ಕುಂದಾಪುರ: ಗಂಗೊಳ್ಳಿ ಗ್ರಾಮಪಂಚಾಯತಿನ 33 ಸದಸ್ಯರ ಪೈಕಿ ಉಪಾಧ್ಯಕ್ಷರ ಸಹಿತ 25ಕ್ಕೂ ಅಧಿಕ ಸದಸ್ಯರ ಗೈರು ಹಾಜರಿಯ ನಡುವೆ ಹಾಗೂ ಬಿಗು ಪೊಲೀಸ್ ಬಂದೋಬಸ್ತ್ ನಡುವೆಯೇ ಗಂಗೊಳ್ಳಿ ಗ್ರಾಮಪಂಚಾಯತಿ ನೂತನ ಕಟ್ಟಡ ಮಂಗಳವಾರದಂದು ಉದ್ಘಾಟನೆಯಾಗಿದೆ.
ಹಿಂದಿನ ತಿಂಗಳು ಎಪ್ರಿಲ್ 4 ರಂದು ಉದ್ಘಾಟನೆಗೆ ದಿನ ನಿಗದಿಪಡಿಸಲಾಗಿದ್ದ ಪಂಚಾಯತ್ ಕಛೇರಿ ಉದ್ಘಾಟನೆ ಕಾರ್ಯಕ್ರಮವನ್ನು ಉಪಚುನಾವಣೆ ನೀತಿ ಸಂಹಿತೆ ಹಿನ್ನೆಲೆ ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಆದರೇ ಸದಸ್ಯರ ಯಾವುದೇ ಸಾಮಾನ್ಯ ಸಭೆ ಕರೆಯದೇ ಏಕಾಏಕಿ ಮೇ.10ರಂದು ಉದ್ಘಾಟನೆ ಕಾರ್ಯಕ್ರಮವನ್ನು ಏರ್ಪಡಿಸಿಸುವ ಮೂಲಕ ಪಂಚಾಯತಿ ಸದಸ್ಯರ ಹಾಗೂ ಜನರ ವಿಶ್ವಾಸವನ್ನು ಗಳಿಸದೇ ತಮ್ಮ ದುರುದ್ದೇಶಪೂರಿತ ನಿರ್ಧಾರವನ್ನು ಗ್ರಾಮಪಂಚಾಯತ್ ಅಧ್ಯಕ್ಷೆ ರೇಷ್ಮಾ ಅವರು ಕೈಗೊಂಡಿದ್ದು ಬೇಸರ ಮೂಡಿಸಿದೆ ಎಂದು ಆರೋಪಿಸಿದ ಗಂಗೊಳ್ಳಿ ಪಂಚಾಯತ್ ಉಪಾಧ್ಯಕ್ಷರ ಸಮೇತ ಹಲವು ಸದಸ್ಯರು ಕಾರ್ಯಕ್ರಮಕ್ಕೆ ಬಾರಲಿಲ್ಲ.
ಬಿಜೆಪಿ ಬೆಂಬಲಿತ ಸದಸ್ಯರೆಲ್ಲರ ಗೈರು: ಗಂಗೊಳ್ಳಿ ಗ್ರಾಮಪಂಚಾಯತಿಯ 33 ಸದಸ್ಯರ ಪೈಕಿ 20 ಮಂದಿ ಬಿಜೆಪಿ ಬೆಂಬಲಿತ ಹಾಗೂ 13 ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಆದರೇ ಪಂಚಾಯತ್ ನೂತನ ಕಟ್ಟಡ ಉದ್ಘಾಟನೆ ವಿಚಾರದಲ್ಲಿ ಪಂಚಾಯತಿ ಅಧ್ಯಕ್ಷರ ಏಕಾಏಕಿ ತೀರ್ಮಾನದಿಂದಾಗಿ ಅಧ್ಯಕ್ಷರದ್ದೇ ಪಕ್ಷ ಬಿಜೆಪಿಯ ಸರ್ವ ಸದಸ್ಯರು ಕಾರ್ಯಕ್ರಮಕ್ಕೆ ಗೈರಾದರು. ಅದರಲ್ಲಿಯೂ ಉಪಾಧ್ಯಕ್ಷ ಬಿಜೆಪಿ ಬೆಂಬಲಿತರಾದ ಮಹೇಶ್ ರಾಜ್ ಪೂಜಾರಿ ಕೂಡ ಮುನಿಸಿಕೊಂಡು ಕಾರ್ಯಕ್ರಮದತ್ತ ಬಾರಲಿಲ್ಲ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಏಳೆಂಟು ಮಂದಿ ಸದಸ್ಯರು ಮಾತ್ರ ಬಾಗಿಯಾಗಿಯುವ ಮೂಲಕ ಪಂಚಾಯತಿ ಒಳಗಿನ ವಿಚಾರ ಜನಸಮಾನ್ಯರಲ್ಲಿಯೂ ಗೊಂದಲವನ್ನುಂಟುಮಾಡಿತು.
ಜನರಿಗಿಂತ ಪೊಲೀಸರ ಸಂಖ್ಯೆ ಹೆಚ್ಚು….: ಇನ್ನು ಪಂಚಾಯತ್ ಕಟ್ಟಡ ಉದ್ಘಾಟನೆಗೆ ಅಸಾಮಧಾನವಿದ್ದ ಹಿನ್ನೆಲೆ ಪೊಲೀಸರು ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು. ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಗಂಗೊಳ್ಳಿ ಠಾಣೆ ಎಸ್.ಐ. ಸುಬ್ಬಣ್ಣ ಸಹಿತ ಮೂರ್ನಾಲ್ಕು ಠಾಣಾ ಉಪನಿರೀಕ್ಷಕರು, ಸಿಬ್ಬಂದಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ 2 ಡಿ.ಎ.ಆರ್. ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಬಂದ ಬೆರಣಿಕೆ ಮಂದಿಗಿಂತಲೂ ಪೊಲೀಸರ ಸಂಖ್ಯೆಯೇ ಜಾಸ್ಥಿಯಾಗಿದ್ದು ಜನರ ಇನ್ನಷ್ಟು ಚರ್ಚೆಗೆ ಕಾರಣವಾಯಿತು.
ಮನಸ್ತಾಪದ ನಡುವೆ ಉದ್ಘಾಟನೆ: ಇಷ್ಟೆಲ್ಲಾ ಗೊಂದಲಗಳ ನಡುವೆಯೂ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಗಂಗೊಳ್ಳಿ ಗ್ರಾಮ ಪಂಚಾಯತ್ನ ನೂತನ ಕಾರ್ಯಾಲಯ ಕಟ್ಟಡ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮಪಂಚಾಯತಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ ಜನರ ಕೆಲಸಗಳನ್ನು ಸೂಕ್ತ ಸಮಯದಲ್ಲಿ ಮಾಡಿಕೊಟ್ಟಾಗ ಜನರಿಗೆ ಪಂಚಾಯತ್ ಮೇಲೆ ನಂಬಿಕೆ, ವಿಶ್ವಾಸ ಮೂಡಲು ಸಾಧ್ಯವಾಗುತ್ತದೆ. ಗ್ರಾಮ ಪಂಚಾಯತ್ ಸದಸ್ಯರು ಪಕ್ಷಬೇಧ ಮರೆತು ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಬೇಕು. ಜನಸಂಖ್ಯೆ ಕಡಿಮೆ ಇರುವ ಕಾರಣಕ್ಕೆ ಗಂಗೊಳ್ಳಿ ಗ್ರಾಮ ಪಂಚಾಯತ್ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಲು ಸರಕಾರ ಸಮ್ಮತಿ ಸೂಚಿಸಿಲ್ಲ.ಗಂಗೊಳ್ಳಿ ಬಂದರಿನ 102 ಕೋಟಿ ರೂ. ವೆಚ್ಚದ ಬ್ರೇಕ್ ವಾಟರ್ ಕಾಮಗಾರಿಗೆ ರಾಜ್ಯದ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದ ಅವರು ಗ್ರಾಮಪಂಚಾಯತಿ ಸವ್ರಾಂಗೀಣ ಅಭಿವ್ರದ್ಧಿ ಕಡೆ ಗಮನ ವಹಿಸಬೇಕಾದ ಚುನಾಯಿತ ಸದಸ್ಯರು ಈ ರೀತಿ ವರ್ತನೆ ಮಾಡುವ ವಿಚಾರ ಗೊತ್ತಿದ್ದರೇ ಕಾರ್ಯಕ್ರಮಕ್ಕೆ ಬರುತ್ತಿರಲಿಲ್ಲ ಎಂದರು.
ಮುಖ್ಯ ಅತಿಥಿಯಾಗಿದ್ದ ವಿಧಾನಪರಿಷತ್ ಸದಸ್ಯ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಗ್ರಾಪಂ ಸದಸ್ಯರು ತಮ್ಮ ಜವಾಬ್ದಾರಿಗಳನ್ನು ಅರಿತು ಕೆಲಸ ನಿರ್ವಹಿಸಬೇಕು. ಸರಕಾರ ಗ್ರಾಪಂ.ಗಳಿಗೆ ಸಂವಿಧಾನಬದ್ಧ ಅಧಿಕಾರ ನೀಡಿದ್ದು, ಚುನಾಯಿತ ಸದಸ್ಯರು, ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಮದ ಅಭಿವ್ರದ್ಧಿ ವಿಚಾರದಲ್ಲಿ ರಾಜಕೀಯ ಬೇಡ ಎಂದು ಪರೋಕ್ಷವಾಗಿ ಎಲ್ಲರಿಗೂ ಟಾಂಗ್ ನೀಡಿದರು.
ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಷ್ಮಾ ಖಾರ್ವಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಜಿಪಂ ಸದಸ್ಯೆ ಶೋಭಾ ಜಿ.ಪುತ್ರನ್, ತಾಪಂ ಸದಸ್ಯ ರಾಜು ದೇವಾಡಿಗ, ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಗಂಗೊಳ್ಳಿಯ ಉದ್ಯಮಿ ಎಚ್.ಗಣೇಶ ಕಾಮತ್, ಗಂಗೊಳ್ಳಿ ಚರ್ಚ್ ಧರ್ಮಗುರು ರೆ.ಫಾ. ಅಲ್ಭರ್ಟ್ ಕ್ರಾಸ್ತಾ, ನಿವೃತ್ತ ಮುಖ್ಯೋಪಾಧ್ಯಾಯ ಶಬ್ಬೀರ್ ಸಾಹೇಬ್, ಭೂಸೇನಾ ನಿಗಮದ ಎಇ ಹೇಮಂತ್ ಮೊದಲಾದವರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ ಡಿಸೋಜ ಸ್ವಾಗತಿಸಿದರು. ದಿನೇಶ ಶೇರುಗಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶೇಖರ್ ಜಿ. ಸಹಕರಿಸಿದರು. ಪತ್ರಕರ್ತ ಬಿ.ರಾಘವೇಂದ್ರ ಪೈ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಶ್ಯಾನುಭಾಗ್ ವಂದಿಸಿದರು.