ಮುಂಬೈ: ಸಾಲಬಾಧೆಯಿಂದ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರು ‘ಸ್ವಾತಂತ್ರ್ಯ ಹಾಗೂ ಸುರಕ್ಷೆತೆಯ ಬಗ್ಗೆ ಭರವಸೆ ನೀಡಿದರೆ ತಾನು ಭಾರತಕ್ಕೆ ಮರಳಲು ಸಿದ್ಧವಿರುವುದಾಗಿ’ ಹೇಳಿದ್ದಾರೆ.
ಬ್ಯಾಂಕ್ ಸಾಲಗಳಿಗೆ ಸಂಬಂಧಪಟ್ಟಂತೆ ನಾನು ಎಲ್ಲ ಬದ್ಧತೆಗಳನ್ನು ಈಡೇರಿಸುವ ಉದ್ದೇಶ ಹೊಂದಿದ್ದೆನೆ. ಅಂತೆಯೇ ನನ್ನ ಮುಖ್ಯ ಬ್ಯಾಂಕರ್ ಆಗಿರುವ ಎಸ್ಬಿಐ ಜತೆಗಿನ ನನ್ನ ಸಾಲಗಳನ್ನು ತೀರಿಸುವ ಹೊಸ ಇತ್ಯರ್ಥದ ಕೊಡುಗೆಯನ್ನು ನಾನು ಈಗಾಗಲೇ ಕೊಟ್ಟಿದ್ದೇನೆ, ಅದು ಬೇಗನೆ ಅಂತಿಮಗೊಳ್ಳುವ ನಿರೀಕ್ಷೆ ಇದೆ ಎಂದು ವಿಜಯ್ ಮಲ್ಯ ತಿಳಿಸಿದ್ದಾರೆ.
ಕಳೆದ ಶುಕ್ರವಾರ ಮುಂಬಯಿಯಲ್ಲಿ ನಡೆದಿದ್ದ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ ನ ನಿರ್ದೇಶಕ ಮಂಡಳಿಯ ವಿಡಿಯೋ ಕಾನ್ಫರೆನ್ಸಿಂಗ್ ಸಭೆಯಲ್ಲಿ ವಿಜಯಲ್ ಮಲ್ಯ ಅವರು ಲಂಡನ್ ಒಂದು ಅಜ್ಞಾತ ಸ್ಥಳದಿಂದ ಲಾಗ್ಆನ್ ಆಗಿದ್ದರು. ಈ ವೇಳೆ ಮಲ್ಯ ಅವರಿಗೆ ಯುಬಿಎಲ್ ಕಂಪೆನಿಯ ನಿರ್ದೇಶಕ ಮಂಡಳಿಯು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವುದಾಗಿ ಮಂಡಳಿಯ ಸಭೆಯಲ್ಲಿ ಪಾಲ್ಗೊಂಡ ಓರ್ವ ನಿರ್ದೇಶಕರು ಇಕಾನಮಿಕ್ ಟೈಮ್ಸ್ಗೆ ತಿಳಿಸಿದ್ದಾರೆ.
“ವಿಜಯ್ ಮಲ್ಯ ಅವರು ತನಗೆ ಸ್ವಾತಂತ್ರ್ಯ ಹಾಗೂ ಸುರಕ್ಷತೆ ಬಗ್ಗೆ ಭರವಸೆ ನೀಡಿದ್ದೇ ಆದಲ್ಲಿ ತಾನು ಭಾರತಕ್ಕೆ ಮರಳಲು ಸಿದ್ಧವಿರುವುದಾಗಿ ಹೇಳಿದ್ದಾರೆ. ಅಲ್ಲದೆ ಭಾರತಕ್ಕೆ ಮರಳಿದೊಡನೆಯೇ ತಾನು ಎಲ್ಲ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ’ ಎಂದು ತಿಳಿಸಿರುವುದಾಗಿ ಯುಬಿಎಲ್ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಭಾಗವಹಿಸಿದ್ದ ಸ್ವತಂತ್ರ ನಿರ್ದೇಶಕರಾಗಿರುವ ಕಿರಣ್ ಮಜುಮ್ದಾರ್ ಹೇಳಿದ್ದಾರೆ.