೋರಪ್ಪ ಮತ್ತು ಶ್ರೀ ರೋನಾಲ್ಡ್ ಎಡ್ವಿನ್ ಲೋಬೊರವರ ಸೇವೆಯನ್ನು ಅಭಿನಂಧಿಸಿ ಸನ್ಮಾನಿಸಿ ಗೌರವಿಸಲಾಯಿತು.

ಶಿಕ್ಷಣ ಕ್ಶೇತ್ರದಲ್ಲಿ ಸಾಧನೆ ಮಾಡಿರುವ ಕು| ಅಮೋಘ ಶೆಟ್ಟಿಗೆ ತಂದೆ ತಾಯಿಯವರ ಸಮ್ಮುಖದಲ್ಲಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ನೃತ್ಯ ನಿರ್ದೇಶಕಿ ಶ್ರೀಮತಿ ಶಾಲಿನಿ ಡಿ’ಸೋಜಾ ರವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕನ್ನಡ ಸಂಘ ಅಲ್ ಐನ್ ಎಲ್ಲಾ ಕಾರ್ಯಕ್ರಮಗಳಿಗೆ ಬೆಂಬಲ ಪ್ರೋತ್ಸಾಹ, ಪ್ರಾಯೋಜಕತ್ವ ನೀಡಿದ ಎಲ್ಲ ಪ್ರಾಯೋಜಕರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಅರಬ್ ಸಂಯುಕ್ತ ಸಂಸ್ಥಾದ ಸುಂದರ ಒಂಟೆ ಮರುಭೂಮಿಯ ನಿಧಿ “ಹಮಾರ್ ಅನ್ ನಾಮ್” ಒಂಟೆಯ ಕುರಿತು ಸಂಶೋಧನೆ ನಡೆಸಿ ಗ್ರಂಥವನ್ನು ಲೋಕಾರ್ಪಣೆ ಮಾಡಿರುವ ಕು. ಅಧಿತಿ ಬೆಳಮೆ ಕುಮಾರ್ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಹಲವಾರು ವರ್ಷಗಳಿಂದ ಕಾರ್ಯಕಾರಿ ಸಮಿತಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ಕನ್ನಡ ಸಂಘ ಅಲ್ ಐನ್ ಯಶಸ್ವಿಯಾಗಿ ಮುನ್ನಡೆಯಲು ಕಾರಣಕರ್ತರಾದ ಇಪ್ಪತೈದು ಮಂದಿ ಸದಸ್ಯರನ್ನು ಅಭಿನಂದಿಸಿ ಸನ್ಮಾನಿಸಿ ಗೌರವಿಸಲಾಯಿತು.

ಭೋಜನದ ನಂತರ ಕಾರ್ಯಕಾರಿ ಸಮಿತಿಯ ಸದಸ್ಯರಿಂದ ಸ್ಕೂಲ್ ಮೇಸ್ಟ್ರು ಹಾಸ್ಯ ಪ್ರಹಸನ , ಬಾಲಕೀಯರ ತಂಡದಿಂದ ರಾಮಾಯಣ ನೃತ್ಯ, ಶ್ರೀ ಪುರುಷೋತ್ತಮ ತಂಡದವರ ಪ್ರಹಸನ ನಡೆಯಿತು.

ಡಾ. ಬಿ. ಎನ್. ಕುಮಾರ್ ಆದೃಷ್ಟ ಚೀಟಿ ಡ್ರಾದ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ಮುಖ್ಯ ಸಂಘಟಕರಾದ ಶ್ರೀ ಕೆ. ಬಿ. ರಮೇಶ್ ರವರು ಸರ್ವರಿಗೂ ವಂದನೆಗಳನ್ನು ಸಲ್ಲಿಸಿದರು.

ಶ್ರೀ ಫಾರೂಕ್ ಮತ್ತು ಶ್ರೀಮತಿ ಸವಿತಾ ನಾಯಕ್ ಕಾರ್ಯಕ್ರಮ ನಿರೂಪಣೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿ ಕೊಟ್ಟರು.

ಕನ್ನಡ ಸಂಘ ಅಲ್ ಐನ್ ಕಳೆದ ಒಂದುವರೆ ದಶಕಗಳಿಂದ ವೇದಿಕೆಯಲ್ಲಿ ಮಕ್ಕಳಿಗೆ ಸೂಕ್ತ ವೇದಿಕೆ ಕಲ್ಪಿಸಿ, ಕನ್ನಡ ಭಾಷೆ ಸಂಸ್ಕೃತಿ ಜಾನಪದಗಳಲ್ಲಿ ಅಭಿಮಾನ ಮೂಡಿಸುವಲ್ಲಿ ಯಶಸ್ಸು ಕಂಡಿದೆ. ಉತ್ಸಾಹಿ ತಂಡದೊಂದಿಗೆ ಕನ್ನಡ ಭಾಷೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಅಲ್ ಐನ್ ವಿಭಾಗದಲ್ಲಿ ಕನ್ನಡ ನಾಡು ನುಡಿ ಸಂಸ್ಕೃತಿ, ನವಜಾಗೃತಿಯನ್ನು ಮೂಡಿಸಿದೆ. ನವಚೇತನ ನಿರ್ಮಾಣವಾಗಿದೆ. ಅಲ್ ಐನ್ ವಿಭಾಗದ ಅಭಿಮಾನಿ ಕನ್ನಡಿಗರ ನಿರಂತರ ಬೆಂಬಲ ಪ್ರೋತ್ಸಾಹ, ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆಯಿಂದಾಗಿ ಹದಿನೈದನೆಯ ವಾರ್ಷಿಕೋತ್ಸವ ಯಶಸ್ವಿಯಾಗಿದೆ.

Comments are closed.