ಕನ್ನಡ ವಾರ್ತೆಗಳು

ರೈಲ್ವೆ ಹಳಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಯುವಕ ಸಾವು : ಮೃತನ ಸಹೋದರಿಯಿಂದ ಕೊಲೆ ದೂರು

Pinterest LinkedIn Tumblr

Nithesh_Murder_ullala

ಉಳ್ಳಾಲ, ಮೇ 24: ತೊಕ್ಕೊಟ್ಟು ಸಮೀಪದ ರೈಲ್ವೆ ಹಳಿಯ ಬದಿಯಲ್ಲಿ ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ರವಿವಾರ ಮಧ್ಯಾಹ್ನ ಪತ್ತೆಯಾಗಿದ್ದ ಯುವಕ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಇದೀಗ ಇದೊಂದು ಕೊಲೆ ಎಂದು ಮೃತನ ಸಹೋದರಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಜಪ್ಪಿನಮೊಗರು ಮೂಲದ ಕೊಲ್ಯ ಕನೀರುತೋಟ ನಿವಾಸಿ ನಿತೇಶ್ ಶೆಟ್ಟಿ (27) ಸಾವನ್ನಪ್ಪಿದ ಯುವಕ.

ರವಿವಾರ ಮಧ್ಯಾಹ್ನ ತೊಕ್ಕೊಟ್ಟಿನ ಶಿವಾಜಿ ಫ್ರೆಂಡ್ಸ್ ಕ್ಲಬ್‌ನ ಹಿಂದುಗಡೆ ಇರುವ ರೈಲ್ವೆ ಹಳಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ನಿತೇಶ್ ಪತ್ತೆಯಾಗಿದ್ದರು. ಯಾರೋ ಯುವಕ ರೈಲು ಢಿಕ್ಕಿಯಾಗಿ ಬಿದ್ದಿದ್ದಾನೆ ಎಂದು ಗ್ರಹಿಸಿದ್ದ ಕ್ಲಬ್ ಸದಸ್ಯರು ಯುವಕನನ್ನು 108 ಆಂಬುಲೆನ್ಸ್ ಮೂಲಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿತೇಶ್ ಮೃತಪಟ್ಟಿದ್ದರು.

ಆದರೆ ಇದೀಗ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ನಿತೇಶ್ ಶೆಟ್ಟಿ ಮೃತಪಟ್ಟಿದ್ದಾನೆ ಎನ್ನಲಾಗಿದ್ದು, ನಿತೇಶ್ ಕೊನೆಯುಸಿರೆಳೆಯುವ ಸಂದರ್ಭದಲ್ಲಿ ಏರುಧ್ವನಿಯಿಂದ ಅವಿನಾಶ್, ದಿನೇಶ್, ಉಮೇಶ್ ಎಂಬ ಮೂವರ ಹೆಸರನ್ನು ಹೇಳಿರುವುದಾಗಿ ನಿತೇಶ್‌ರ ಸಹೋದರಿ ನೀತಾ ಶೆಟ್ಟಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ನಿತೇಶ್ ಶೆಟ್ಟಿ ಬಲಗೈ ಮುರಿತಕ್ಕೊಳಗಾಗಿದೆ. ಕೆಳ ತುಟಿ, ಬಲ ಪಕ್ಕೆಯ ಬದಿಯಲ್ಲಿ, ಕಾಲುಗಳಲ್ಲಿ ಗಂಭೀರ ಗಾಯಗಳು ಹಾಗೂ ದೇಹದ ಅಲ್ಲಲ್ಲಿ ತರಚಿದ ಗಾಯಗಳಿದ್ದವು.

ನಿತೇಶ್ ಸೇರಿದಂತೆ ನಾಲ್ಕು ಮಂದಿ ಕ್ಲಬ್‌ನ ಹತ್ತಿರವೇ ಸುತ್ತಾಡುತ್ತಿದ್ದು, ಯಾವುದೋ ವಿಷಯದಲ್ಲಿ ತಕರಾರು ಶುರುವಾಗಿ ಹೊಡೆದಾಡಿ ಅಥವಾ ಚಲಿಸುವ ರೈಲಿನತ್ತ ದೂಡಿ ಕೊಲೆಗೈಯಲು ಯತ್ನಿಸಿರುವ ಸಾಧ್ಯತೆಗಳಿವೆ ಎಂದು ಸ್ಥಳೀಯರು ಸಂಶಯಿಸಿದ್ದಾರೆ. ಉಳ್ಳಾಲ ಠಾಣಾ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

Comments are closed.