ಕುಂದಾಪುರ: ದೇವಾಡಿಗ ಸಮಾಜದಲ್ಲಿನ ಅವಿವಾಹಿತ ಯುವಕ-ಯುವತಿಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶ್ರೀ ಏಕನಾಥೇಶ್ವರಿ ವಧುವರಾನ್ವೇಷಣಾ ವೇದಿಕೆ ಎನ್ನುವ ಹೆಸರಿನಲ್ಲಿ ಮಾಹಿತಿ ಕೇಂದ್ರ ಉದ್ಘಾಟನೆಯಾಗಿದ್ದು ಸರ್ವರು ಇದರ ಸದುಪಯೋಗ ಪಡೆದುಕೊಂಡು ಉತ್ತಮ ದಾಂಪತ್ಯ ಜೀವನ ನಡೆಸಬೇಕೆಂಬ ಆಶಯ ನಮ್ಮದು ಎಂದು ಬಾರಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನದ ವಿಶ್ವಸ್ಥ ಮಂಡಳಿ ಅಧ್ಯಕ್ಷ ಅಣ್ಣಯ್ಯ ಶೇರಿಗಾರ್ ಹೇಳಿದರು.
ಅವರು ಭಾನುವಾರ ಬೆಳಿಗ್ಗೆ ಬಾರಕೂರಿನ ಶ್ರೀ ಏಕನಾಥೇಶ್ವರೀ ದೇವಸ್ಥಾನ ವಠಾರದಲ್ಲಿ ಜರುಗಿದ ಶ್ರೀ ಏಕನಾಥೇಶ್ವರೀ ವಧುವರಾನ್ವೇಷಣಾ ಪ್ರಥಮ ಸಮಾವೇಶ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮುಂಬೈ ದೇವಾಡಿಗ ಸಂಘದ ಗೌರವ ಜೊತೆ ಕಾರ್ಯದರ್ಶಿ ಗಣೇಶ್ ಶೇರಿಗಾರ್ ಮುಂಬೈ ಮಾತನಾಡಿ, ದೇವಾಡಿಗ ಸಮಾಜದಲ್ಲಿನ ವಧುವರರ ಸಮಾವೇಶ ಮಾಡುವ ಚಿಂತನೆ ಮೊದಲಿನಿಂದಲೂ ಇದ್ದು ಅದನ್ನು ಇಲ್ಲಿ ಸಾಕಾರಗೊಳಿಸುವ ಯತ್ನ ಮಾಡಿದ್ದೇವೆ. ಮದುವೆ ವಿಚಾರದಲ್ಲಿ ಸಂಪೂರ್ಣ ಜಾತಕಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಬದಲು ಅಗತ್ಯವಿದ್ದಷ್ಟೇ ಪ್ರಾಶಸ್ತ್ಯ ನೀಡಿದಲ್ಲಿ ಉತ್ತಮವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಶ್ರೀ ಏಕನಾಥೇಶ್ವರೀ ದೇವಸ್ಥಾನ ನಿರ್ಮಾಣ ಸಮಿತಿ ಗೌರವ ಸಲಹೆಗಾರ ಹಿರಿಯಡಕ ಮೋಹನದಾಸ್ ಮಾತನಾಡಿ, ಶ್ರೀ ಏಕನಾಥೇಶ್ವರೀ ದೇವಸ್ಥಾನದ ಕಾರ್ಯಕ್ರಮದ ಮಟ್ಟಿಗೆ ಐತಿಹಾಸಿಕ ಹೆಜ್ಜೆ. ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಮಾಜಿಕ ಕಾರ್ಯಕ್ರಮಗಳು ಆಗಲಿ ಎನ್ನುವ ಉದ್ಧೇಶದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇಂದು ದೇವಾಡಿಗ ಸಮಾಜದಲ್ಲಿ ಉತ್ತಮ ವಿದ್ಯಾವಂತರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವಕ ಯುವತಿಯರು ಇದ್ದಾರೆ. ಸಾಮಾಜಿಕ ಚಟುವಟಿಕೆಗಳಲ್ಲಿ ಯುವಪೀಳಿಗೆ ಕೈಜೋಡಿಸಿದಾಗ ಮಾತ್ರವೇ ಯಶಸ್ಸು ಸಾಧ್ಯವಿದ್ದು ಅವರಿಗೆ ಹಿರಿಯರು ಸಲಹೆ ಸಹಕಾರ ಅಗತ್ಯತೆ ಇದೆ. ದೇವಸ್ಥಾನದ ವತಿಯಿಂದ ಪ್ರತಿವರ್ಷವು ಈ ರೀತಿಯ ಸಮಾವೇಶಗಳನ್ನು ಜರುಗಿಸಿ ಸಾಮೂಹಿಕ ವಿವಾಹದ ವ್ಯವಸ್ಥೆಗಾಗಿ ಸಂಪೂರ್ಣ ಸಹಕಾರ ನೀಡುವಂತೆ ದೇವಸ್ಥಾನದ ವಿಶ್ವಸ್ಥ ಮಂಡಳಿಯನ್ನು ವಿನಂತಿಸಿದರು.
ವಿಶ್ವಸ್ಥ ಜನಾರ್ಧನ ದೇವಾಡಿಗ ಉಪ್ಪುಂದ ಮಾತನಾಡಿ, ಮದುವೆಯಾಗಲು ಬಯಸಿ ಬಡತನದ ಕಾರಣಕ್ಕೆ ಹಿಂಜರಿಕೆ ಇದ್ದರೇ ಅಂತಹ ಹೆಚ್ಚಿನ ಜೋಡಿಗಳು ಬಯಸಿ ಮುಂದೆ ಬಂದಲ್ಲಿ ಸಾಮೂಹಿಕ ವಿವಾಹ ಕಾರ್ಯವನ್ನು ನಡೆಸುವ ಉದ್ದೇಶ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.
ಶ್ರೀ ಏಕನಾಥೇಶ್ವರೀ ವಧುವರಾನ್ವೇಷಣಾ ವೇದಿಕೆ ಅಧ್ಯಕ್ಷ ನಾರಾಯಣ ದೇವಾಡಿಗ ಕುಂದಾಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ವೇದಿಕೆಯು ಸಮಸ್ತ ದೇವಾಡಿಗ ಬಂಧುಗಳಿಗೆ ಮಾಹಿತಿ ಕೇಂದ್ರವಾಗಿರುವುದಲ್ಲದೇ ಎಲ್ಲಾ ಅಭ್ಯರ್ಥಿಗಳ ವಿವರವನ್ನು ಗೌಪ್ಯವಾಗಿಡಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ತಾಲೂಕುಪಂಚಾಯತ್ ಸದಸ್ಯ ರಾಜು ದೇವಾಡಿಗ ತ್ರಾಸಿ, ಜಗದೀಶ ದೇವಾಡಿಗ ಉಪ್ಪುಂದ, ದೇವಾಡಿಗ ಸಂಘ ಬೆಂಗಳೂರು ಇಲ್ಲಿನ ಜೊತೆ ಕಾರ್ಯದರ್ಶಿ ಎಸ್.ಎಮ್ ಚಂದ್ರು ಬೆಂಗಳೂರು, ಉದ್ಯಮಿ ಶೀನ ದೇವಾಡಿಗ ಮರವಂತೆ, ದೆಹಲಿ ಕಾರ್ಫೋರೇಶನ್ ಬ್ಯಾಂಕ್ ಮುಖ್ಯ ಪ್ರಬಂಧಕ ಮಹಾಲಿಂಗ ದೇವಾಡಿಗ, ರಮೇಶ್ ವಂಡ್ಸೆ, ಉದ್ಯಮಿ ನಿತೇಶ್ ದೇವಾಡಿಗ ಬೆಂಗಳೂರು, ಕಬ್ಬಡಿ ಪಟು ರಿಶಾಂಕ್ ದೇವಾಡಿಗ ಮುಂಬೈ, ಶಿರಸಿ ತಾ.ಪಂ. ಉಪಾಧ್ಯಕ್ಷ ಚಂದ್ರು ದೇವಾಡಿಗ ಎಸಾಳೆ ಹಾಗೂ ವಿವಿಧ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಮಾವೇಶದಲ್ಲಿ 200ಕ್ಕೂ ಮಿಕ್ಕಿದ ಯುವಕ ಯುವತಿಯರ ವಿವರಗಳನ್ನೊಳಗೊಂಡ ಮಾಹಿತಿಗಳನ್ನು ಸ್ವೀಕರಿಸಲಾಯಿತು.
ಉಮಾ ದೇವಾಡಿಗ ಮತ್ತು ಪ್ರಭಾ ಪ್ರಾರ್ಥಿಸಿದರು, ಪುರುಶೋತ್ತಮ ದಾಸ್ ಉಪ್ಪುಂದ ಮತ್ತು ದಿನೇಶ ನಾಗೂರು ಕಾರ್ಯಕ್ರಮಕ್ಕೆ ಸಹಕರಿಸಿದರು. ರವಿ ದೇವಾಡಿಗ ತಲ್ಲೂರು, ಮಹೇಶ ದೇವಾಡಿಗ ಹಟ್ಟಿಯಂಗಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಚಿತ್ರ,ವರದಿ- ಯೋಗೀಶ್ ಕುಂಭಾಸಿ
Comments are closed.