ನವದೆಹಲಿ: ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಪ್ರಧಾನಿ ಮೋದಿ ಅವರು ಆಲ್ ಇಂಡಿಯಾ ರೇಡಿಯೋದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಮನ್ ಕೀ ಬಾತ್ ಕಾರ್ಯಕ್ರಮದ 20ನೇ ಸರಣಿಯಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪರಿಸರ ಕುರಿತು ನಿರ್ಲಕ್ಷ್ಯ ಹೆಚ್ಚಾಗುತ್ತಿದೆ. ಇದರಿಂದಾಗಿ ಉಷ್ಣತೆಯೂ ಹೆಚ್ಚಾಗಿದೆ. ಹಾಗಾಗಿ, ಪರಿಸರ ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದ್ದಾರೆ.
ಜೂನ್ 8 ಜಾಗತಿಕ ಪರಿಸರ ದಿನವಾಗಿದ್ದು, ಈ ಹಿನ್ನಲೆಯಲ್ಲಿ ನಾವೆಲ್ಲರೂ ಅರಣ್ಯ ಮತ್ತು ನೀರು ಉಳಿಸಲು ಎಚ್ಚರಗೊಳ್ಳಬೇಕಾಗಿದೆ ಎಂದು ಕರೆ ನೀಡಿದ್ದಾರೆ.
ಒಂದೊಂದು ನೀರಿನ ಹನಿಯನ್ನು ನಾವು ಉಳಿಸಬೇಕು. ಒಂದು ಹನಿ ನೀರು ವ್ಯರ್ಥವಾದರೂ ಅದರಿಂದ ನಮಗೆ ಹೆಚ್ಚು ನಷ್ಟವೇ ಆಗುತ್ತದೆ. ಹಾಗಾಗಿ, ನಾವೆಲ್ಲರೂ ಅರಣ್ಯ ಮತ್ತು ನೀರನ್ನು ಉಳಿಸುತ್ತೇವೆಂದು ಪ್ರತಿಜ್ಞೆ ಮಾಡೋಣ ಎಂದು ತಿಳಿಸಿದ್ದಾರೆ.
ಗುಜರಾತ್, ಜಾರ್ಖಂಡ್, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಬರ ಪರಿಸ್ಥಿತಿ ನಿಭಾಯಿಸಲು ಕ್ರಮಗಳನ್ನು ಕೈಗೊಂಡಿದ್ದಾರೆ. ಗುಜರಾತ್ ಮತ್ತು ಆಂಧ್ರ ಪ್ರದೇಶ ಬರ ಪರಿಸ್ಥಿತಿ ನಿಭಾಯಿಸುವುದಕ್ಕೆ ನೂತನ ತಂತ್ರಜ್ಞಾನಗಳನ್ನು ಬಳಸಿಕೊಂಡಿವೆ.
ಪ್ರತಿ ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅರಣ್ಯ ಮತ್ತು ನೀರು ಉಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿನಿಯರ ಮೇಲುಗೈ: ಶುಭ ಕೋರಿದ ಪ್ರಧಾನಿ
ವಿವಿಧ ಪರೀಕ್ಷೆಗಳಲ್ಲಿ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಎಲ್ಲಾ ವಿದ್ಯಾರ್ಥಿನಿಯರಿಗೆ ಶುಭಾಶಯ ಕೋರಿದ್ದಾರೆ.
ಪ್ರತಿಯೊಂದು ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರೇ ಮುಂದಿರುವುದನ್ನು ನೋಡಲು ಖುಷಿ ತರುತ್ತದೆ. ಪ್ರತಿಯೊಬ್ಬ ಹೆಣ್ಣು ಮಗಳು ಇದೇ ರೀತಿ ಮಿಂಚಬೇಕು ಎಂದು ಹೇಳಿದ್ದಾರೆ.
ಮಧ್ಯ ಪ್ರದೇಶದಿಂದ ಗೌರವ್ ಎಂಬ ವಿದ್ಯಾರ್ಥಿ ಪತ್ರ ಬರೆದಿದ್ದು, ಪರೀಕ್ಷೆಯಲ್ಲಿ ನಾನು ಶೇ.89ರಷ್ಟು ಅಂಕ ಗಳಿಸಿದ್ದೇನೆ. ಇದಕ್ಕೆ ಮನೆಯಲ್ಲೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಾನು ಶೇ.90ರ ಮೇಲೆ ಅಂಕ ಪಡೆಯಬೇಕಿತ್ತು ಎಂದು ಕುಟುಂಬದವರು ಹೇಳುತ್ತಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದ್ದನು.
ಇದಕ್ಕೆ ಪ್ರತಿಕ್ರಯಿಸಿದ ಪ್ರಧಾನಿ ಮೋದಿ, ನಾನು ನಿನ್ನ ಪತ್ರ ಓದಿದೆ. ನಿನ್ನ ಹಾಗೆ ಎಷ್ಟೋ ಮಂದಿ ಈ ರೀತಿ ಸಮಸ್ಯೆ ಎದುರಿಸಿರುತ್ತಾರೆ. ಎಲ್ಲವನ್ನೂ ನಕಾರಾತ್ಮಕತೆಯಿಂದ ನೋಡುವುದು ಸರಿಯಲ್ಲ. ಪಡೆದಿರುವ ಅಂಕಗಳಿಗೆ ತೃಪ್ತಿ ಪಟ್ಟು ಸಂಭ್ರಮಿಸಿ ಎಂದು ಹೇಳಿದ್ದಾರೆ.
Comments are closed.