ಮಂಗಳೂರು, ಮೇ.15: ನಗರದ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪದ ವಾಣಿಜ್ಯ ಮಳಿಗೆಯೊಂದರ ಮುಂಭಾಗ ತಂಡದಿಂದ ಹತ್ಯೆಯಾದ ರೋಹಿತ್ (42) ಎಂಬಾತನ ಹತ್ಯೆಗೆ ಸಂಬಂಧಿಸಿದಂತೆ ಮೂವರು ಸಹೋದರರ ಸಹಿತಾ ನಾಲ್ವರನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕದ್ರಿ ದೇವಸ್ಥಾನದ ಬಳಿಯ ನಿವಾಸಿಗಳಾದ ಕೆ. ಮಾಧವ ಎಂಬವರ ಪುತ್ರರಾದ ಜಗದೀಶ್(36),ಯಶವಂತ(40), ಶಿವಾಜಿ(35) ಮತ್ತು ಕಂಡೆಟ್ಟುವಿನ ದಿ .ವಿಜೇಂದ್ರನಾಥ್ ಎಂಬವರ ಪುತ್ರ ಗೌತಮ್ಚಂದ್ರ(30) ಎಂದು ಹೆಸರಿಸಲಾಗಿದೆ.
ಬಂಧಿತರಲ್ಲಿ ಜಗದೀಶ್ ,ಯಶವಂತ ಮತ್ತು ಶಿವಾಜಿ ಸಹೋದರರಾಗಿದ್ದಾರೆ. ಬಂಧಿತ ನಾಲ್ಕು ಮಂದಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮೇ 8 ರಂದು ಸಂಜೆ 5ಗಂಟೆಯ ಸುಮಾರಿಗೆ ಕದ್ರಿ ಕಂಬಳ ನಿವಾಸಿ ರೋಹಿತ್ ತನ್ನ ಸ್ನೇಹಿತ ಈಡನ್ ಗಾರ್ಡನ್ ಸಮೀಪದ ನಿವಾಸಿ ರೋಚ್ ಯಾನೆ ರೋಷನ್ ಎಂಬವರ ಜೊತೆ ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸಮೀಪವಿರುವ ಟಾಟ ಮೋಟಾರ್ಸ್ ಮಳಿಗೆಯ ಪಕ್ಕದ ಭವನಿ ಗಣೇಶ್ ಕಮರ್ಷಿಯಲ್ ಕಾಂಪ್ಲೆಕ್ಷ್ನ ಮೊದಲ ಮಹಡಿಯ ಕಚೇರಿಯೊಂದಕ್ಕೆ ಆಗಮಿಸಿ ಹಿಂತಿರುಗುತ್ತಿದ್ದಾಗ ಅಟೋ ರಿಕ್ಷಾದಲ್ಲಿ ಮೊದಲೇ ಬಂದು ಕಾಯುತ್ತಿದ್ದ ನಾಲ್ವರು ಆರೋಪಿಗಳು ಇವರಿಬ್ಬರ ಮೇಲೆ ಕಲ್ಲು, ದೊಣ್ಣೆ ಹಾಗೂ ಚೂರಿಯಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ರೋಹಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ರೋಶನ್ ಅವರ ಬೆನ್ನು ಹಾಗೂ ಬಲಗೈ ಬೆರಳುಗಳಿಗೆ ಏಟು ತಗಲಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಬರ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಪೂರ್ವದ್ವೇಷ ಕೊಲೆಗೆ ಕಾರಣ :
ಆರೋಪಿಗಳು ಮತ್ತು ರೋಹಿತ್, ರೋಶನ್ ಇವರೆಲ್ಲರೂ ಮೊದಲು ಸ್ನೇಹಿತರಾಗಿದ್ದರು. ಕದ್ರಿಯಲ್ಲಿ ಒಟ್ಟು ಸೇರುತ್ತಿದ್ದರು. ಶಿವಾಜಿ ಮೇಲೆ ಕೆಲವು ದಿನಗಳ ಹಿಂದೆ ರೋಹಿತ್ ಮತ್ತು ಇತರರು ಹಲ್ಲೆ ನಡೆಸಿದ್ದು, ಈ ವಿಷಯವನ್ನು ಆತ ತನ್ನ ಅಣ್ಣ ಜಗದೀಶ್ ಗೆ ತಿಳಿಸಿದ್ದನು. ಈ ಹಿನ್ನೆಲೆಯಲ್ಲಿ ರವಿವಾರ ರೋಹಿತ್ ಮತ್ತು ರೋಶನ್ ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸಮೀಪವಿರುವ ಟಾಟ ಮೋಟಾರ್ಸ್ ಮಳಿಗೆಯ ಪಕ್ಕದ ಭವನಿ ಗಣೇಶ್ ಕಮರ್ಷಿಯಲ್ ಕಾಂಪ್ಲೆಕ್ಷ್ ಬಳಿ ಬಂದಾಗ ಚಾಕುವಿನಿಂದ ತಿವಿದು ಮರದ ಸೋಂಟೆ ಹಾಗೂ ಕಲ್ಲಿನಿಂದ ತಲೆ ಹಾಗೂ ಹೊಟ್ಟೆಗೆ ಹೊಡೆದು ಪರಾರಿಯಾಗಿದ್ದರು ಎಂದು ವಿಚಾರಣೆಯಿಂದ ತಿಳಿದು ಬಂದಿದೆ.
ಹಣಕಾಸು ವ್ಯವಹಾರ ಶಂಕೆ..!
ರೋಹಿತ್ ಈ ಹಿಂದೆ ಹಣಕಾಸು ಸಂಸ್ಥೆಯೊಂದರಲ್ಲಿ ಹಣ ವಸೂಲಾತಿ ಮಾಡುವ ಕಾರ್ಯ ನಿರ್ವಾಹಿಸುತ್ತಿದ್ದು, ಬಳಿಕ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದ. ಬಳಿಕ ತನ್ನ ಚಾಲಕ ವೃತಿಯನ್ನು ಬಿಟ್ಟು ಕುಡಿತದ ಚಟಕ್ಕೆ ಬಲಿಯಾಗಿ, ಜೊತೆಗೆ ಗಾಂಜಾ ಸೇವನೆಯಲ್ಲೂ ತೊಡಗಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು.
ಆರೋಪಿಗಳು ಹಾಗೂ ರೋಹಿತ್ ಮಧ್ಯೆ ಕಳೆದ ಕೆಲವು ದಿನಗಳಿಂದ ಹಣಕಾಸು ವ್ಯವಹಾರದ ವಾಜ್ಯ ನಡೆಯುತ್ತಿದ್ದು, ಈ ಹಿಂದೆ ಮಾತಿನ ಚಕಮಕಿ ಕೂಡ ನಡೆದಿದೆ. ಇದೇ ದ್ವೇಷದ ಹಿನ್ನೆಲೆಯಲ್ಲಿ ರೋಹಿತ್ನನ್ನು ಹತ್ಯೆಗೈಯಲಾಗಿರ ಬೇಕೆಂಬ ಶಂಕೆ ವ್ಯಕ್ತವಾಗಿತ್ತು.
Click : ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸಮೀಪ ಹಾಡುಹಗಲೇ ಯುವಕನ ಬರ್ಬರ ಕೊಲೆ : ಓರ್ವ ಗಂಬೀರ