ಬಹರೈನ್;ದ್ವೀಪದ ಕನ್ನಡಿಗರ ಬಹು ನಿರೀಕ್ಷಿತ ಕನ್ನಡ ಸಾಂಸ್ಕ್ರತಿಕ ಕಾರ್ಯಕ್ರಮವಾದ “ರಾಮೀ ರಸ ಸಂಜೆ-2014 ” ಸ್ಥಳೀಯ ಇಂಡಿಯನ್ ಕ್ಲಬ್ಬಿನ ಹೊರಾಂಗಣ ಕ್ರೀಡಾಂಗಣದಲ್ಲಿ ಅಭೂತಪೂರ್ವ ಪ್ರದರ್ಶನಕಂಡು ನೆರೆದ ಸುಮಾರು ಒಂದು ಸಾವಿರದ ಆರನೂರಕ್ಕೂ ಹೆಚ್ಚು ಕನ್ನಡಿಗರನ್ನು ರಂಜಿಸಿತು.
ಇಲ್ಲಿನ ಶತಮಾನೋತ್ಸವದ ಸಂಭ್ರಮದಲ್ಲಿರುವ ಪ್ರತಿಷ್ಟಿತ ಇಂಡಿಯನ್ ಕ್ಲಬ್ಬಿನ ಆಶ್ರಯದಲ್ಲಿ ಶತಮಾನೋತ್ಸವದ ಅಂಗವಾಗಿ “ನಮ್ಮ ಕನ್ನಡ ಬಹರೈನ್” ಆಯೋಜಿಸಿದ್ದ ಈ ಕಾರ್ಯಕ್ರಮವು ನ್ರತ್ಯ ,ಹಾಡು ,ಹಾಸ್ಯಗಳ ಸಂಗಮವಾಗಿದ್ದು ನಾಡಿನ ಖ್ಯಾತ ಪ್ರಶಸ್ತಿ ವಿಜೇತ ಹಿನ್ನೆಲೆ ಗಾಯಕ ಕರ್ನಾಟಕ ಕಲಾಶ್ರೀ ರಮೇಶ್ಚಂದ್ರ ,ಹಿನ್ನೆಲೆ ಗಾಯಕಿ ಸಿಂಚನ್ ದೀಕ್ಷಿತ್ ,ನಟ ,ಗಾಯಕ ರವಿಶಂಕರ್ ಹಾಗು ಖ್ಯಾತ ಮಿಮಿಕ್ರಿ ಕಲಾವಿದ ದಯಾನಂದ್ ರವರು ಸುಮಾರು ಮೂರುವರೆ ಘಂಟೆಗಳ ಕಾಲ ದ್ವೀಪದ ಕನ್ನಡಿಗರಿಗೆ ಉತ್ಕ್ರಷ್ಟ ಮನೋರಂಜನೆಯನ್ನು ಒದಗಿಸುವಲ್ಲಿ ಸಫಲರಾದರೆ ,ಜನಪ್ರಿಯ ನಟ ಲವ್ಲೀ ಸ್ಟಾರ್ ಪ್ರೇಮ್ ತಮ್ಮ ಸರಳ ,ಸ್ನೇಹಪೂರ್ವಕ ನಡತೆಯಿಂದ ಅಭಿಮಾನಿಗಳೊಂದಿಗೆ ಬೆರೆತು ಎಲ್ಲರ ಮನಗೆದ್ದರಲ್ಲದೆ ತಮ್ಮ ಯಶಸ್ವೀ ಚಿತ್ರ “ನೆನಪಿರಲಿ ” ಯ ಹಾಡಿಗೆ ಸ್ಥಳೀಯ ನ್ರತ್ಯಪಟುಗಳೊಂದಿಗೆ ವೇದಿಕೆಯಲ್ಲಿ ಹೆಜ್ಜೆ ಹಾಕಿ ನೆರೆದ ಜನಸ್ತೋಮವನ್ನು ಮಂತ್ರಮುಗ್ದರನ್ನಾಗಿಸಿದರು .
ಅತ್ಯಂತಹ ಆಕರ್ಷಕವಾಗಿ ನಿರ್ಮಿಸಲ್ಪಟ್ಟ ವಿಶಾಲವಾದ ವೇದಿಕೆಯಲ್ಲಿ ಸಂಜೆ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಆರಂಬಿಸಲಾಯಿತು. ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೇಮ್ , ರವಿಶಂಕರ್ ವಿಶೇಷ ಅಥಿತಿಗಳಾಗಿ ರಾಮೀ ಸಮೂಹ ಸಂಸ್ಥೆಗಳ ಸಮೂಹ ಪ್ರಭಂದಕರಾದ ಶಾಂತಾರಾಮ್ ಶೆಟ್ಟಿ ಹಾಗು ಆಶಾ ಶಾಂತಾರಾಮ್ ಶೆಟ್ಟಿ ,ಯುವ ಉದ್ಯಮಿ ಪ್ರೆಸಿಡೆಂಟ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಶ್ರೀ ಮೊಹಮ್ಮದ್ ಸತ್ತಾರ್ ,,ಪ್ರುಡೆನ್ಷಿಯಲ್ ಮ್ಯಾನೇಜ್ಮೆಂಟ್ ನ ಆಡಳಿತ ನಿರ್ದೇಶಕರಾದ ಸುಧಾಕರ್ ಶೆಟ್ಟಿ ,ಬಂಟ್ಸ್ ಬಹರೈನ್ ನ ಮಾಜಿ ಅಧ್ಯಕ್ಷರಾದ ಅಮರನಾಥ್ ರೈ ,ಹಿರಿಯ ಅನಿವಾಸಿ ಕನ್ನಡಿಗರಾದ ಆರ್ .ವಿ . ಹೆಗ್ಡೆ ,ಡಿ. ರಮೇಶ್ ,ಇಂಡಿಯನ್ ಕ್ಲಬ್ಬಿನ ಅಧ್ಯಕ್ಷರಾದ ಶ್ರೀ ಆನಂದ್ ಲೋಬೋ ರವರು ಉಪಸ್ಥಿತರಿದ್ದರು . ಗಣ್ಯರುಗಳನ್ನು ವೇದಿಕೆಗೆ ಪುಷ್ಪ ಗುಚ್ಚಗಳನ್ನು ನೀಡಿ ಬರಮಾಡಿಕೊಳ್ಳುತ್ತಿದ್ದಂತೆಯೇ “ನಮ್ಮ ಕನ್ನಡ ಬಹರೈನ್ ” ನ ಸಂಘಟಕರಲ್ಲಿ ಒಬ್ಬರಾದ ಆಸ್ಟಿನ್ ಸಂತೋಷ್ ಕುಮಾರ್ ರವರು ಗಣ್ಯರುಗಳನ್ನು ಹಾಗು ನೆರೆದವರನ್ನು ಸ್ವಾಗತಿಸಿದ ನಂತರ ಎಲ್ಲರೂ ಒಂದಾಗಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.
ತದನಂತರ ನಾಡಿನಿಂದ ಬಂದಂತಹ ಕಲಾವಿದರುಗಳಾದ ಮಿಮಿಕ್ರಿ ದಯಾನಂದ್ ,ಗಾಯಕ ರಮೇಶ್ಚಂದ್ರ ,ನಟರುಗಳಾದ ರವಿ ಶಂಕರ್ ,ಪ್ರೇಂ ಹಾಗು ಗಾಯಕಿ ಸಿಂಚನ್ ದೀಕ್ಷಿತ್ ರವರನ್ನು ಶಾಲು ಹೊದಿಸಿ,ಫಲ ಪುಷ್ಪಗಳೊಂದಿಗೆ ಸ್ಮರಣಿಕೆಯನ್ನು ನೀಡಿ ಸಮ್ಮಾನಿಸಲಾಯಿತು. ಅಲ್ಲದೆ ಶತಮಾನೋತ್ಸವದ ಸಂಭ್ರಮದಲ್ಲಿರುವ ಇಂಡಿಯನ್ ಕ್ಲಬ್ಬಿನ ಜನಪ್ರಿಯ ಅಧ್ಯಕ್ಷರಾದ ಶ್ರೀ ಆನಂದ್ ಲೋಬೋರವರನ್ನು ಇಂಡಿಯನ್ ಕ್ಲಬ್ಬಿನ ಸರ್ವಾಂಗೀಣ ಅಭಿವ್ರದ್ಧಿಗೆ ಹಾಗು ಇತರ ಕ್ಷೇತ್ರಗಳಲ್ಲಿ ನೀಡಿರುವ ಅನನ್ಯ ಕೊಡುಗೆಯನ್ನು ಪರಿಗಣಿಸಿ ದ್ವೀಪದ ಸಮಸ್ತ ಕನ್ನಡಿಗರ ಪರವಾಗಿ ಶಾಲು ಹೊದಿಸಿ ,ಪೇಟ ಧಾರಣೆ ಮಾಡಿ ಫಲ ಪುಷ್ಪಗಳೊಂದಿಗೆ ಸ್ಮರಣಿಕೆಯನ್ನು ನೀಡಿ ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನೆರೆದವರನ್ನುದ್ದೇಶಿಸಿ ನಟ ಪ್ರೇಮ್ ರವರು ಮಾತನಾಡಿ ಮನುಷ್ಯ ಜೀವನದಲ್ಲಿ ಎಷ್ಟೇ ಮೇಲಕ್ಕೆರಿದರೂ ತನ್ನ ಹಳೆಯದನ್ನು ಮರೆಯದೆ,ಯಶಸ್ಸನ್ನು ತಲೆಗೇರಿಸಿಕೊಲ್ಲದೆ ಎಲ್ಲರೊಂದಿಗೆ ಬೆರೆತು ಬಾಳಬೇಕು ಎಂದು ಹೇಳಿದರಲ್ಲದೆ ದ್ವೀಪದ ಕನ್ನಡಿಗರ ಕನ್ನಡದ ಕಾಳಜಿಯನ್ನು ಮುಕ್ತ ಕಂಟದಿಂದ ಶ್ಲಾಗಿಸಿದರಲ್ಲದೆ ತಾವು ರಾಜ್ಯೋತ್ಸವದ ಕಾರ್ಯಕ್ರಮವನ್ನು ಬಹರೈನ್ ನಲ್ಲಿ ಅರ್ಥಪೂರ್ಣವಾಗಿ ಸಾವಿರಾರು ಕನ್ನಡಿಗರ ಮಧ್ಯೆ ಆಚರಿಸಿಕೊಳ್ಳುತ್ತಿರುವುದು ನಿಜಕ್ಕೂ ತಮ್ಮ ಜೀವನದಲ್ಲಿಯೇ ಮರೆಯಲಾಗದ್ದು ಎಂದು ಸಂತಸಪಟ್ಟರು .
ಶ್ರೀ ಆನಂದ್ ಲೋಬೋರವರು ಮಾತನಾಡಿ ‘ನಮ್ಮ ಕನ್ನಡ ಬಹರೈನ್” ನ ಕನ್ನಡ ಸಂಸ್ಕ್ರತಿ,ಕಲೆ,ಭಾಷೆಯನ್ನು ಉಳಿಸಿ,ಬೆಳೆಸುವ ನಿಟ್ಟಿನಲ್ಲಿ ಮಾಡುತ್ತಿರುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ,ಕನ್ನಡದ ಎಲ್ಲಾ ಚಟುವಟಿಕೆಗಳಿಗೆ ನನ್ನ ಪ್ರೋತ್ಸಾಹ ಸದಾ ಇದೆ ಎಂದರು . ಇದೆ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಪ್ರಾಯೋಜಕರುಗಳನ್ನು ಹಾಗು ಯಶಸ್ಸಿಗಾಗಿ ದುಡಿದ ಅನೇಕರನ್ನು ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು .
ತದನಂತರ ತೆರೆದುಕೊಂಡ ರಸಮಂಜರಿ ಲೋಕದಲ್ಲಿ ಮೊದಲಿಗೆ ಶ್ರೀಮತಿ ಚಂದ್ರಕಲಾ ಮೋಹನ್ ರವರ ನ್ರತ್ಯ ನಿರ್ದೇಶನದಲ್ಲಿ “ಕನ್ನಡಾಂಬೆಗೆ ನಮನ ” ಎನ್ನುವ ಸುಂದರ ನ್ರತ್ಯ ಪ್ರದರ್ಶನವಾಯಿತು . ಗಾಯಕ ರಮೇಶ್ಚಂದ್ರ ರವರು ಕಣ ಕಣದೆ ಶಾರದೇ ಹಾಡಿನೊಂದಿಗೆ ಸಂಗೀತ ಕಾರ್ಯಕ್ರಮವನ್ನು ಆರಂಬಿಸಿದರೆ ,ನಟ ,ಗಾಯಕ ರವಿಶಂಕರ್ ರವರು “ಎಂತಾ ಸೌಂದರ್ಯ ನೋಡು” ಹಾಡಿನೊಂದಿಗೆ ತಮ್ಮ ಗಾಯನ ಆರಂಬಿಸಿದರು .
ಗಾಯಕಿ ಸಿಂಚನ್ ದೀಕ್ಷಿತ್ ರವರು “ಗಗನವೇ ಬಾಗಿದೆ ” ಹಾಡಿನೊಂದಿಗೆ ಆರಂಭಿಸಿದರು . ನಂತರ ಇವರು ಮೂವರೂ ಜೊತೆಯಾಗಿ ಹಳೆಯ ,ಹೊಸ ಮಧುರ ಕನ್ನಡ ಚಲನಚಿತ್ರಗೀತೆಗಳನ್ನು ಹಾಡಿ ಸುಮಾರು ಮೂರುವರೆ ಘಂಟೆಗಳ ಕಾಲ ಸಂಗೀತ ಧಾರೆಯನ್ನು ಹರಿಸಿ ಕಿಕ್ಕಿರಿದು ನೆರೆದ ಕಲಾಭಿಮಾನಿಗಳಿಗೆ ನಾಡಿನ ಸಂಸ್ಕ್ರತಿಯ ಜೊತೆಗೆ ಉತ್ಕ್ರಷ್ಟ ಮಟ್ಟದ ಮನೋರಂಜನೆಯನ್ನು ಒದಗಿಸಿದರು. ನಾಡಿನ ಖ್ಯಾತ ಮಿಮಿಕ್ರಿ ಕಲಾವಿದ ಮಿಮಿಕ್ರಿ ದಯಾನಂದ್ ರವರು ತಮ್ಮ ಮಿಮಿಕ್ರಿ ಯಿಂದ,ಹಾಸ್ಯ ಚಟಾಕಿಗಳಿಂದ ಪ್ರೇಕ್ಷಕರ ಮನಗೆದ್ದರೆ, ಗಾಯಕ,ಗಾಯಕಿಯರು ಹಾಡುವ ಹಾಡುಗಳಿಗೆ ಶ್ರೀಮತಿ ಚಂದ್ರಕಲಾ ಮೋಹನ್ ರವರ ನ್ರತ್ಯ ಸಂಯೋಜನೆಯಲ್ಲಿ ರಂಗದಲ್ಲಿ ಮೂಡಿಬಂದ ನ್ರತ್ಯಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತ್ತು .
ಲವ್ಲೀ ಸ್ಟಾರ್ ಪ್ರೇಂ ಅಭಿನಯದ “ನೆನಪಿರಲಿ ” ಚಿತ್ರದ ಕೂರಕ್ಕು ಕಳ್ಳಿ ಕೆರೆ ಹಾಡಿಗೆ ನ್ರತ್ಯ ಪಟುಗಳು ನರ್ತಿಸುವಾಗ ಅಭಿಮಾನಿಗಳ ಒತ್ತಾಯದ ಮೇರೆಗೆ ಪ್ರೇಂ ವೇದಿಕೆಯ ಮೇಲೆ ಬಂದು “ಹೆಜ್ಜೆ ಹಾಕಿದಾಗ ನೆರೆದ ಜನರು ಹುಚ್ಚೆದ್ದು ತಾವು ಕುಣಿದು ತಮ್ಮ ನೆಚ್ಚಿನ ನಟನ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದರು. ಇದೇ ಸಂಧರ್ಬದಲ್ಲಿ ಪ್ರೇಮ್ ರವರು ಎಲ್ಲರ ಅಪೇಕ್ಷೆಯ ಮೇರೆಗೆ “ನೀರ ಬಿಟ್ಟು ನೆಲದ ಮೇಲೆ ” ಹಾಡನ್ನು ಹಾಡಿ ರಂಜಿಸಿದರು . ಜನಪ್ರಿಯ ನಟ ,ಗಾಯಕ ಶ್ರೀ ರವಿಶಂಕರ್ ರವರು ಮಾತನಾಡಿ “ಇದು ಬಹರೈನ್ ಗೆ ನನ್ನ ಮೂರನೆಯ ಭೇಟಿ . ನಿಮ್ಮೆಲ್ಲರ ಪ್ರೀತಿ , ವಿಶ್ವಾಸಕ್ಕ್ಕೆ ನಾನು ಮಾರು ಹೋಗಿದ್ದೇನೆ ,ಈವತ್ತು ನಾನು ಹಾಡುತ್ತಿರುವುದು ಕೂಡ ನೀವು ನನ್ನ ಮೇಲಿಟ್ಟಿರುವ ಪ್ರೀತಿ ,ವಿಶ್ವಾಸ್ಕ್ಕಾಗಿ ಎಂದರು ” .
ಶ್ರೀಯುತರಾದ ಆಸ್ಟಿನ್ ಸಂತೋಷ್ ,ಕಮಲಾಕ್ಷ ಅಮೀನ್, ವಿಜಯ್ ಬ್ರಹ್ಮ್ಮಾವರ್ ಹಾಗು ಶ್ರೀಮತಿ ಚಂದ್ರಕಲಾ ಮೋಹನ್ ರವರು ಈ ಕಾರ್ಯಕ್ರಮದ ಸಂಘಟಕರಾಗಿ ಕಾರ್ಯನಿರ್ವಹಿಸಿದ್ದು ಶ್ರೀ ಕಮಲಾಕ್ಷ ಅಮೀನ್ ಹಾಗು ಶ್ರೀಮತಿ ಚಂದ್ರಕಲಾ ಮೋಹನ್ ರವರು ಒಟ್ಟು ಕಾರ್ಯಕ್ರಮವನ್ನು ನಿರೂಪಿಸಿದರು .
ಚಿತ್ರ -ವರದಿ-ಕಮಲಾಕ್ಷ ಅಮೀನ್ .