ಕೈಕಂಬ, ಮೇ .06: ಖಾಸಗಿ ವೇಗದೂತ ಬಸ್ಸೊಂದು ಹಠಾತ್ ಬ್ರೇಕ್ ಹಾಕಿದ ಪರಿಣಾಮ ಟಿಪ್ಪರ್ ಲಾರಿಯೊಂದರ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಬಸ್ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗೊಂಡ ಘಟನೆ ಕೈಕಂಬ ಜಂಕ್ಷನ್ನಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ಮಂಗಳೂರಿನಿಂದ ಮೂಡಬಿದ್ರೆ ಕಡೆ ತೆರಳುತ್ತಿದ್ದ ಭಾರತ್ ಹೆಸರಿನ ಬಸ್ ಅಪಘಾತಕ್ಕೀಡಾಗಿದ್ದು, ಬಸ್ನಲ್ಲಿದ್ದ ಮಗು ಸಮೇತ ಇತರರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಟಿಪ್ಪರ್ ಚಾಲಕ ಏಕಮುಖ ರಸ್ತೆಯಲ್ಲಿ ಬ್ರೇಕ್ ಹಾಕಿದ್ದು, ಇದರ ಅರಿವಿರದೆ ಹಿಂದಿನಿಂದ ಬರುತ್ತಿದ್ದ ಬಸ್ ಚಾಲಕ ಟಿಪ್ಪರ್ಗೆ ಡಿಕ್ಕಿ ಹೊಡೆಸಿದ್ದಾನೆ. ಘಟನೆಯಲ್ಲಿ ನಿಯಂತ್ರಣ ಕಳೆದುಕೊಂಡ ಟಿಪ್ಪರ್ ಡಿವೈಡರ್ ಏರಿ ನಿಂತಿದ್ದರೆ ಬಸ್ ಸಾರ್ವಜನಿಕರು ಬಸ್ ಕಾಯುವ ಸ್ಥಳಕ್ಕೆ ನುಗ್ಗಿದೆ.
ಮುಂಜಾನೆ 6 ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು, ಈ ವೇಳೆ ಪಾದಚಾರಿಗಳು, ಬಸ್ ಕಾಯುವವರು ಹೆಚ್ಚಿನ ಸಂಖ್ಯೆಯಲ್ಲಿ ಇರದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ. ಬಜ್ಪೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.