_ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು,ಮೇ.22: ದೈವಜ್ಞ ಮಹಿಳಾ ಮಂಡಳಿ (ರಿ) ಮಂಗಳೂರು ಇದರ ರಜತ ಮಹೋತ್ಸವ ಸಮಾರಂಭ ಭಾನುವಾರ ನಗರದ ಅಶೋಕನಗರ ಸಮೀಪದ ದೈವಜ್ಞ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಶ್ರೀಕ್ಷೇತ್ರ ಕರ್ಕಿಯ ಜ್ಞಾನೇಶ್ವರಿ ಪೀಠ ದೈವಜ್ಞ ಬ್ರಾಹ್ಮಣ ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿಯವರು ಸಮಾರಂಭವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು. ಓರ್ವ ವ್ಯಕ್ತಿ ಹಾಗೂ ಸಮಾಜ ಬೆಳೆಯಲು ಅವಿರತ ಶ್ರಮ, ಸಾಧನೆ ಅಗತ್ಯ. ಆದರೆ ಮಹಿಳೆ ಹುಟ್ಟುತ್ತಾಳೆ ಸಹನೆ ಹಾಗೂ ತ್ಯಾಗದ ಮೂಲಕ ಸಮಾಜ ಹಾಗೂ ವ್ಯಕ್ತಿಯ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದಾಳೆ ಎಂದು ಹೇಳಿದರು.
ತ್ಯಾಗ ಪ್ರೀತಿ, ಮಮತೆಯ ಧ್ಯೋತಕವಾಗಿರುವ ಮಹಿಳೆಯಿಂದ ಈ ಸಮಾಜಕ್ಕೆ ಗೌರವ ಲಭಿಸಿದೆ. ಮಗಳಾಗಿ, ಸೊಸೆಯಾಗಿ, ತಾಯಿಯಾಗಿ ಹಾಗೂ ಅಜ್ಜಿಯಾಗಿ ಹೀಗೆ ಮಹಿಳೆ ನಾನಾ ರೀತಿಯ ಜವಾಬ್ದಾರಿಗಳನ್ನು ನಿರ್ವಾಹಿಸುತ್ತಾಳೆ. ಮಹಿಳೆಯ ಜೀವನವೇ ತ್ಯಾಗಮಯದಿಂದ ಕೂಡಿದೆ. ಇಂದು ಮಹಿಳಾ ಮಂಡಳಿ ಮೂಲಕ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ದೈವಜ್ಞ ಮಹಿಳಾ ಮಂಡಳಿಯ ಕಾರ್ಯ ಶ್ಲಾಘನೀಯ ಎಂದು ಭಾರತೀ ಮಹಾಸ್ವಾಮೀಜಿಯವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಮರಣ ಸಂಚಿಕೆ ಬಿಡುಗಡೆ :
ಬಳಿಕ ಪರಮಪೂಜ್ಯ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿಯವರು ದೈವಜ್ಞ ಮಹಿಳಾ ಮಂಡಳಿಯ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
ಸ್ಥಳೀಯ ಮನಪಾ ಸದಸ್ಯ ರಾಧಕೃಷ್ಣ, ಬಂದರ್ ವಾರ್ಡಿನ ಕಾರ್ಪೋರೇಟರ್ ಶ್ರೀಮತಿ ಪೂರ್ಣಿಮಾ ನಾಯಕ್, ಬಹ್ಮಕುಮಾರಿ ಭಾರತಿ.ಜಿ. ಕಂಪ್ಲಿ, (ಗಂಗಾವತಿ),ದೈವಜ್ಞ ಬ್ರಾಹ್ಮಣರ ಸಂಘ ಮಂಗಳೂರು, ಇದರ ಅಧ್ಯಕ್ಷ ಎಸ್.ರಾಜೇಂದ್ರ ಕಾಂತ್ ಶೇಟ್, ಪಂಚಮಹಾಶಕ್ತಿ ಶ್ರಿ ಗ್ರಾಯತ್ರಿ ದೇವಿ ಸಿದ್ದಿವಿನಾಯಕ ದೇವಸ್ಥಾನ ದ ಇದರ ಆಡಳಿತ ಮೊಕ್ತೇಸರಾದಾ ಡಾ.ಎಂ.ರಮೇಶ್ ಕೃಷ್ಣ ವಿ.ಶೇಟ್ ಮುಂತಾದವರು ಅತಿಥಿಗಳಾಗಿದ್ದರು.
ದೈವಜ್ಞ ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ಶ್ರೀಮತಿ ಪ್ರಭಾವತಿ ಭಾಸ್ಕರ ರಾವ್, ಮಂಡಳಿಯ ಅಧ್ಯಕ್ಷೆ ಶ್ರೀಮತಿ ಸುಭದ್ರಾ ಅರುಣಕುಮಾರ್ ಶೇಟ್, ಕಾರ್ಯದರ್ಶಿ ಶ್ರೀಮತಿ ಪುಷ್ಪಾ ಕೃಷ್ಣಾನಂದ ಶೇಟ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾಧಕರಿಗೆ ಸಮ್ಮಾನ :
ಕಾರ್ಯಕ್ರಮದಲ್ಲಿ ಸಮಾಜದ ಏಳಿಗೆಗಾಗಿ ಸಾಧನೆಗೈದ ಶ್ವೇತಾ ಜ್ಯುವೆಲ್ಲರ್ಸ್ ಮಾಲಕ ಶ್ರೀ ಅಶೋಕ್ ಶೇಟ್ ಸೇರಿದಂತೆ ವಿವಿಧ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಮಹಿಳಾ ಘಟಕದ ಹಿಂದಿನ ಸಾಲಿನ ಅಧ್ಯಕ್ಷರನ್ನು, ಹಿರಿಯ ಗಣ್ಯರನ್ನು ಹಾಗೂ ಈಗೀನ ಸದಸ್ಯರಲ್ಲಿ ಸಂಘದ ಚಟುವಟಿಕೆಗಳಲ್ಲಿ ಅವಿರತವಾಗಿ ಶ್ರಮಿಸಿದಂತಹ ಸದಸ್ಯರನ್ನು ಮಂಡಳಿ ವತಿಯಿಂದ ಗೌರವಿಸಲಾಯಿತು.
ದೈವಜ್ಞ ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಸುಭದ್ರಾ ಅರುಣಕುಮಾರ್ ಶೇಟ್ ಸ್ವಾಗತಿಸಿದರು. ಶ್ರೀಮತಿ ಅಕ್ಷತಾ ಕೆ.ಶೇಟ್ ಚಂದಗಿರಿ ಕಾರ್ಯಕ್ರಮ ನಿರೂಪಿಸಿದರು.ಮಂಡಳಿ ಕಾರ್ಯದರ್ಶಿ ಶ್ರೀಮತಿ ಪುಷ್ಪಾ ಕೃಷ್ಣಾನಂದ ಶೇಟ್ ವಂದಿಸಿದರು.
ಸ್ವಾಮೀಜಿಗೆ ಪೂರ್ಣಕುಂಭ ಸ್ವಾಗತ :
ಕಾರ್ಯಕ್ರಮ ಆರಂಭಕ್ಕೂ ಮುನ್ನ ಶ್ರೀಕ್ಷೇತ್ರ ಕರ್ಕಿಯ ಜ್ಞಾನೇಶ್ವರಿ ಪೀಠ ದೈವಜ್ಞ ಬ್ರಾಹ್ಮಣ ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿಯವರನ್ನು ಉರ್ವಸ್ಟೋರ್ ಮೈದಾನದಿಂದ ದೈವಜ್ಞ ಕಲ್ಯಾಣ ಮಂಟಪದವರೆಗೆ ಪೂರ್ಣಕುಂಭದೊಂದಿಗೆ ಮೆರೆವಣಿಗೆಯಲ್ಲಿ ಕರೆತರಲಾಯಿತು.
Comments are closed.