ಮಂಗಳೂರು,ಮೇ.16: ಕರಾವಳಿ ಜಿಲ್ಲೆಗೆ ಮಾರಕವಾಗಲಿರುವ ಎತ್ತಿನಹೊಳೆ ಯೋಜನೆಯನ್ನು ತತ್ಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ನೇತೃತ್ವದಲ್ಲಿ ಇಂದು ಮಧ್ಯಾಹ್ನ ಜ್ಯೋತಿ ಟಾಕೀಸಿನ ಬಳಿಯ ಅಂಬೇಡ್ಕರ್ ಸರ್ಕಲ್ನಿಂದ ದ.ಕ. ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನ ಜಾಥಾ ನಡೆಯಿತು.
ಸಮಿತಿ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ಕರಾವಳಿ ಜಿಲ್ಲೆಯ ವಿವಿಧ ಮಠಾಧೀಶರು, ವಿವಿಧ ಧರ್ಮಗಳ ಧರ್ಮಗುರು, ಧಾರ್ಮಿಕ ಮುಖಂಡರು, ಪರಿಸರವಾದಿಗಳ ನೇತ್ರತ್ವದಲ್ಲಿ ನಡೆದ ಈ ಜಾಥಾದಲ್ಲಿ ಜಿಲ್ಲೆಯಾದ್ಯಂತ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಪಕ್ಷಾತೀತ/ಜಾತ್ಯತೀತವಾಗಿ ಅಯೋಜಿಸಲಾದ ಈ ಜಾಥದಲ್ಲಿ ಯಾವೂದೇ ಪಕ್ಷ ಮತ್ತು ಸಂಘ ಸಂಸ್ಥೆಗಳ ಧ್ವಜ ಬಳಕೆಗೆ ಅವಕಾಶ ನೀಡದೇ ಜಾಥದಲ್ಲಿ ಭಾಗವಹಿಸಿದ ಎಲ್ಲರಿಗೂ ನೇತ್ರಾವತಿ ಸಂಬಂಧಿತ ಧ್ವಜ ನೀಡಲಾಯಿತು.
ಪ್ರತಿಭಟನ ಸಭೆಯನ್ನುದ್ದೇಶಿಸಿ ಸಮಿತಿ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಮಾತನಾಡಿ, ಇದು ತುಳುನಾಡಿನ ಬದುಕಿನ ಪ್ರಶ್ನೆ. ನೀರಿಲ್ಲದೆ ತಲ್ಲಣಿಸಿರುವ ಜಿಲ್ಲೆಯ ಜನರ ಆಕ್ರೋಶದ ಧ್ವನಿ. ಜಿಲ್ಲೆಯ ಅಳಿವು ಉಳಿವು ಪ್ರಶ್ನೆ ಬಂದಾಗ ನಾವೆಲ್ಲ ಒಂದಾಗುತ್ತೇವೆ ಎಂಬ ಸ್ಪಷ್ಟ ಸಂದೇಶವನ್ನು ಈ ಜಾಥಾದ ಮೂಲಕ ಸರಕಾರಕ್ಕೆ ನೀಡುತ್ತಿದ್ದೇವೆ ಎಂದರು.
ಮಂಗಳೂರಿನಲ್ಲಿ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದ್ದು, ಮುಂದೆ ಎತ್ತಿನಹೊಳೆ ಯೋಜನೆ ಜಾರಿಯಾದರೆ ಇಲ್ಲಿನ ಪರಿಸ್ಥಿತಿ ಹೇಗಿರ ಬಹುದು ಎಂದು ಬೇಸರ ವ್ಯಕ್ತ ಪಡಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೂರು ವರ್ಷಗಳ ಕಾಲ ಅಭಿವೃದ್ಧಿ ಪರ ಆಡಳಿತದ ಮೂಲಕ ಹಲವಾರು ‘ಭಾಗ್ಯ’ಗಳನ್ನು ರಾಜ್ಯದ ಜನತೆಗೆ ನೀಡಿದ್ದಾರೆ. ಆದರೆ ಕರಾವಳಿ ಜನತೆಗೆ ಮಾತ್ರ ನೀರಿನ ‘ಖೋತಾ ಭಾಗ್ಯ’ ನೀಡಿರುವುದು ಬೇಸರದ ಸಂಗತಿ ಎಂದು ಹೇಳಿದರು. ಎತ್ತಿನಹೊಳೆ ಯೋಜನೆಯಿಂದ ಕರಾವಳಿಗೆ ಆಗುವ ಬಾಧಕಗಳ ಬಗ್ಗೆ ಮುಖ್ಯಮಂತ್ರಿ ಮನವೊಲಿಸಿ ಯೋಜನೆ ತಡೆಯುವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ವಿಜಯ ಕುಮಾರ್ ಶೆಟ್ಟಿ ಆರೋಪಿಸಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೋ, ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಮೊದಲಾದವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಮಿತಿ ಸಂಚಾಲಕ ಸತ್ಯಜಿತ್ ಸುರತ್ಕಲ್, ಮಾರ್ಗದರ್ಶಕ ಮಂಡಳಿಯ ಎಂ.ಜಿ. ಹೆಗಡೆ ‘ಯೋಗೀಶ್ ಶೆಟ್ಟಿ ಜಪ್ಪು, ಆನಂದ ಶೆಟ್ಟಿ ಅಡ್ಯಾರ್, ಪುರುಷೋತ್ತಮ ಚಿತ್ರಾಪುರ, ದಿನಕರ ಶೆಟ್ಟಿ, ಹನೀಫ್ ಕೊಣಾಜೆ, ಪ್ರಶಾಂತ್, ಮನೋಹರ್ ಶೆಟ್ಟಿ, ಶಶಿರಾಜ್ ಶೆಟ್ಟಿ ಕೊಳಂಬೆ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.
ಮೇ 19 : ಮಂಗಳೂರು ಬಂದ್..?
ಎತ್ತಿನಹೊಳೆ ಯೋಜನೆ ವಿರೋಧಿಸಿ ಮೇ 19ರಂದು ಸ್ವಯಂಪ್ರೇರಿತ ದ.ಕ. ಜಿಲ್ಲಾ ಬಂದ್ ನಡೆಯಲಿದೆ.