ಮಂಗಳೂರು, ಮೇ 11: ದ.ಕ. ಜಿಲ್ಲೆಯ ಲೇಡಿಗೋಶನ್ ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆ ಸಂದರ್ಭದಲ್ಲಿ ವೈದ್ಯರ ನಿರ್ಲಕ್ಷದಿಂದ ಸಾವಿಗೀಡಾದ ಪ್ರಕರಣಗಳ ಕುರಿತು ಜಿಲ್ಲಾ ವೈದ್ಯಾಧಿಕಾರಿ ನೇತೃತ್ವದ ಸಾವು ಪರಿಶೀಲಾ ಸಮಿತಿಯ ವರದಿಯ ಆಧಾರದಲ್ಲಿ ಕೆಲ ಖಾಸಗಿ ಆಸ್ಪತ್ರೆಗಳಿಗೆ ನೋಟೀಸ್ ನೀಡಿ ಒಂದು ವರ್ಷವಾದರೂ ಉತ್ತರ ಬಾರದಿರುವ ಬಗ್ಗೆ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಇಂದು ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ಹೆರಿಗೆ ಸಂದರ್ಭ ತಾಯಿ ಮತ್ತು ಶಿಶು ಮರಣ ಪ್ರಕರಣಗಳ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದು ವೈದ್ಯಾಧಿಕಾರಿಗಳನ್ನು ತರಾಟೆಗೈದ ಜಿಲ್ಲಾಧಿಕಾರಿಯವರು, ಹೆರಿಗೆ ಸಂದರ್ಭ ತಾಯಂದಿರು ಆಸ್ಪತ್ರೆಯ ವೈದ್ಯರ ನಿರ್ಲಕ್ಷದಿಂದ ಸಾವಿಗೀಡಾದ ಪ್ರಕರಣಗಳಲ್ಲಿ ಸಮರ್ಪಕ ಉತ್ತರ ನೀಡದ ಆಸ್ಪತ್ರೆ ಹಾಗೂ ನಿರ್ಲಕ್ಷ ತೋರಿದ ವೈದ್ಯರ ಪರವಾನಿಗೆಯನ್ನು ತಕ್ಷಣದಿಂದ ಅಮಾನತುಗೊಳಿಸುವಂತೆ ಸೂಚಿನೆ ನೀಡಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಶಿಶು ಕಲ್ಯಾಣ ಅಧಿಕಾರಿಗಳನ್ನು ವಿರುದ್ಧ ತೀಕ್ಷ್ಣವಾಗಿ ಆಕ್ಷೇಪಿಸಿದ ಜಿಲ್ಲಾಧಿಕಾರಿ, ತನಿಖೆಯ ವೇಳೆ ವೈದ್ಯರ ನಿರ್ಲಕ್ಷವೆಂದು ವರದಿಯಲ್ಲಿ ತಿಳಿಸಲಾಗಿದ್ದರೂ ಸಂಬಂಧಪಟ್ಟವರ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ಹಿಂದೇಟು ಹಾಕಿರುವುದಾದರೂ ಯಾತಕ್ಕೆ? ಕ್ರಮ ಕೈಗೊಳ್ಳಲು ಅಂಜಿಕೆ ಇರಬೇಕಾದರೆ ನೀವು ಅವರ ಜತೆ ಶಾಮೀಲಾಗಿದ್ದೀರಾ ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ನೇತೃತ್ವದಲ್ಲಿ ಕಳೆದ ಜನವರಿ ತಿಂಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರ ನಿಯಂತ್ರಣ ಮತ್ತು ವರದಿ ನೀಡುವ ತಜ್ಞರ ಸಮಿತಿ ಸಭೆಯಲ್ಲೂ ಜಿಲ್ಲೆಯಲ್ಲಿರುವ ನರ್ಸಿಂಗ್ ಹೋಂಗಳ ಬಗ್ಗೆ ನಿಗಾ ವಹಿಸಿ ಕ್ರಮಕ್ಕೆ ಸೂಚಿಸಲಾಗಿತ್ತು. ಹಾಗಿದ್ದರೂ ನರ್ಸಿಂಗ್ ಹೋಂಗಳನ್ನು ಗ್ರೇಡಿಂಗ್ ಮಾಡುವ ಕಾರ್ಯವನ್ನು ಡಿಎಚ್ಒ ಇನ್ನೂ ಮಾಡಿಲ್ಲ ಎಂದು ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಗೆ ತಡವಾಗಿ ಬಂದ ಅಧಿಕಾರಿಯನ್ನು ಹೊರಕಳಿಸಿದ ಡಿಸಿ :
ಈ ಸಂದರ್ಭ ಸಭೆಗೆ ಸುಮಾರು ಒಂದು ಗಂಟೆ ತಡವಾಗಿ ಆಗಮಿಸಿದ ವೆನ್ಲಾಕ್ ಆಸ್ಪತ್ರೆಯ ಆರ್ಎಂಒ (ಸ್ಥಾನಿಕ ವೈದ್ಯಾಧಿಕಾರಿ) ನೇರವಾಗಿ ವೇದಿಕೆಗೆ ತೆರಳಿ ಆಸೀನರಾಗಲು ಯತ್ನಿಸಿದಾಗ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂರವರು ಅವರನ್ನು ಯಾಕೆ ಬಂದದ್ದು ಎಂದು ಕೇಳಿದಾಗ ಅವರು ತಡವರಿಸುತ್ತಾ, ಸಭೆಗೆ ಬಂದಿದ್ದು ಎಂದು ಹೇಳಿದಾಗ ಅವರ ಕೈಯ್ಯಲ್ಲಿ ಸಭೆಗೆ ಸಂಬಂಧ ಪಟ್ಟ ಕಡತ ಇರದನ್ನು ಗಮನಿಸಿ ಸಿಟ್ಟುಗೊಂಡ ಜಿಲ್ಲಾಧಿಕಾರಿ,ಅಧಿಕಾರಿಯನ್ನು ಸಭೆಯಿಂದ ತೆರಳುವಂತೆ ಸೂಚಿಸಿದರು.
ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ರಾವ್, ಶಿಶು ಕಲ್ಯಾಣಾಧಿಕಾರಿ ಸಿಕಂದರ್ ಪಾಶಾ ಹಾಗೂ ಮತ್ತಿತ್ತರ ಸಂಬಂಧ ಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.