ದುಬೈ: ಸೂಪರ್ ಸ್ಟಾರ್ ಶ್ರೀದೇವಿ ಸಾವಿನ ಪ್ರಕರಣ ಮೇಲ್ನೋಟಕ್ಕೆ ಕಂಡು ಬಂದಷ್ಟು ಸರಳವಾಗಿಲ್ಲ ಎಂಬುದು ಸೋಮವಾರ ಮಧ್ಯಾಹ್ನದ ನಂತರದ ಬೆಳವಣಿಗೆಗಳಿಂದ ಖಚಿತವಾಗಿದೆ. ಈ ಹಿಂದೆ ಆಕೆ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಬಳಿಕ ಆಕೆ ಹೋಟೆಲ್ ರೂಮಿನ ಬಾತ್ ಟಬ್ ನಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದನ್ನು ಆಕೆಯ ಪತಿ ಬೋನಿ ಕಪೂರ್ ನೋಡಿದರು ಎಂದು ಹೇಳಲಾಗಿತ್ತು.
ಆಕೆಯ ಪಾರ್ಥಿವ ಶರೀರವನ್ನು ಮುಂಬೈಗೆ ತರಲು ಉದ್ಯಮಿ ಅನಿಲ್ ಅಂಬಾನಿಯ ವಿಶೇಷ ಖಾಸಗಿ ವಿಮಾನ ರವಿವಾರವೇ ದುಬೈ ಗೆ ಹೋಗಿತ್ತು.
ರವಿವಾರ ರಾತ್ರಿಯೇ ಪಾರ್ಥಿವ ಶರೀರ ಮುಂಬೈ ತಲುಪಲಿದೆ ಹಾಗು ಸೋಮವಾರ ಮಧ್ಯಾಹ್ನ ಮುಂಬೈಯ ವಿಲೇಪಾರ್ಲೆಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಹೇಳಲಾಗಿತ್ತು. ಇದಕ್ಕಾಗಿ ದೇಶದ ವಿವಿಧೆಡೆಗಳಿಂದ ಸಿನಿಮಾ ತಾರೆಯರು , ಅಭಿಮಾನಿಗಳು ಮುಂಬೈ ಆಗಲೇ ತಲುಪಿದ್ದಾರೆ.
ಆದರೆ ಈ ನಡುವೆ ದುಬೈಯಲ್ಲಿ ಬೇರೆಯೇ ಬೆಳವಣಿಗೆಗಳು ವರದಿಯಾಗಿವೆ. ಶ್ರೀದೇವಿ ಮೃತದೇಹದ ಮರಣೋತ್ತರ ಪರೀಕ್ಷೆಯಲ್ಲಿ ಆಕೆ ಪ್ರಜ್ಞಾಹೀನಳಾಗಿ ಬಳಿಕ ಬಾತ್ ಟಬ್ ನ ನೀರಿನಲ್ಲಿ ಮುಳುಗಿದ್ದಾಗಿ ಕಂಡು ಬಂದಿದೆ. ಜೊತೆಗೆ ಆಕೆಯ ದೇಹದಲ್ಲಿ ಆಲ್ಕೋಹಾಲ್ ಅಂಶಗಳು ಇರುವುದು ಪತ್ತೆಯಾಗಿವೆ. ಈಗ ದುಬೈ ಪೊಲೀಸರು ಆಕೆಯ ಪತಿ ಬೋನಿ ಕಪೂರ್ ಹಾಗು ಹೋಟೆಲ್ ಸಿಬ್ಬಂದಿಯನ್ನು ವಿಚಾರಣೆಗೆ ಕರೆದಿದ್ದಾರೆ.
ಇದಲ್ಲದೆ ಶ್ರೀದೇವಿಯ ಫೋನ್ ಕರೆಗಳ ವಿವರಗಳನ್ನು ಕಲೆಹಾಕಿ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ನಿಧನರಾಗುವ 24 ರಿಂದ 48 ಗಂಟೆಗಳ ಹಿಂದಿನ ದೂರವಾಣಿ ಕರೆಗಳ ಬಗ್ಗೆ ಪೋಲೀಸರಿಂದ ತನಿಖೆ. ಒಬ್ಬ ವ್ಯಕ್ತಿಯಿಂದ ಹಲವಾರು ಬಾರಿ ಬಂದಿರುವ ಕರೆಗಳ ಮೇಲೆ ಪೋಲೀಸರ ಕಣ್ಣು ಬಿದ್ದಿದೆ. ಇದು ಯಾರ ಕರೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ.
ಶ್ರೀದೇವಿ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ದುಬೈ ಪ್ರಾಧಿಕಾರಗಳಿಂದ ಅನುಮತಿ ಸಿಕ್ಕಿದೆ ಎಂದು ಹೇಳಿದ್ದ ಅಲ್ಲಿನ ಭಾರತೀಯ ರಾಯಭಾರಿ ನವದೀಪ್ ಸಿಂಗ್ ಸೂರಿ ಈಗ ಅನುಮತಿ ಈ ಕ್ಷಣ ಸಿಕ್ಕಿಲ್ಲ. ನಾವು ಪ್ರಯತ್ನಿಸುತ್ತಿದ್ದೇವೆ. ಇನ್ನು ಬೇಗ ಸಿಗಬಹುದು ಎಂದು ಹೇಳಿದ್ದಾರೆ.
ಹಾಗಾಗಿ ಸೂಪರ್ ಸ್ಟಾರ್ ಶ್ರೀದೇವಿ ಸಾವು ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು ಇಂದು ಮೃತದೇಹ ಮುಂಬೈಗೆ ಬರುವುದು ಅನುಮಾನ.
ಪ್ರಕರಣವನ್ನು ದುಬೈ ಪೊಲೀಸರು ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಗೆ ವಹಿಸಿರುವುದು ಗಮನಾರ್ಹವಾಗಿದೆ. ಅಲ್ಲಿ ಎಲ್ಲ ಕಾನೂನು ಪ್ರಕ್ರಿಯೆಗಳು ಸಂಪೂರ್ಣ ಮುಗಿದ ಬಳಿಕವೇ ಪಾರ್ಥಿವ ಶರೀರ ಭಾರತಕ್ಕೆ ಹೊರಡಲಿದೆ.
Comments are closed.